ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಮೂರ್ಖತನದ ಆದೇಶ - ಭಾರತ ರಾಷ್ಟ್ರವೇ ಅಲ್ಲ: ನಾರಾಯಣನ್
ಹೊಸದಿಲ್ಲಿ, ಡಿ.27: ಸಿನೆಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯ ಮಾಡಿರುವ ಸುಪ್ರೀಂಕೋರ್ಟ್ನ ಆದೇಶ ‘ಮೂರ್ಖತನದ್ದೆಂದು’ ಇತಿಹಾಸಕಾರ ಎಂಜಿಎಸ್ ನಾರಾಯಣನ್ ಟೀಕಿಸಿದ್ದಾರೆ. ನ್ಯಾಯಾಂಗದ ಅತಿ ಕೈಚಾಚುವಿಕೆಗೆ ಇದೊಂದು ಉತ್ತಮ ಉದಾಹರಣೆ ಎಂದಿರುವ ಅವರು, ಈ ಆದೇಶವನ್ನು ಜನರು ವಿಫಲಗೊಳಿಸದಿದ್ದರೂ ಅದು ತಾನೇ ತಾನಾಗಿ ಸೋಲುವುದರಿಂದ ಅದನ್ನು ಸಮರ್ಥಿಸುವ ಅಥವಾ ಟೀಕಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಮನೋರಂಜನೆಗಾಗಿ ಸಿನೆಮಾಗಳಿಗೆ ಬರುವ ಜನರು ರಾಷ್ಟ್ರೀಯತೆಯ ಬಲಾತ್ಕಾರದ ಹೇರಿಕೆಯನ್ನು ಬಯಸುವುದಿಲ್ಲ. ರಾಷ್ಟ್ರೀಯತೆಯನ್ನು ಹೇರುವ ಈ ಕ್ರಮ ಯಶಸ್ವಿಯಾಗದು. ವಾಸ್ತವವಾಗಿ ಅದು ವಿಫಲವಾಗಲಿದೆಯೆಂದು ಭಾರತೀಯ ಇತಿಹಾಸ ಸಂಶೋಧನ ಮಂಡಳಿಯ(ಐಸಿಎಚ್ಆರ್) ಮಾಜಿ ಅಧ್ಯಕ್ಷ ನಾರಾಯಣನ್ ‘ಮಾತೃಭೂಮಿ’ ವಾರಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಭಾರತವು ಹೆಚ್ಚು ಒಂದು ನಾಗರಿಕತೆಯಾಗಿದ್ದು, ಅದಕ್ಕೆ ರಾಷ್ಟ್ರೀಯತೆ ಇಲ್ಲ. ನಾವಿದನ್ನು ರಾಷ್ಟ್ರೀಯತೆಗಳ ಒಕ್ಕೂಟವೆಂದು ಕರೆಯಬಹುದು. ಆದರೆ, ರಾಷ್ಟ್ರವೆಂದಲ್ಲ. ತಾನಿದನ್ನು ಒಂದು ರಾಷ್ಟ್ರವೆಂದು ಎಂದೂ ಭಾವಿಸಿಲ್ಲವೆಂದು ಪ್ರಾಚೀನ ಇತಿಹಾಸದ ಕುರಿತು ಭಾರತದ ಉನ್ನತ ಅಧಿಕಾರವಾಣಿಯಾಗಿರುವ ಅವರು ಅಭಿಪ್ರಾಯಿಸಿದ್ದಾರೆ.
ರಾಷ್ಟ್ರೀಯತೆಯ ಭಾವನೆಯಿದ್ದಾಗ ಮಾತ್ರ ರಾಷ್ಟ್ರಗೀತೆ ಪ್ರಸ್ತುತವಾಗುತ್ತದೆ. ಆದರೆ, ಈ ಭಾವನೆಯನ್ನು ಬಲವಂತದಿಂದ ಸೃಷ್ಟಿಸಲಾಗದು ಅದು ಸ್ವಾಭಾವಿಕವಾಗಿ ಬರಬೇಕೆಂದು ಹೇಳಿರುವ ನಾರಾಯಣನ್, ಈ ಭಾವನೆಗಳನ್ನು ಹೇರುವ ಪ್ರಯತ್ನವು ಅಂತ್ಯದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆಂದು ಎಚ್ಚರಿಸಿದ್ದಾರೆ.
ಈ ಕ್ರಮವು ತನಗೆ ‘ಸರ್ವಾಧಿಕಾರಿ ಅಲ್ಪಸಂಖ್ಯಾತತೆಯೊಂದನ್ನು’ ನೆನಪಿಸುತ್ತದೆ. ಅದು ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ವಿರುದ್ಧವಾದುದು. ನಮ್ಮ ದೇಶ ಹಾಗೂ ಅದರ ಲಾಂಛನಗಳ ಕುರಿತು ಗೌರವವು ನ್ಯಾಯಾಂಗದ ಬಲೋದ್ಬಂಧದಿಂದ ಸಾಧಿಸಲ್ಪಡುವಂತಹ ವಿಷಯವಲ್ಲವೆಂದು ನಮ್ಮ ಸಂವಿಧಾನದ 51(ಎ) ಪರಿಚ್ಛೇದವು ಸ್ಪಷ್ಟವಾಗಿ ಹೇಳಿದೆ. ನಮ್ಮ ಸಂಸ್ಕೃತಿಯು ನಮಗೆ ಸಹಿಷ್ಣುತೆಯನ್ನು ಕಲಿಸುತ್ತದೆ ಹಾಗೂ ನಮ್ಮ ಆಧ್ಯಾತ್ಮಿಕ ಒಲವು ಸಹಿಷ್ಣುತೆಯನ್ನು ತೆರೆದಿರಿಸುತ್ತದೆಂದು ಎನ್ಡಿಎ ಆಡಳಿತದ ಕಾಲದಲ್ಲಿ ಐಸಿಎಚ್ಆರ್ನ ಅಧ್ಯಕ್ಷರಾಗಿ ನೇಮಿಸಲ್ಪಟ್ಟಿದ್ದ ನಾರಾಯಣನ್ ಹೇಳಿದ್ದಾರೆ.