ಹಳಿ ತಪ್ಪಿದ ಮುಂಬೈ ಲೋಕಲ್ ರೈಲು
ಮುಂಬೈ, ಡಿ.29: ಮುಂಬೈನ ಉಪನಗರ ಕಲ್ಯಾಣ್ ಹಾಗೂ ವಿಠಲವಾಡಿಯ ನಡುವೆ ಗುರುವಾರ ಬೆಳಗ್ಗೆ ಕುರ್ಲಾ-ಅಂಬರ್ನಾಥ್ ನಡುವೆ ಸಂಚರಿಸುತ್ತಿದ್ದ ಲೋಕಲ್ ರೈಲಿನ ಐದು ಬೋಗಿಗಳು ಹಳಿ ತಪ್ಪಿದೆ. ಇದರಿಂದ ಸೆಂಟ್ರಲ್ ರೈಲ್ವೆಯ ಲೋಕಲ್ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.
ಕರ್ಜತ್ಗೆ ತೆರಳುತ್ತಿದ್ದ ಲೋಕಲ್ ರೈಲು ಬೆಳಗ್ಗೆ 5:53ಕ್ಕೆ ಹಳಿ ತಪ್ಪಿದೆ. ಆದರೆ,ಇದರಿಂದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಕಲ್ಯಾಣ್-ಕರ್ಜತ್ ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಸೆಂಟ್ರಲ್ ರೈಲ್ವೆ ತಿಳಿಸಿದೆ.
ಮುಂಬೈನಲ್ಲಿ ಬೆಳಗ್ಗಿನ ಅವಧಿಯಲ್ಲಿ ಲೋಕಲ್ ರೈಲಿನಲ್ಲಿ ಪ್ರಯಾಣಿಕರು ಅಧಿಕ ಪ್ರಮಾಣದಲ್ಲಿ ಸಂಚರಿಸುತ್ತಿರುತ್ತಾರೆ. ಅಂಬರ್ನಾಥ್-ಕರ್ಜತ್ ನಡುವೆ ರೈಲು ಸಂಚಾರ ಸ್ಥಗಿತಗೊಂಡಿರುವ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸುವಂತೆ ಕಲ್ಯಾಣ್-ಡೊಂಬಿವಲಿ ಕಾರ್ಪೊರೇಶನ್ಗೆ ಸೆಂಟ್ರಲ್ ರೈಲ್ವೆ ವಿನಂತಿಸಿದೆ.
ಉತ್ತರಪ್ರದೇಶದ ಕಾನ್ಪುರದ ರೂರಾ ರೈಲ್ವೆ ಸ್ಟೇಶನ್ನ ಬಳಿ ಅಜ್ಮೇರ್-ಸಿಯಾಲ್ಡಾ ಎಕ್ಸ್ಪ್ರೆಸ್ ಹಳಿ ತಪ್ಪಿದ ಮರುದಿನವೇ ಈ ಘಟನೆ ನಡೆದಿದೆ.