ಥಾಣೆ: ಹಳ್ಳಿ ತಪ್ಪಿದ ಉಪನಗರ ರೈಲು
Update: 2016-12-29 19:57 IST
ಮುಂಬೈ, ಡಿ.29: ಥಾಣೆ ಜಿಲ್ಲೆಯ ಕಲ್ಯಾಣ್ ಹಾಗೂ ವಿಠ್ಠಲ್ವಾಡಿ ನಿಲ್ದಾಣಗಳ ನಡುವೆ ಇಂದು ಕುರ್ಲಾ-ಅಂಬರ್ನಾಥ್ ಉಪನಗರ ರೈಲಿನ 5 ಬೋಗಿಗಳು ಹಳಿತಪ್ಪಿವೆ. ಇದರಿಂದಾಗಿ ಜನನಿಬಿಡ ಸೆಂಟ್ರಲ್ ಮಾರ್ಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡು ಮುಂಜಾನೆಯ ಸಮ್ಮರ್ದದ ಅವಧಿಯಲ್ಲಿ ಅಪಾರ ಸಂಖ್ಯೆಯ ನಿತ್ಯ ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ.
ಮುಂಜಾನೆ 5:53ರ ವೇಳೆ ಅಂಬರನಾಥಕ್ಕೆ ಹೋಗುತ್ತಿದ್ದ ಕುರ್ಲಾ ಸ್ಥಳೀಯ ರೈಲಿನ 5 ಬೋಗಿಗಳು ಹಳಿಗಳಿಂದ ಜಾರಿವೆ. ಆದರೆ, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ರೈಲು ಅಪಘಾತದಿಂದಾಗಿ ಮಧ್ಯ ರೈಲ್ವೆ ಅಧಿಕಾರಿಗಳು ಕಲ್ಯಾಣ್ ಹಾಗೂ ಅಂಬರನಾಥದ ನಡುವಿನ ಉಪನಗರ ರೈಲುಗಳನ್ನು ಅಮಾನತುಗೊಳಿಸಬೇಕಾಯಿತು ಮತ್ತು ದೂರ ಪ್ರಯಾಣದ ಕೆಲವು ರೈಲುಗಳ ಮಾರ್ಗ ಬದಲಾಯಿಸಬೇಕಾಗಿ ಬಂತು.