ನಳಿನ್ ಕ್ಷಮೆ ಯಾಚನೆಗೆ ಖಾದರ್ ಆಗ್ರಹ
ಮಂಗಳೂರು, ಜ.2: ಜಿಲ್ಲೆಗೆ ಬೆಂಕಿ ಹಚ್ಚಲಾಗುವುದು ಎಂದು ಹೇಳುವ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕೆಂದು ಹೇಳಿದ್ದಾರೆ.
ಸಂಸದರು ಜಿಲ್ಲೆಯ ಏಕತೆ, ಸಾಮರಸ್ಯ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಮಾತನಾಡಬೇಕೇ ಹೊರತು ಬೆಂಕಿ ಹಚ್ಚುವಂತಹ ಹೇಳಿಕೆ ನೀಡಿರುವುದು ಶೋಭೆ ತರುವಂತದ್ದಲ್ಲ. ಇಂತಹ ಹೇಳಿಕೆಗಳ ಮೂಲಕ ಜಿಲ್ಲೆಯಲ್ಲಿ ಸಂಸದರು ಹಿಂಸೆಗೆ ಪ್ರಚೋಧನೆ ನೀಡುವ ಕೆಲಸ ಮಾಡಿದ್ದಾರೆ. ಬೆಂಕಿ ಹಚ್ಚುವವರು ಬೇಕಾ ಅಥವಾ ನಂದಿಸುವವರು ಬೇಕಾ ಎಂದು ಜನತೆ ನಿರ್ಧರಿಸಬೇಕಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲಿ ರಾಜಕೀಯ ಸಲ್ಲದು. ಎಲ್ಲರೂ ಒಗ್ಗಟ್ಟಾಗಿ ಈ ವಿಷಯದಲ್ಲಿ ನೈತಿಕ ಸ್ಥೈರ್ಯ ನೀಡಬೇಕು. ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಎಲ್ಲರ ಬೇಡಿಕೆ ಇದೆ. ಜನಪ್ರತಿನಿಧಿಗಳು ಪೊಲೀಸ್ ಇಲಾಖೆಯ ಕೆಲಸವನ್ನು ಪರಿಶೀಲಿಸಬೇಕು. ಆರೋಪಿಗಳ ಪತ್ತೆಗೆ ಸಹಕರಿಸಬೇಕು. ಆದರೆ, ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯುವುದಲ್ಲ. ಈ ಪ್ರಕರಣವನ್ನು ಸಿಓಡಿಗೆ ವಹಿಸಲು ಈಗಾಗಲೇ ಪೊಲೀಸರೊಂದಿಗೆ ಹಾಗೂ ಕಾರ್ತಿಕ್ರಾಜ್ ಹೆತ್ತವರೊಂದಿಗೆ ಚರ್ಚಿಸಲಾಗಿದೆ. ಗೃಹ ಸಚಿವರನ್ನೂ ಈ ಸಂಬಂಧ ಕೋರಲಾಗುವುದು ಎಂದವರು ಹೇಳಿದ್ದಾರೆ.