ಕೊಲ: 50 ಎಕರೆಗೂ ಅಧಿಕ ಹುಲ್ಲುಗಾವಲು ಪ್ರದೇಶ ಬೆಂಕಿಗಾಹುತಿ

Update: 2017-01-02 18:49 GMT

ಉಪ್ಪಿನಂಗಡಿ, ಜ.2: ಕೊಲದ ಪಶು ಸಂಗೋಪನಾ ಕ್ಷೇತ್ರ ವ್ಯಾಪ್ತಿಯ ಸುಮಾರು 50 ಎಕರೆಗೂ ಅಧಿಕ ಹುಲ್ಲುಗಾವಲು ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಜ.2ರಂದು ಮಧ್ಯಾಹ್ನ ನಡೆದಿದೆ. ಗಂಡಿಬಾಗಿಲು ರಸ್ತೆ ಬದಿಯಲ್ಲಿ ಕೊಲ ಪಶು ಸಂಗೋಪನಾ ಕ್ಷೇತ್ರದೊಳಗಿನ ಆನೆಗುಂಡಿ ಸಂಪರ್ಕದ ಮೋರಿ ಬಳಿಯಿಂದ ಹೊತ್ತಿಕೊಂಡ ಬೆಂಕಿಯು ಕ್ಷಣಾರ್ಧದಲ್ಲಿ ಹರಡಿಕೊಂಡು ಗಂಡಿಬಾಗಿಲು ಗುಡ್ಡವನ್ನು ಆವರಿಸಿಕೊಂಡು ಮುಂದೆ ಆನೆಗುಂಡಿ, ಕೊಲ ಗೇಟ್ ಬಳಿಯ ಗುಡ್ಡದ ವರೆಗೆ ಹರಡಿ ಸುಮಾರು 50 ಎಕ್ರೆಗೂ ಅಧಿಕ ಪ್ರದೇಶದ ಹುಲ್ಲುಗಾವಲುಗಳನ್ನು ತನ್ನ ಕೆನ್ನಾಲಿಗೆಗೆ ಆಹುತಿ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ವರ್ಷಂಪ್ರತಿ ಇಲ್ಲಿ ಬೆಂಕಿ ಕಾಣಿಸಿಕೊಂಡು ಹುಲ್ಲುಗಾವಲು ಸುಟ್ಟು ಭಸ್ಮವಾಗುವಂತಹದ್ದು ಸರ್ವೇ ಸಾಮಾನ್ಯವಾಗಿದೆ. ದಾರಿಯಲ್ಲಿ ಹೋಗುವವರು ಬೀಡಿ, ಸಿಗರೇಟು ಸೇದಿ ಮುಳಿಹುಲ್ಲು ಮೇಲೆ ಹಾಕಿ ಹೋಗುವುದರಿಂದ ಹುಲ್ಲುಗಾವಲಿಗೆ ಬೆಂಕಿ ಹಿಡಿದರೆ, ಕೆಲ ಬಾರಿ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವುದು ನಡೆಯುತ್ತದೆ. ಇನ್ನು ಕೆಲವು ಮಕ್ಕಳು ಆಟವಾಡುತ್ತಾ ಬೆಂಕಿ ಕೊಡುವುದೂ ನಡೆಯುತ್ತದೆ. ಬೇಸಿಗೆಯಲ್ಲಿ ಗುಡ್ಡದ ಹುಲ್ಲುಗಳು ಚೆನ್ನಾಗಿ ಒಣಗಿರುವ ಕಾರಣ ವೇಗವಾಗಿ ಬೆಂಕಿ ಹರಡುತ್ತದೆ. ಜೀವ ಜಂತುಗಳು ಸಜೀವ ದಹನ: ಈ ಮಧ್ಯೆ ಹುಲ್ಲುಗಾವಲಿನಲ್ಲಿ ಆಶ್ರಯ ಪಡೆದುಕೊಂಡಿದ್ದ ಮೊಲ, ಹಾವು ಮೊದಲಾದ ಜೀವಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬೆಂದು ಹೋಗಿದ್ದು ಕಂಡು ಬಂದಿದೆ. ಕೆಲವೊಂದು ಹಾವುಗಳು ಅರೆ ಬೆಂದ ಸ್ಥಿತಿಯಲ್ಲಿ ಜೀವ ರಕ್ಷಣೆ ಸಲುವಾಗಿ ಎಲ್ಲೆಡೆ ಓಡಿ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಿಂದೆಲ್ಲಾ ಮಳೆಗಾಲ ಮುಗಿದು ಬಿಸಿಲು ಆವರಿಸಿ ಮುಳಿಹುಲ್ಲು ಒಣಗುತ್ತಿದ್ದಂತೆ ಮುಳಿಹುಲ್ಲು ರಕ್ಷಣೆ ಸಲುವಾಗಿ ಕ್ಷೇತ್ರದ ಸುತ್ತಲೂ ಬೆಂಕಿ ಹಾಕಿ ಮತ್ತೆ ಬೆಂಕಿ ಹರಡದಂತೆ ‘ಫೈರ್ ಬೆಲ್ಟ್’ ನಡೆಸುತ್ತಿದ್ದರು. ಆದರೆ ಈ ಬಾರಿ ಅದು ನಡೆಯದ ಕಾರಣ ಇಂದು ಈ ರೀತಿಯಾಗಿ ಹೊತ್ತಿ ಉರಿಯುವಂತಾಗಿದೆ. ಅಧಿಕಾರಿಗಳು ತಮ್ಮ ಜವಬ್ದಾರಿ ಮರೆತು ನಿರ್ಲಕ್ಷ ವಹಿಸಿದ್ದರಿಂದಲೇ ಇಷ್ಟೊಂದು ಪ್ರಮಾಣದ ಹುಲ್ಲುಗಾವಲು ಬೆಂಕಿಗಾಹುತಿಯಾಗಲು ಕಾರಣ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಈ ಹುಲ್ಲುಗಾವಲಿಗೆ ಬೆಂಕಿ ಬೀಳುವಂತದ್ದು ಸಾಮಾನ್ಯವಾಗಿದ್ದು, ಆದರೆ ಇಷ್ಟೊಂದು ಪ್ರದೇಶದಲ್ಲಿ ಹರಡುವುದಿಲ್ಲ. ಗರಿಷ್ಠ ಎಂದರೆ 5ರಿಂದ 10 ಎಕ್ರೆ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ, ಆದರೆ ಈ ಬಾರಿ 50ಕ್ಕೂ ಅಧಿಕ ಪ್ರದೇಶದಲ್ಲಿ ಬೆಂಕಿ ಆವರಿಸಿಕೊಳ್ಳುವಂತಾಗಿತ್ತು. ಪಶು ಸಂಗೋಪನಾ ಕ್ಷೇತ್ರದ ಸುತ್ತ ಅಗರು ನಿರ್ಮಿಸಿದ್ದು, ಯಾರೂ ಕೂಡಾ ಇದರ ಒಳಗೆ ಪ್ರವೇಶ ಮಾಡದಂತೆ ತಡೆ ನಿರ್ಮಿಸಲಾಗಿದೆ. ಹೀಗಾಗಿ ಹುಲ್ಲುಗಾವಲು ಕಣ್ಣಮುಂದೆಯೇ ಬೆಂಕಿಗೆ ಆಹುತಿ ಆಗುತ್ತಿದ್ದರೂ, ಕ್ಷೇತ್ರದ ಒಳಗಡೆ ಹೋಗಲು ಸಾಧ್ಯವಾಗದೆ ನೋಡುಗರು ಅಸಹಾಯಕರಾಗಿ ನೋಡುವಂತಾಯಿತು. ಹೀಗಾಗಿ ಹೆಚ್ಚು ಪ್ರದೇಶ ಬೆಂಕಿಗೆ ಆಹುತಿಯಾಗುವಂತಾಗಿದೆ ಎಂದು ಸಾರ್ವಜನಿಕರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಹುಲ್ಲುಗಾವಲಿಗೆ ಬೆಂಕಿ ಬಿದ್ದಿದೆ ಎಂದು ತಿಳಿಯುತ್ತಲೇ ಸ್ಥಳೀಯ ಸಾರ್ವಜನಿಕರು, ರಿಕ್ಷಾ ಚಾಲಕರು ಧಾವಿಸಿ ಬಂದು ಬೆಂಕಿ ನಂದಿಸಲು ಮುಂದಾದರು. ಬಳಿಕ ಬೆಳ್ತಂಗಡಿಯಿಂದ ಅಗ್ನಿಶಾಮಕ ದಳವೂ ಆಗಮಿಸಿದ್ದು, ಎಲ್ಲರೂ ಸುಮಾರು 1 ತಾಸು ಕಾಲ ಅವಿತರ ಶ್ರಮದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News