×
Ad

ಸೈಕಲ್ ಚಿಹ್ನೆ ನಮ್ಮದು : ಚುನಾವಣಾ ಆಯೋಗದೆದುರು ಅಖಿಲೇಶ್ ಬಣದ ಅಹವಾಲು

Update: 2017-01-03 20:11 IST

ಹೊಸದಿಲ್ಲಿ, ಜ.3: ತನ್ನ ನೇತೃತ್ವದ ಸಮಾಜವಾದಿ ಪಕ್ಷವೇ ನೈಜ ಪಕ್ಷ ಎಂದು ಘೋಷಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಸಿಂಗ್, ಪಕ್ಷದ ಅಧಿಕೃತ ಚಿಹ್ನೆಯಾದ ಸೈಕಲ್ ಚಿಹ್ನೆಯನ್ನು ತಮ್ಮ ನೇತೃತ್ವದ ಪಕ್ಷಕ್ಕೇ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಅಹವಾಲು ಸಲ್ಲಿಸಿದೆ.
ಈ ವೇಳೆ ಅಖಿಲೇಶ್‌ಗೆ ನಿಷ್ಠರಾಗಿರುವ ರಾಮ್‌ಗೋಪಾಲ್ ಯಾದವ್, ನರೇಶ್ ಅಗರ್ವಾಲ್ ಮತ್ತು ಕಿರಣ್‌ಮಯ್ ನಂದ ಜತೆಗಿದ್ದರು. ಈ ಮೂವರನ್ನೂ ಮುಲಾಯಂ ಸಿಂಗ್ ಪಕ್ಷದಿಂದ ಉಚ್ಛಾಟಿಸಿದ್ದರು.

ಶೇ.90ರಷ್ಟು ಜನ ನಮ್ಮನ್ನೇ ಬೆಂಬಲಿಸುತ್ತಿರುವ ಕಾರಣ ನಮ್ಮದೇ ನಿಜವಾದ ಸಮಾಜವಾದಿ ಪಕ್ಷ ಎಂದು ಮುಲಾಯಂ ಅವರ ಬಂಧುವೂ ಆಗಿರುವ ರಾಮ್‌ಗೋಪಾಲ್ ಯಾದವ್ ಚುನಾವಣಾ ಆಯೋಗವನ್ನು ಭೇಟಿಯಾದ ಬಳಿಕ ಸುದ್ದಿಗಾರೊಂದಿಗೆ ಮಾತನಾಡುತ್ತಾ ಹೇಳಿದರು.
 
ಸೋಮವಾರ ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಆಗಮಿಸಿದ್ದ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್, ತಾನು ಈಗಲೂ ಪಕ್ಷದ ಮುಖ್ಯಸ್ಥನಾಗಿಯೇ ಉಳಿದಿದ್ದು, ಅಖಿಲೇಶ್‌ರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿರುವ ವಿರೋಧಿ ಬಣದ ನಿರ್ಧಾರ ಪಕ್ಷದ ಸಂವಿಧಾನ ಪ್ರಕಾರ ಅಸಾಂವಿಧಾನಿಕ ಎಂದು ತಿಳಿಸಿದ್ದರು. ಇದೀಗ ಚೆಂಡು ಚುನಾವಣಾ ಆಯೋಗದ ಅಂಗಳದಲ್ಲಿದೆ. ಯಾವುದೇ ದಿನ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿರುವ ಕಾರಣ ಚುನಾವಣಾ ಆಯೋಗ ಹೆಚ್ಚು ವಿಳಂಬ ಮಾಡದೆ ಚಿಹ್ನೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಮಧ್ಯಂತರ ಕ್ರಮವಾಗಿ ಆಯೋಗವು ಸೈಕಲ್ ಚಿಹ್ನೆಯನ್ನು ತಡೆಹಿಡಿದು, ಎರಡೂ ಬಣಗಳೂ ಬೇರೆಯೇ ಚಿಹ್ನೆಯಡಿ ಸ್ಪರ್ಧಿಸುವ ಸೂತ್ರ ಮುಂದಿಡುವ ನಿರೀಕ್ಷೆಯಿದೆ. ಅಲ್ಲದೆ ಸಮಾಜವಾದಿ ಪಕ್ಷ ಎಂಬ ಹೆಸರು ಮತ್ತು ಸೈಕಲ್ ಚಿಹ್ನೆ ಯಾವ ಬಣಕ್ಕೆ ಸೇರಬೇಕು ಎಂಬುದು ಇತ್ಯರ್ಥಗೊಳ್ಳುವ ವರೆಗೆ, ಎರಡೂ ಪಕ್ಷಗಳೂ ಬೇರೆಯೇ ಹೆಸರಿನಲ್ಲಿ ಸ್ಪರ್ಧಿಸಬೇಕು ಎಂಬ ಆದೇಶವೂ ಹೊರಬೀಳುವ ಸಂಭವವಿದೆ.

  ಸೋಮವಾರ ಮಧ್ಯಾಹ್ನದಿಂದಲೂ ದಿಲ್ಲಿಯಲ್ಲಿ ಇದ್ದ ಮುಲಾಯಂ, ಇಂದು ಲಕ್ನೋಗೆ ವಾಪಸಾಗಿದ್ದು, ಮುಲಾಯಂ ನಿಕಟವರ್ತಿ ಮುಹಮ್ಮದ್ ಆಝಂಖಾನ್ ದಿಲ್ಲಿಗೆ ಆಗಮಿಸಿದ್ದಾರೆ. ಉಭಯ ಬಣಗಳ ಮಧ್ಯೆ ಸಂಭವಿಸಿದ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನ ಮುಂದುವರಿಸುವುದಾಗಿ ಅಜಂಖಾನ್ ತಿಳಿಸಿದ್ದಾರೆ. ಪಕ್ಷದಲ್ಲಿ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ನಾಯಕ ಎಂದೇ ಬಣ್ಣಿಸಲ್ಪಟ್ಟಿರುವ ಆಝಂಖಾನ್, ಪಕ್ಷದ ಉಭಯ ಬಣಗಳಲ್ಲೂ ಗುರುತಿಸಿಕೊಳ್ಳದೆ ನಿರ್ಲಿಪ್ತ ಧೋರಣೆ ತಳೆದಿದ್ದಾರೆ.

 ಈ ಮಧ್ಯೆ, ಆಯೋಗ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸುಮಾರು 4 ತಿಂಗಳಾವಧಿ ಬೇಕಾಗಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಎರಡೂ ಬಣ ಒಗ್ಗೂಡುವ ಸಾಧ್ಯತೆಯಿದೆ: ಆಝಂ ಖಾನ್
ಮುಲಾಯಂ ಸಿಂಗ್ ಅವರಿಗೆ ನಿಷ್ಠರಾಗಿರುವ ಬಣ ಹಾಗೂ ಅಖಿಲೇಶ್‌ಗೆ ನಿಷ್ಠರಾಗಿರುವ ಬಣಗಳು ಈಗಲೂ ಒಗ್ಗೂಡುವ ಸಾಧ್ಯತೆಯಿದೆ ಎಂದು ಎಸ್‌ಪಿ ಪಕ್ಷದ ಹಿರಿಯ ಮುಖಂಡ ಆಝಂಖಾನ್ ತಿಳಿಸಿದ್ದಾರೆ.
 ಯಾವುದೂ ಅಸಾಧ್ಯವಲ್ಲ. ಮೊನ್ನೆ ಅವರ ಅಮಾನತು ನಿರ್ಧಾರ ಹಿಂಪಡೆಯಲಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ . ಈಗಲೂ ಹಾಗೆಯೇ.. ಯಾವುದೂ ಅಸಾಧ್ಯವಲ್ಲ ಎಂದು ಆಝಂಖಾನ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News