×
Ad

ಉಡುಪಿಯ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಜ.6ಕ್ಕೆ ಬೃಹತ್ ಪ್ರತಿಭಟನೆ

Update: 2017-01-03 20:48 IST

ಉಡುಪಿ, ಜ.3: ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಅವರು ತನ್ನದೇ ಸ್ವಂತದ್ದಾದ 4.07 ಎಕರೆ ಜಾಗದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಿ ಕೊಟ್ಟ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ದುಬೈಯಲ್ಲಿ ನೆಲೆಸಿರುವ ಉಡುಪಿಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ನಿರ್ಧರಿಸಿರುವುದನ್ನು ವಿರೋಧಿಸಿ ಜಿಲ್ಲೆಯ 12ಕ್ಕೂ ಅಧಿಕ ಸಂಘಟನೆಗಳು ಸೇರಿ ರಚಿಸಿದ ನಾಗರಿಕ ಒಕ್ಕೂಟ ಜ.6ರ ಶುಕ್ರವಾರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಮಂಗಳವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಹೋರಾಟ ಸಮಿತಿಯ ಸಂಚಾಲಕರಾದ ಡಾ.ಪಿ.ವಿ.ಭಂಡಾರಿ ಅವರು ಈ ವಿಷಯ ತಿಳಿಸಿದರು.

ಜನ ಕಲ್ಯಾಣದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯ ಸರಕಾರ ತೆಗೆದುಕೊಂಡಿರುವ ಈ ನಿರ್ಧಾರದ ವಿರುದ್ಧ ಉಡುಪಿಯ ಜನತೆ ಈಗಾಗಲೇ ಪಕ್ಷಬೇಧವಿಲ್ಲದೇ ಸಾರ್ವಜನಿಕ ಪ್ರತಿಭಟನೆ ನಡೆಸಿದೆ. ಆದರೆ ಸರಕಾರ ಈ ಪ್ರತಿರೋಧವನ್ನು ಲೆಕ್ಕಿಸದೇ, ತನ್ನ ಏಕಪಕ್ಷೀಯ ನಿರ್ಧಾರಗಳನ್ನು ಮುಂದುವರಿಸಿ ಅತ್ಯವಸರದಲ್ಲಿ ಬೇಕಾದ ಎಲ್ಲಾ ಪರವಾನಿಗೆಗಳನ್ನು ನೀಡಲು ತರಾತುರಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದವರು ದೂರಿದರು.

ಹೀಗಾಗಿ ಉಡುಪಿ ಸರಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕುರಿತಂತೆ ರಾಜ್ಯ ಸರಕಾರದ ಜನವಿರೋಧಿ ನಡೆಯನ್ನು ವಿರೋಧಿಸಿ ಒಕ್ಕೂಟದ ವತಿಯಿಂದ ಈ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4:30ಕ್ಕೆ ಜೋಡುಕಟ್ಟೆಯಿಂದ ಉಡುಪಿಯ ಚಿತ್ತರಂಜನ್ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಅಲ್ಲಿ ಬಹಿರಂಗ ಪ್ರತಿಭಟನಾ ಸಭೆಯನ್ನು ನಡೆಸಿ ಸರಕಾರದ ಕ್ರಮವನ್ನು ಖಂಡಿಸಲಾಗುವುದು ಎಂದವರು ತಿಳಿಸಿದರು.

ಪ್ರತಿಭಟನೆಯಲ್ಲಿ ಹಾಜಿ ಅಬ್ದುಲ್ಲಾ ಅವರ ಸೋದರ ಸಂಬಂಧಿಯಾದ ಖುರ್ಷಿದ್ ಅಹಮ್ಮದ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ, ದಲಿತ ದಮನಿತರ ಸ್ವಾಭಿಮಾನಿ ಸಮಿತಿ ಉಡುಪಿ, ಸಿಪಿಐ, ಸಿಪಿಐಎಂ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಉಡುಪಿ ಜಿಲ್ಲಾ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ, ಎಸ್‌ಡಿಪಿಐ, ಸಿಐಟಿಯು, ಎಐಟಿಯುಸಿ, ಎಸ್‌ಎಫ್‌ಐ, ಡಿವೈಎಫ್‌ಐ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ, ಕೆಥೋಲಿಕ್ ಸಭಾ ಉಡುಪಿ ಪ್ರದೇಶ್, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟ, ಜಮಾತ್-ಎ-ಇಸಾಮಿ ಹಿಂದ್, ಎಸ್‌ಐಓ, ಮುಸ್ಲಿಂ ವೆಲ್‌ಫೇರ್ ಅಸೋಸಿಯೇಷನ್ ಉಡುಪಿ, ಕಮ್ಯುನಿಟಿ ಡೆವಲಪ್‌ಮೆಂಟ್ ಫೋರಂ, ಸಮ್ಮಾನ್ ಕೌನ್ಸಿಲಿಂಗ್ ಸೆಂಟರ್ ಹಾಗೂ ಸಾಲಿಡ್ಯಾರಿಟಿ ಯೂಥ್ ಮೂವ್ಮೆಂಟ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಪಾಲ್ಗೊಳ್ಳಲಿವೆ.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲಕರಾದ ಸಿಪಿಎಂನ ಬಾಲಕೃಷ್ಣ ಶೆಟ್ಟಿ, ಕೋಸೌವೇಯ ಕೆ.ಫಣಿರಾಜ್, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಖಲೀಲ್ ಅಹ್ಮದ್, ಆರ್‌ಟಿಐ ಕಾರ್ಯಕರ್ತ ಯೋಗೇಶ್ ಶೇಟ್, ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಅಲ್ಲದೇ ಜಿ.ರಾಜಶೇಖರ್, ಕೆ.ವಿ.ಭಟ್, ವಂ.ವಿಲಿಯಂ ಮಾರ್ಟಿಸ್, ಹುಸೇನ್ ಕೋಡಿಬೆಂಗ್ರೆ, ಇಕ್ಬಾಲ್ ಮನ್ನಾ, ಕಾಸಿಂ ಬಾರ್ಕೂರು ಮುಂತಾದವರು ಉಪಸ್ಥಿತರಿದ್ದರು.

ಹೋರಾಟದೊಂದಿಗೆ ನ್ಯಾಯಾಲಯದ ಕಟಕಟೆಗೆ

ನಾವು ಯಾವುದೇ ಕಾರಣಕ್ಕೂ ಕಳೆದ ಎಂಟು ದಶಕಗಳಿಂದ ಬಡಜನರ ಸಂಜೀವಿನಿಯಾಗಿರುವ ಸರಕಾರಿ ಆಸ್ಪತ್ರೆಯೊಂದನ್ನು ಉನ್ನತ ದರ್ಜೆಗೇರಿಸಲು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಅದನ್ನು ಖಾಸಗೀಯವರಿಗೆ 30 ವರ್ಷ ಲೀಸ್‌ಗೆ ನೀಡಲು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ತರಾತುರಿಯಿಂದ ನಡೆದಿರುವ ಪ್ರಯತ್ನಗಳನ್ನು ವಿರೋಧಿಸುತ್ತಿದ್ದೇವೆ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದರು.

 ಗುತ್ತಿಗೆ ವಹಿಸಿಕೊಳ್ಳುವ ಕಂಪೆನಿಯ ಹಿನ್ನೆಲೆ, ಅನುಭವ, ಸಾಮರ್ಥ್ಯದ ಬಗ್ಗೆ ಕೂಲಂಕಷ ತನಿಖೆ ನಡೆಸದೇ ಕೇವಲ ಎರಡು ತಿಂಗಳ ಅಂತರದಲ್ಲಿ ಕ್ಯಾಬಿನೆಟ್ ಒಪ್ಪಿಗೆ ಪಡೆದು ಶಿಲಾನ್ಯಾಸ ನಡೆಸಿರುವುದು ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ಇಡೀ ಪ್ರಕ್ರಿಯೆ ಕುರಿತಂತೆ ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದೇವೆ. ನಾವು ಮಾಹಿತಿ ಹಕ್ಕು ಕಾಯ್ದೆ ಮೂಲಕ ಕೇಳಿದ ದಾಖಲೆಗಳನ್ನು ನೀಡಲು ವಿವಿಧ ಇಲಾಖೆಗಳು ವಿಳಂಬ ತಂತ್ರ ಅನುಸರಿಸುತ್ತಿವೆ. ಹಲವು ಅರ್ಜಿಗಳಿಗೆ ಬೇಜವಾಬ್ದಾರಿ ಉತ್ತರಗಳನ್ನು ನೀಡಲಾಗಿದೆ ಎಂದವರು ಆರೋಪಿಸಿದರು.

ಗುತ್ತಿಗೆ ವಹಿಸಿಕೊಳ್ಳುವ ಕಂಪೆನಿಯ ಹಿನ್ನೆಲೆ, ಅನುವ, ಸಾಮರ್ಥ್ಯದ ಬಗ್ಗೆ ಕೂಲಂಕಷ ತನಿಖೆ ನಡೆಸದೇ ಕೇವಲ ಎರಡು ತಿಂಗಳ ಅಂತರದಲ್ಲಿ ಕ್ಯಾಬಿನೆಟ್‌ ಒಪ್ಪಿಗೆ ಪಡೆದು ಶಿಲಾನ್ಯಾಸ ನಡೆಸಿರುವುದು ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ಇಡೀ ಪ್ರಕ್ರಿಯೆ ಕುರಿತಂತೆ ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದೇವೆ.  ನಾವು ಮಾಹಿತಿ  ಹಕ್ಕು ಕಾಯ್ದೆ ಮೂಲಕ ಕೇಳಿದ ದಾಖಲೆಗಳನ್ನುನೀಡಲು ವಿವಿಧ ಇಲಾಖೆಗಳು ವಿಳಂಬ ತಂತ್ರ ಅನುಸರಿಸುತ್ತಿವೆ. ಹಲವು ಅರ್ಜಿಗಳಿಗೆ ಬೇಜವಾಬ್ದಾರಿ ಉತ್ತರಗಳನ್ನು ನೀಡಲಾಗಿದೆ ಎಂದವರು ಆರೋಪಿಸಿದರು.

ಆದುದರಿಂದ ಇದರ ವಿರುದ್ಧ ನಾವು ಸ್ಥಳೀಯವಾಗಿ ಹೋರಾಟ ನಡೆಸಿದರೆ, ಮತ್ತೊಂದೆಡೆ ನ್ಯಾಯಾಲಯದ ಮೂಲಕವೂ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿ ದ್ದೇವೆ. ಆಸ್ಪತ್ರೆ ಮತ್ತು ಜಾಗವನ್ನು 30 ವರ್ಷ ಗುತ್ತಿಗೆ ನೀಡುವ ಕುರಿತಂತೆ ಸರಕಾರ ಮತ್ತು ಬಿ.ಆರ್.ಶೆಟ್ಟಿ ಅವರ ನಡುವೆ ಎಂಓಯುಗೆ ಸಹಿ ಹಾಕಿರುವ ಬಗ್ಗೆಯೇ ನಮಗೀಗ ಸಂಶಯವಿದೆ. ಸರಕಾರ ಇದರ ಅಧಿಕೃತ ಪ್ರತಿಯನ್ನೇ ನಮಗೆ ಈವರೆಗೆ ನೀಡಿಲ್ಲ ಎಂದವರು ನುಡಿದರು.

 ಹಿಂದೆ ಇದೇ ರೀತಿ ರಾಯಚೂರು ಜಿಲ್ಲಾಸ್ಪತ್ರೆಯನ್ನು ಅಪೋಲೊ ಅವರಿಗೆ ಗುತ್ತಿಗೆ ನೀಡುವಾಗಲೂ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂಬುದು ಈಗ ಬಹಿರಂಗಗೊಂಡಿದೆ. ಆ ಯೋಜನೆ ಈಗ ಸಂಪೂರ್ಣ ವಿಫಲವಾಗಿದೆ. ಅದೂ ನಮ್ಮ ಹೋರಾಟಕ್ಕೆ ಬಲವನ್ನು ತುಂಬಿದೆ ಎಂದು ಕೆ.ಫಣಿರಾಜ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News