×
Ad

ಹಾಜಿ ಅಬ್ದುಲ್ಲಾ ನೀಡಿದ್ದು ಜಾಗ ಮಾತ್ರವಲ್ಲ; ಆಸ್ಪತ್ರೆ ಸಹ...

Update: 2017-01-03 20:51 IST

ಉಡುಪಿ, ಜ.3: ಈವರೆಗೆ ಎಲ್ಲರೂ ನಂಬಿಕೊಂಡು ಬಂದಂತೆ ಉಡುಪಿ ಯ ಕೇಂದ್ರಸ್ಥಾನದಲ್ಲಿ ಕವಿ ಮುದ್ದಣ ಮಾರ್ಗದಲ್ಲಿ ಈಗಿನ ನಗರಸಭಾ ಕಚೇರಿ ಎದುರಿಗಿರುವ ಹಾಜಿ ಅಬ್ದುಲ್ಲಾ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ಉಡುಪಿಯ ಕೊಡುಗೈ ದಾನಿ ಹಾಗೂ ಸಮಾಜ ಸೇವಕರೆಂದೇ ಖ್ಯಾತರಾಗಿದ್ದ ಆಗರ್ಭ ಶ್ರೀಮಂತ ಹಾಜಿ ಅಬ್ದುಲ್ಲಾ ಸಾಹೇಬರು ದಾನವಾಗಿತ್ತ 4.06 ಎಕರೆ ಜಮೀನಿನಲ್ಲಿ ನಿರ್ಮಿಸಲಾಗಿತ್ತು.

 ಆದರೆ ಈಗ ನಗರದ ಆರ್‌ಟಿಐ ಕಾರ್ಯಕರ್ತ ಯೋಗೇಶ್ ಶೇಟ್ ಅವರು ಶ್ರಮವಹಿಸಿ ಹುಡುಕಿ ತೆಗೆದ ದಾಖಲೆಗಳಲ್ಲಿ ಹಾಜಿ ಅಬ್ದುಲ್ಲಾ ಅವರು ಕೇವಲ ಜಾಗವನ್ನು ಮಾತ್ರವಲ್ಲ, ಅದರಲ್ಲಿ ಅಂದಿನ ಕಾಲಕ್ಕೆ ಸುಸಜ್ಜಿತವೆನ್ನಬಹುದಾದ ಆಸ್ಪತ್ರೆ ಕಟ್ಟಡ, ಶುಶ್ರೂಷಾಲಯ, ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗಳಿಗೆ ಎಲ್ಲಾ ಸೌಕರ್ಯಗಳ ವಸತಿಗೃಹ ಅಲ್ಲದೇ ಗ್ರಂಥಾಲಯವನ್ನೂ ನಿರ್ಮಿಸಿ 1932ರಲ್ಲಿ ಅಂದಿನ ಮದರಾಸು ಸರಕಾರಕ್ಕೆ ದಾನಪತ್ರದ ಮೂಲಕ ಬಿಟ್ಟುಕೊಟ್ಟಿದ್ದರು ಎಂಬುದು ತಿಳಿದುಬರುತ್ತದೆ.

 ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಕು.ಶಿ.ಹರಿದಾಸ ಭಟ್ ಅವರೂ ತಮ್ಮ ಲೇಖನವೊಂದರಲ್ಲಿ ಈಗ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣದಿಂದ ಡಯಾನ ಸರ್ಕಲ್ ಬಳಿ ಇರುವ ಖಬರಸ್ತಾನವರೆಗಿನ ಬಹುಪಾಲು ಜಾಗ ಹಾಜಿ ಅಬ್ದುಲ್ಲಾ ಅವರಿಗೆ ಸೇರಿದ್ದು, ಅದರಲ್ಲಿ ಕೇಂದ್ರ ಭಾಗದ ಜಾಗವನ್ನು  ಸಾರ್ವಜನಿಕರಿಗಾಗಿ ಆಸ್ಪತ್ರೆ ನಿರ್ಮಿಸಲು ದಾನವಾಗಿ ನೀಡಿದ್ದರು ಎಂದು ಬರೆದಿದ್ದಾರೆ.

ಅಲ್ಲದೇ ಹಾಜಿ ಅಬ್ದುಲ್ಲಾ ಅವರು ತನ್ನ ತಂದೆ ಹಾಜಿ ಖಾಸಿಂ ಬುಡಾನ್ ಸಾಹೇಬ್‌ರ ಹೆಸರಿನಲ್ಲಿ -ಹಾಜಿ ಬುಡಾನ್ ಶುಶ್ರೂಷಾಲಯ-, ತನ್ನ ಹೆಸರಿನಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು 1930ರ ನಿರ್ಮಿಸಿಕೊಟ್ಟಿದ್ದರು (ಹಾಜಿ ಅಬ್ದುಲ್ಲಾ 1935ರ ಆ.12ರಂದು ತೀರಿಕೊಂಡಿದ್ದಾರೆ.) ಎಂದು ಪ್ರೊ.ಭಟ್ ಲೇಖನದಲ್ಲಿ ವಿವರಿಸಿದ್ದರು.

ಈಗ ಸಿಬ್ಬಂದಿ ವಸತಿಗೃಹಗಳಿರುವ 2.03 ಎಕರೆ ಪ್ರದೇಶವನ್ನು ಖಾಸಿಂ ಬುಡಾನ್ ಸಾಹೇಬ್‌ರು ತನ್ನ ಮಗನ (ಬಾಲಕ ಅಬ್ದುಲ್ಲ) ಹೆಸರಿನಲ್ಲಿ ಅಂದು ಜಂಗಮ ಮಠದವರಿಂದ ಖರೀದಿಸಿದ್ದು, ಅದನ್ನೇ ಹಾಜಿ ಅಬ್ದುಲ್ಲಾ ಅವರು ಆಸ್ಪತ್ರೆಗಾಗಿ ನೀಡಿದ್ದರು. 1929ರ ಸುಮಾರಿಗೆ ಅವರು ಆಸ್ಪತ್ರೆಗಾಗಿ ಜಾಗವನ್ನು ಅಂದಿನ ತಾಲೂಕು ಮಂಡಳಿಗೆ ನೀಡಿದ್ದು, 1932ರ ಸುಮಾರಿಗೆ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸಿ ಅಂದಿನ ಮದರಾಸು ಸರಕಾರಕ್ಕೆ ದಾನಪತ್ರದ ಮೂಲಕ ನೀಡಿದ್ದು, ಇದರಲ್ಲಿ ಹಲವು ಷರತ್ತುಗಳನ್ನು ವಿಧಿಸಿದ್ದರು ಎಂಬುದನ್ನು ಹಾಜಿ ಅಬ್ದುಲ್ಲರ ಸೋದರ ಸಂಬಂಧಿ ಖುರ್ಷಿದ್ ಅಹಮ್ಮದ್ ಬಳಿ ಇರುವ ದಾಖಲೆ ಗಳು ಹೇಳುತ್ತವೆ ಎಂದು ಯೋಗೇಶ್ ಶೇಟ್ ಹೇಳುತ್ತಾರೆ.

 ಅಂದು ತಾಲೂಕು ಮಂಡಳಿಗೆ ನೀಡಿದ ಜಮೀನಿನಲ್ಲಿರುವ ಕಟ್ಟಡಗಳನ್ನು ಧರ್ಮಾರ್ಥ ಆಸ್ಪತ್ರೆಯಾಗಿ ಉಳಿಸಿಕೊಳ್ಳಬೇಕು, ಈ ಆಸ್ಪತ್ರೆಗೆ ತನ್ನ ಹಾಗೂ ತಂದೆಯ ಹೆಸರನ್ನು ಶಾಶ್ವತವಾಗಿ ಇಡಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ದಾನಪತ್ರದಲ್ಲಿ ಹೇಳಿರುವಂತೆ ತಾನು ಕಟ್ಟಿಸಿದ ಕಟ್ಟಡದ ಉದ್ದೇಶವನ್ನು ಅದಲು-ಬದಲು ಮಾಡದಂತೆ ತಿಳಿಸಿದ್ದಾರೆ. ತಾನು ಕಟ್ಟಡವನ್ನು ಕಟ್ಟಿ ಅದಕ್ಕೆ ಸಂಬಂಧಪಟ್ಟ ಆಸ್ಪತ್ರೆಯ ಪರಿಕರಗಳನ್ನು ಮತ್ತು ಆಸ್ಪತ್ರೆಗೆ ಬೇಕಾಗುವ ಪುಸ್ತಕ ಭಂಡಾರವನ್ನು ಸಹ ನೀಡಿದ್ದೇನೆ ಎಂದು ದಾನಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

 ಆದುದರಿಂದ ತಮ್ಮ ಹಿರಿಯರು ಸಾರ್ವಜನಿಕ ಉದ್ದೇಶಗಳಿಗಾಗಿ ನೀಡಿರುವ ಜಮೀನು ಹಾಗೂ ಆಸ್ಪತ್ರೆಯನ್ನು ಸರಕಾರವೇ ನಿರ್ವಹಿಸದೇ, ಖಾಸಗಿಯವರಿಗೆ ತಿಳುವಳಿಕೆ ಪತ್ರ (ಎಂಓಯು) ಮೂಲಕ ನೀಡುವುದರಿಂದ ದಾನಿಯ ಉದ್ದೇಶವನ್ನೇ ಬದಲಾವಣೆ ಮಾಡಿದಂತಾಗುತ್ತದೆ. ಇದಕ್ಕೆ ತಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಖುರ್ಷಿದ್ ಅವರು ಈಗಾಗಲೇ ಆರೋಗ್ಯ ಇಲಾಖೆ, ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಈ ದಾನಪತ್ರದ ಮೂಲಕ ತಾನು ನ್ಯಾಯಾಲಯದಲ್ಲೂ ದಾವೆ ಹೂಡಲು ಹಿಂಜರಿಯುವುದಿಲ್ಲ ಎಂದವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News