ನೋಟು ರದ್ದತಿಯ ತಾತ್ಕಾಲಿಕ ಹಿನ್ನಡೆಯಿಂದ ಬಡವರ ರಕ್ಷಣೆಯಾಗಲಿ : ಪ್ರಣಬ್ ಮುಖರ್ಜಿ
ಹೊಸದಿಲ್ಲಿ, ಜ.5: ನೋಟು ಅಮಾನ್ಯಗೊಳಿಸಿದ ಸುಮಾರು 60 ದಿನಗಳ ಬಳಿಕ ಇದರ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನೋಟು ಅಮಾನ್ಯ ನಿರ್ಧಾರದ ಉದ್ದೇಶ ಕಾಳಧನಿಕರ ವಿರುದ್ಧ ಮತ್ತು ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುವುದಾದರೂ, ಇದು ದೇಶದ ಅರ್ಥವ್ಯವಸ್ಥೆಯ ವೇಗಕ್ಕೆ ತಾತ್ಕಾಲಿಕವಾಗಿ ತಡೆ ಒಡ್ಡುತ್ತ್ತದೆ ಎಂದು ತಿಳಿಸಿದ್ದಾರೆ.
ಸರಕಾರದ ಈ ನಿರ್ಧಾರದಿಂದಾಗಿ ಜನತೆ ಪಡುತ್ತಿರುವ ಬವಣೆಯ ಬಗ್ಗೆ ಉಲ್ಲೇಖಿಸಿದ ರಾಷ್ಟ್ರಪತಿ, ಅಗತ್ಯದ ಸಂದರ್ಭದಲ್ಲಿ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು . ನೋಟು ರದ್ದತಿಯ ತಾತ್ಕಾಲಿಕ ಹಿನ್ನಡೆಯಿಂದ ಬಡವರನ್ನು ರಕ್ಷಿಸುವ ಕಾರ್ಯವಾಗಬೇಕು ಎಂದರು.
50 ದಿನಗಳ ಅಂತ್ಯದಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಪ್ರಧಾನಿ ಮೋದಿ ನೀಡಿದ ಭರವಸೆಯ ಬಳಿಕವೂ ಸಮಸ್ಯೆ ಪರಿಹಾರವಾಗಿಲ್ಲ. ಹಣ ಪಡೆಯುವ ಮಿತಿಯ ಮೇಲಿನ ನಿರ್ಬಂಧ ಹಾಗೆಯೇ ಮುಂದುವರಿದಿದೆ. ಈ ಮಧ್ಯೆ ದೇಶದ ಅರ್ಥವ್ಯವಸ್ಥೆಯ ಮೇಲೆ ಇದು ಕೆಟ್ಟ ಪರಿಣಾಮ ಬೀರಿದೆ ಮತ್ತು ಕಾರ್ಮಿಕರು ತಮ್ಮ ದಿನಗೂಲಿ ಪಡೆಯಲೂ ನಡೆಸಬೇಕಾದ ಪರದಾಟ ಮುಂದುವರಿದಿದೆ ಎಂದು ವರದಿ ತಿಳಿಸಿದೆ.