ಬೆಳ್ತಂಗಡಿಯಲ್ಲಿ ಬಾಲಕಿಯರ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ

Update: 2017-01-07 15:20 GMT
ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಸಿದ್ಧಗೊಂಡ ದ.ಕ.ಜಿಲ್ಲೆಯ ಉಜಿರೆ ಶ್ರಿರತ್ನವರ್ಮ ಹೆಗ್ಗಡೆ ಕ್ರೀಡಾಂಗಣ

ಬೆಳ್ತಂಗಡಿ , ಜ.7 :  ಉಜಿರೆ ಶ್ರೀರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಜ. 9 ರಿಂದ ನಾಲ್ಕು ದಿನಗಳ ಕಾಲ ನಡೆಯುವ 19 ವರ್ಷ ಕೆಳಗಿನ ಬಾಲಕಿಯರ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಸಕಲ ಪೂರ್ವ ಸಿದ್ಧತೆ ಅಂತಿಮಗೊಳ್ಳುತಿದ್ದು , ಕ್ರೀಡಾಳುಗಳ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್. ದಿನೇಶ್ ಚೌಟ ತಿಳಿಸಿದರು.

ಅವರು ಶನಿವಾರ ಉಜಿರೆ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಪಂದ್ಯಾಟಗಳನ್ನು ನಡೆಸುವ ವಿಚಾರವಾಗಿ ವಿವರಗಳನ್ನು ನೀಡಿದರು.

 ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ, ಪದವಿಪೂರ್ವ ಇಲಾಖೆ ಹಾಗು ಎಸ್‌ಡಿಎಂ ಉಜಿರೆ ಕಾಲೇಜಿನ ಸುವರ್ಣಮಹೋತ್ಸವ ವರ್ಷಾಚರಣೆಯ ಅಂಗವಾಗಿ ನಡೆಯುವ ಪಂದ್ಯಾಟಕ್ಕೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಡಾ ಬಿ.ಯಶೋವರ್ಮ ಅವರ ಮಾರ್ಗದರ್ಶನದಲ್ಲಿ ಯೋಗ್ಯವಾದ ನಾಲ್ಕು ಅಂಕಣಗಳನ್ನು ಸಜ್ಜುಗೊಳಿಸಲಾಗಿದ್ದು , ಬೆಳಿಗ್ಗೆ 7 ರಿಂದ 9.30 ರವರೆಗೆ ಹಾಗೂ ಸಂಜೆ 5-30ರಿಂದ 10 ರವರೆಗೆ ನಡೆಯಲಿದ್ದು ಇದರಲ್ಲಿ ಬಹುತೇಕ ಪಂದ್ಯಗಳನು ಹೊನಲು ಬೆಳಕಿನಲ್ಲಿ ನಡೆಯಲಿವೆ ಎಂದರು.

ದೇಶಾದ್ಯಂತದಿಂದ 43 ತಂಡಗಳು ಬರಬೇಕಾಗಿದ್ದು ಈ ಪೈಕಿ 27 ತಂಡಗಳು ಈಗಾಗಲೇ ಪಾಲ್ಗೊಳ್ಳುವಿಕೆಯನ್ನು ದೃಢೀಕರಿಸಿವೆ. ಆಂಧ್ರ ಮತ್ತು ಹಿಮಾಚಲ ರಾಜ್ಯದ ತಂಡಗಳು ಈಗಾಗಲೇ ಆಗಮಿಸಿವೆ. 62 ನೇಯ ರಾಷ್ಟ್ರ ಮಟ್ಟದ ಕ್ರೀಡಾಕೂಟ ಇದಾಗಿದ್ದು 400 ಕ್ಕೂ ಅಧಿಕ ಆಟಗಾರ್ತಿಯವರು, 100 ಕ್ಕೂ ಹೆಚ್ಚು ತೀರ್ಪುಗಾರರು, ರೆಫರಿಗಳು ಭಾಗವಹಿಸಲಿದ್ದಾರೆ. ಫೆಡರೇಶನ್ ವತಿಯಿಂದ ನಿರೀಕ್ಷಕರಾಗಿ ಆಗಮಿಸಿರುವ ಪರಿಹಾರ್ ಅವರು ಕೂಟಕ್ಕೆ ಬೇಕಾದ ವ್ಯವಸ್ಥೆಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡುತ್ತಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಪಂದ್ಯಾಟ ಇದ್ದಾಗಿದ್ದು , ರಚನೆಯಾಗಿರುವ ಅಂಕಣಗಳಿಗೆ ಎಸ್‌ಡಿಎಂ ಕಾಲೇಜಿನ ಕ್ರೀಡಾ ಸಾಧಕಿಯರಾದ ನೇಹಾ, ನೇತ್ರಾವತಿ, ವಿನುತಾ ಹಾಗೂ ರಶ್ಮಿ ಎಂದು ಹೆಸರಿಡಲಾಗಿದೆ ಎಂದರು.

ಪಂದ್ಯಾವಳಿಗಳು ಐಪಿಎಲ್ ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಅಂತಿಮವಾಗಿ 8 ತಂಡಗಳನ್ನು ಆರಿಸಿ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಇಲ್ಲಿ ನಡೆಯುವ ಪಂದ್ಯಾಟಗಳಲ್ಲಿ ಉತ್ತಮ ಆಟಗಾರ್ತಿಯರನ್ನು ಆರಿಸಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ತಂಡಕ್ಕೆ ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆಯಲಿದೆ.

ಜ. 9, 10, 11 ರಂದು ಅರ್ಹತಾ ಸುತ್ತಿನ ಪಂದ್ಯಾಟಗಳು ನಡೆಯಲಿದ್ದು ಅಂತಿಮ ಹಣಾಹಣಿಯು ಜ. 12 ರಾತ್ರಿ ನಡೆಯಲಿದೆ. ಪಂದ್ಯಾಟಕ್ಕೆ ಬೇಕಾದ ಆರ್ಥಿಕ ನೆರವಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗಿದೆ. ಮಂಗಳೂರಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಪಂದ್ಯಾಟದ ಬಗ್ಗೆ ಸಭೆಯೊಂದನ್ನು ನಡೆಸಲಾಗಿದೆ. ಅಲ್ಲಿ ಸರಕಾರ ಎಲ್ಲಾ ಇಲಾಖೆಯವರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಎಲ್ಲರಿಗೂ ಊಟ, ವಸತಿಯ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಐದು ತಂಡಗಳು ತಮ್ಮದೇ ಆದ ಅಡುಗೆಯವರನ್ನು ಕರೆತಂದಿರುವುದು ವಿಶೇಷವಾಗಿದ್ದು ಅವರಿಗೂ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ ಎಂದರು.

 ಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಚಾರ್ಯ ಪ್ರಮೋದ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್ ಹೆಚ್, ಸಂದೇಶ ಪೂಂಜ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಭಾಸ್ಕರ ಹೆಗಡೆ ಇದ್ದರು.

ಉಜಿರೆಯಲ್ಲಿ ಜ 9 ರಿಂದ ನಡೆಯುವ ರಾಷ್ಟ್ರ ಮಟ್ಟದ ಪ.ಪೂ.ಬಾಲಕಿಯರ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯದ ತಂಡವು ಈಗಾಗಲೇ ಉಜಿರೆಯಲ್ಲಿ ಅಭ್ಯಾಸ ನಿರತವಾಗಿದೆ.

ಉಜಿರೆ ಎಸ್.ಡಿ.ಎಂ.ನ ವಿದ್ಯಾರ್ಥಿನಿ ಯಶೋದ ಅವರು ನಾಯಕಿಯಾಗಿದ್ದು ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ 12 ಮಂದಿ ಇದು ದ.ಕ.ಜಿಲ್ಲೆಯಿಂದ 6 ಮಂದಿ ಪ್ರತಿನಿಧಿಸುತ್ತಿದ್ದಾರೆ. ಅದರಲ್ಲಿ 5 ಮಂದಿ ಉಜಿರೆ ಕಾಲೇಜಿನವರಾಗಿದ್ದು, ಒಬ್ಬರು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಮೂವರು ಬಾಲಕಿಯರು ಬೆಳ್ತಂಗಡಿ ತಾಲೂಕಿನವರಾಗಿದ್ದಾರೆ. ತಂಡಕ್ಕೆ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಕೋಚ್ ಆಗಿ ಮಾರ್ಗದರ್ಶನ ನೀಡುತ್ತಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News