26ರಿಂದ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ
ಮಂಗಳೂರು, ಜ.8: ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಸಿರಿ ತೋಟಗಾರಿಕೆ ಸಂಘ (ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಜ.26ರಿಂದ 29ರವರೆಗೆ ರವರೆಗೆ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಫಲಪುಷ್ಪ ಪ್ರದರ್ಶನವನ್ನು ಇಲಾಖೆಯ ಅನುದಾನ, ಇತರ ಸರಕಾರಿ ಇಲಾಖೆಗಳು, ಬ್ಯಾಂಕ್ಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ, ಅವರ ಸಹಕಾರದಿಂದ ಏರ್ಪಡಿಸಿ ಜಿಲ್ಲೆಯಲ್ಲಿ ತೋಟಗಾರಿಕೆ ಚಟುವಟಿಕೆ ಹಾಗೂ ತೋಟಗಾರಿಕೆ ಕಲೆಯನ್ನು ಸಾರ್ವಜನಿಕರಲ್ಲಿ ಉದ್ದೀಪನಗೊಳಿಸುವ ಮೂಲಕ ಜಿಲ್ಲೆಯ ತೋಟಗಾರಿಕೆಯಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ, ಸಾರ್ವಜನಿಕ ನೈರ್ಮಲ್ಯ, ಗ್ರಾಮ ನಗರಗಳನ್ನು ಸುಂದರಗೊಳಿಸುವುದು, ಮೌಲ್ಯ ವರ್ದನೆ, ಆಧುನಿಕ ತಂತ್ರಜ್ಞಾನ ಬಳಕೆ, ಸಾವಯವ ಕೃಷಿ ಪದ್ಧತಿಗೆ ಪ್ರೋತ್ಸಾಹ ಇತ್ಯಾದಿ ಚಟುವಟಿಕೆಗಳ ಪಾಲನೆ ಮೂಲಕ ತೋಟಗಾರಿಕೆ ಉದ್ದಿಮೆಯನ್ನು ಮುಂದಕ್ಕೆ ಕೊಂಡ್ಯೊಯ್ಯುವ ಉದ್ದೇಶವನ್ನು ಹೊಂದಿದೆ.
ಜಿಲ್ಲಾ ಫಲಪುಷ್ಪ ಪ್ರದರ್ಶನದ ಅಂಗವಾಗಿ ನಗರ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಗರವಾಸಿಗಳಿಗೆ ಈ ಕೆಳಕಂಡ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಭೂ ದೃಶ್ಯ ಹಾಗೂ ಉದ್ಯಾನವನ ಅಭಿವೃದ್ಧಿ ಸ್ಪರ್ಧೆ:
ಭೂ ದೃಶ್ಯ ಹಾಗೂ ಉದ್ಯಾನವನ ಅಭಿವೃದ್ಧಿ ಸ್ಪರ್ಧೆಯನ್ನು 3 ವಿಭಾಗಗಳಲ್ಲಿ ಆಯೋಜಿಸಲಾಗಿದ್ದು ಇದರಲ್ಲಿ ಸಣ್ಣ ಪ್ರಮಾಣ 100 ಚ.ಮೀ., ಮಧ್ಯಮ ಪ್ರಮಾಣ 200 ಚ.ಮೀ., ದೊಡ್ಡ ಪ್ರಮಾಣ 300 ಚ.ಮೀ. ಮೇಲ್ಪಟ್ಟು ಉದ್ಯಾನವನ್ನು ನಿರ್ಮಿಸಿದವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಬಹು ಮಹಡಿ ಕಟ್ಟಡಗಳಲ್ಲಿ ಗಾರ್ಡನಿಂಗ್ ಮಾಡಿದವರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಉತ್ತಮ ಕೈತೋಟ ಅಭಿವೃದ್ಧಿ ಸ್ಪರ್ಧೆ:
ಮನೆಯ ಅಂಗಳದಲ್ಲಿ ವಿವಿಧ ಜಾತಿಯ ತರಕಾರಿ ಹಾಗೂ ಹೂಗಳನ್ನು ಬೆಳೆಸಿರುವವರಿಗೆ ಕೈತೋಟ ಅಭಿವೃದ್ಧಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ತಾರಸಿ ತೋಟ ಸ್ಪರ್ಧೆ:
ಮನೆಯ ತಾರಸಿಯಲ್ಲಿ ವಿವಿಧ ಜಾತಿಯ ತರಕಾರಿ ಹಾಗೂ ಹೂಗಳನ್ನು ಅಭಿವೃದ್ಧಿ ಪಡಿಸಿದವರಿಗೆ ತಾರಸಿ ತೋಟ ಸ್ಪರ್ಧೆ ಮ್ಮಿುಕೊಳ್ಳಲಾಗಿದೆ.
ಸಂಸ್ಥೆಗಳಿಗೆ ಉತ್ತಮ ಉದ್ಯಾನವನ ಸ್ಪರ್ಧೆ:
ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯಾನವನವನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಿದವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಮಳಿಗೆಗಳಲ್ಲಿ ಉತ್ತಮ ಪ್ರದರ್ಶಿಕೆಗಳ ಸ್ಪರ್ಧೆ :
ಮನೆಯಲ್ಲಿ ಬೆಳೆದಿರುವ ವಿವಿಧ ಜಾತಿಯ ಅಲಂಕಾರಿಕ ಹಾಗೂ ಹೂವಿನ ಗಿಡಗಳನ್ನು ಫಲಪುಷ್ಪ ಪ್ರದರ್ಶನ ನಡೆಯುವ ದಿನದಂದು ಮಳಿಗೆಗಳಲ್ಲಿ ಉತ್ತಮ ರೀತಿಯಲ್ಲಿ ಜೋಡಿಸುವ ಸ್ಪರ್ಧೆ ನಡೆಯಲಿದೆ.
ನೈಜ್ಯ ಪುಷ್ಪ ಜೋಡಣೆ:
ನೈಜ್ಯ ಪುಷ್ಪ ಜೋಡಣೆ ಸ್ಪರ್ಧೆಯನ್ನು 2 ವಿಭಾಗಗಳಲ್ಲಿ ಆಯೋಜಿಸಲಾಗಿದ್ದು ಇದರಲ್ಲಿ 15 ವರ್ಷ ವಯೋಮಿತಿಯವರಿಗೆ ಮತ್ತು 15 ವರ್ಷ ಮೇಲ್ಪಟ್ಟವರಿಗೆ ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಪುಷ್ಪ ರಂಗೋಲಿ ಸ್ಪರ್ಧೆ:
ವಿವಿಧ ಜಾತಿಯ ಪುಷ್ಪಗಳನ್ನು ಉಪಯೋಗಿಸಿ ರಂಗೋಲಿಯನ್ನು ಹಾಕುವರಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 15 ವರ್ಷ ವಯೋಮಿತಿಯವರಿಗೆ ಮತ್ತು 15 ವರ್ಷ ಮೇಲ್ಪಟ್ಟವರಿಗೆ ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ತರಕಾರಿ ಕೆತ್ತನೆ ಸ್ಪರ್ಧೆ:
ವಿವಿಧ ಜಾತಿಯ ತರಕಾರಿ ಹಾಗೂ ಹಣ್ಣುಗಳನ್ನು ಉಪಯೋಗಿಸಿ ತರಕಾರಿ ಕೆತ್ತನೆ ಮಾಡುವವರಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 15 ವರ್ಷ ವಯೋಮಿತಿಯವರಿಗೆ ಮತ್ತು 15 ವರ್ಷ ಮೇಲ್ಪಟ್ಟವರಿಗೆ ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಮೇಲೆ ಸೂಚಿಸಿರುವ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಜ.13ರೊಳಗಾಗಿ ತೋಟಗಾರಿಕೆ ಇಲಾಖೆ/ಸಿರಿ ತೋಟಗಾರಿಕೆ ಸಂಘದಲ್ಲಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ.
ತರಕಾರಿ ಕೆತ್ತನೆ, ತೋಟಗಾರಿಕೆ ಕರಕುಶಲತೆಗಳು, ಸಾರ್ವಜನಿಕರು ಬೆಳೆಸಿರುವ ಬೊನ್ಸಾಯಿ, ಆಂಥೋರಿಯಂ ಗಿಡಗಳು, ಇತರ ಆಕರ್ಷಣೀಯವಾದ ಗಿಡಗಳನ್ನು ಪ್ರದರ್ಶಿಸಲು ಉದ್ದೇಶಿಸಿದ್ದು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ದಿಮೆದಾರರು, ಯಂತ್ರೋಪಕರಣಗಳ ಮಾರಾಟಗಾರರು ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುವುದು. ಸ್ವಸಹಾಯ ಗುಂಪುಗಳು, ಸ್ತ್ರೀಶಕ್ತಿಸಂಘಗಳು ತಮ್ಮ ಉತ್ಪಾದಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೆ, ಫಲಪುಷ್ಪ ಪ್ರದರ್ಶನದ ಅಂಗವಾಗಿ ಸಾರ್ವಜನಿಕರ ಕಲಾತಂಡಗಳಿಗೆ ಒಂದು ಗಂಟೆ ಅವಧಿಯ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗಿದೆ. ಪ್ರದರ್ಶನದ ನೀಡಿದ ಕಲಾವಿದರಿಗೆ/ತಂಡಗಳಿಗೆ ಬಹುಮಾನ, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು. ಫಲಪುಷ್ಪ ಪ್ರದರ್ಶನದ ಸ್ಪರ್ಧೆಗಳಲ್ಲಿ ಭಾಗವಹಿಸುವವರು, ಪ್ರದರ್ಶಿಕೆಗಳನ್ನು ಪ್ರದರ್ಶಿಸಲು ಇಚ್ಚಿಸುವವರು, ಮಳಿಗೆ ತೆರೆಯಲು ಆಸಕ್ತ ಇರುವವರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕಲಾವಿದರು/ಕಲಾ ತಂಡಗಳು ತಮ್ಮ ಹೆಸರನ್ನು ಜ.13ರ ಮುಂಚಿತವಾಗಿ ನೋಂದಾಯಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ ಸಿರಿ ತೋಟಗಾರಿಕೆ ಸಂಘ (ರಿ), ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣ ಬೆಂದೂರು, ಮಂಗಳೂರು ದೂರವಾಣಿ ಸಂ: 9845523944/0824-2412628/9480354968ಯನ್ನು ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.