''ಮಗನ ಕೊಲೆಗಾರರಿಗೆ ಶಿಕ್ಷೆಯಾಗುವುದನ್ನು ನೋಡಲು ತಾಯಿಯ ಕಣ್ಣುಗಳಾದರೂ ಇರಲಿ''

Update: 2017-01-09 06:21 GMT

ಮಂಗಳೂರು, ಜ.9: ರವಿವಾರ ಮೃತಪಟ್ಟ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ತಾಯಿ ಲಕ್ಷ್ಮೀ ಬಾಳಿಗಾ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.

ಲಕ್ಷ್ಮೀ ಬಾಳಿಗಾ ಅವರ ಅಂತ್ಯ ಸಂಸ್ಕಾರ ಸೋಮವಾರ ಬೆಳಗ್ಗೆ ನೆರವೇರಿತು. ಈ ಸಂದರ್ಭ ಸೇರಿದ್ದ ಜನರು ವಿನಾಯಕ ಬಾಳಿಗಾ ಅವರ ಕೊಲೆಗಾರರಿಗೆ ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರಿಸುವುದಾಗಿ ಲಕ್ಷ್ಮೀ ಬಾಳಿಗಾ ಅವರ ಮೃತದೇಹದ ಎದುರೇ ಪ್ರತಿಜ್ಞೆ ಮಾಡಿದರು.

ಈ ಸಂದರ್ಭ ಮಾತನಾಡಿದ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ‘‘ಮಗನ ಕೊಲೆಯ ಕೊರಗಿನಲ್ಲೇ ಲಕ್ಷ್ಮೀ ಬಾಳಿಗಾ ಮೃತಪಟ್ಟಿದ್ದಾರೆ. ಅವರು ಕಣ್ಣು ದಾನ ಮಾಡಿದ್ದಾರೆ. ಅವರ ಕಣ್ಣಾದರೂ ಮಗನ ಹತ್ಯೆ ಆರೋಪಿಗಳಿಗೆ ಶಿಕ್ಷೆಯಾಗುವುದನ್ನು ನೋಡಲಿ. ವಿನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುತ್ತೇವೆ’’ ಎಂದರು.

ಶನಿವಾರ ಹಠಾತ್ ಕುಸಿದು ಬಿದ್ದ ಪರಿಣಾಮ ತಲೆಗೆ ಗಾಯಗಳಾಗಿದ್ದ ಲಕ್ಷ್ಮೀ ಬಾಳಿಗಾ ಅವರು ರವಿವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News