ಪಂಚಕರ್ಮ ಚಿಕಿತ್ಸೆಯಿಂದ ರೋಗ ಗುಣಪಡಿಸಿ ಯಶಸ್ಸುಗಳಿಸಲು ಸಾಧ್ಯ: ಪ್ರೊ. ಡಾ.ಎ.ಎಸ್. ಪ್ರಶಾಂತ್
ಮೂಡುಬಿದಿರೆ, ಜ.9: ಆಧುನಿಕ ವೈದ್ಯಕೀಯ ಪದ್ಧತಿಗೆ ಸವಾಲಾಗಿ ಪರಿಣಮಿಸಿರುವ ಹಲವಾರು ರೋಗಗಳಿಗೆ ಪಂಚಕರ್ಮ ಚಿಕಿತ್ಸೆಯ ಮೂಲಕ ರೋಗಿಯನ್ನು ಗುಣಪಡಿಸಿ ಯಶಸ್ಸುಗಳಿಸಲು ಸಾಧ್ಯವಿದೆ ಎಂದು ಪ್ರಸಿದ್ಧ ಪಂಚಕರ್ಮ ತಜ್ಞ, ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರೊ. ಡಾ.ಎ.ಎಸ್. ಪ್ರಶಾಂತ್ ಹೇಳಿದರು.
ಅವರು ಸೋಮವಾರ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ನಲ್ಲಿ ಆರಂಭಗೊಂಡಿರುವ ಕೇಂದ್ರ ಸರಕಾರದ ಆಯುಷ್ ಇಲಾಖೆ, ರಾಷ್ಟ್ರೀಯ ಆಯುರ್ವೇದ ಪರಿಷತ್ ಮತ್ತು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪಂಚಕರ್ಮ ವಿಭಾಗದ ವತಿಯಿಂದ ಆರು ದಿನಗಳ ಕಾಲ ನಡೆಯುವ ಪಂಚಕರ್ಮ ವೈದ್ಯರ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನೀಡುತ್ತಿರುವ ಶೈಕ್ಷಣಿಕ ಪ್ರೋತ್ಸಾಹವನ್ನು ವಿವರಿಸಿ ಆಯುರ್ವೇದ, ಪಂಚಕರ್ಮ ಚಿಕಿತ್ಸೆಯನ್ನು ತಮ್ಮ ಆಸ್ಪತ್ರೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿಸಲು ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದರು.
ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ.ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ವಿನಯಚಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ.ಲೀಮಾ ಮೋಳ್ ಮ್ಯಾಥ್ಯೂ ಕಾರ್ಯಕ್ರಮ ನಿರ್ವಹಿಸಿದರು. ಡಾ. ಕೆ.ಎನ್ ರಾಜಶೇಖರ್ ವಂದಿಸಿದರು.