ಮೂಡುಬಿದಿರೆ : "ಪಳಕಳರ ಆಯ್ದ ಚುಟುಕುಗಳು" ಕೃತಿ ಲೋಕಾರ್ಪಣೆ

Update: 2017-01-10 13:40 GMT

ಮೂಡುಬಿದಿರೆ , ಜ.10 : ಕಿನ್ನಿಗೋಳಿಯ ಯುಗಪುರುಷ ಪ್ರಕಟಿತ ಮಕ್ಕಳ ಸಾಹಿತಿ ಪಳಕಳ ಸೀತಾತಾಮ ಭಟ್ಟ ಅವರ "ಪಳಕಳರ ಆಯ್ದ ಚುಟುಕುಗಳು" ಕೃತಿಯನ್ನು ಅವರ ಸ್ವಗೃಹದಲ್ಲಿ ಕ.ಸಾ.ಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಮಂಗಳವಾರ ಲೋಕಾರ್ಪಣೆಗೊಳಿಸಿದರು.

 ನಂತರ ಮಾತನಾಡಿದ ಅವರು ಮಕ್ಕಳ ಹಲವಾರು ಕೃತಿಗಳನ್ನು ಬರೆದಿರುವ ಸೀತಾರಾಮ ಭಟ್ಟರನ್ನು ಸರಕಾರ ಗುರುತಿಸುವುದಕ್ಕಿಂತಲೂ ಹೆಚ್ಚಾಗಿ ಜನರು ಅರಿತುಕೊಂಡು ಗುರುತಿಸಿರುವುದು ಶ್ಲಾಘನೀಯ. ತನ್ನ ಇಳಿ ವಯಸ್ಸಿನಲ್ಲಿಯೂ ಅತ್ಯಂತ ಉತ್ಸಾಹದಿಂದ ಕೃತಿಗಳನ್ನು ಬರೆಯುತ್ತಿರುವ ಇವರಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬರುವಂತಾಗಲಿ ಎಂದು ಶುಭ ಹಾರೈಸಿದರು.

 ಕೃತಿಕಾರ ಸೀತಾರಾಮ ಭಟ್ಟ ಅವರು ಮಾತನಾಡಿ , ತನ್ನ ಕೃತಿಗಳನ್ನು ಪ್ರಕಟಿಸಲು ಹರಿಕೃಷ್ಣ ಪುನರೂರು ಹಾಗೂ ಯುಗಪುರುಷದವರು ಮೊದಲಿನಿಂದಲೂ ನಿರಂತರ ಪ್ರೋತ್ಸಾಹ ನೀಡಿರುವುದರ ಬಗ್ಗೆ ಹೇಳಿದರು.

ಇದೇ ಸಂದರ್ಭದಲ್ಲಿ ಯುಗಪುರುಷ ಪ್ರಕಟಣಾಲಯದ ಪರವಾಗಿ ಸೀತಾರಾಮ ಭಟ್ಟ ಅವರನ್ನು ಸನ್ಮಾನಿಸಲಾಯಿತು.

 ಮುಖ್ಯ ಅತಿಥಿಗಳಾಗಿ ಉದ್ಯಮಿ ಕೆ.ಶ್ರೀಪತಿ ಭಟ್, ಮೂಡುಬಿದಿರೆ ಪ್ರೆಸ್‌ಕ್ಲಬ್‌ನ ಅಧ್ಯಕ್ಷ ಧನಂಜಯ ಮೂಡುಬಿದಿರೆ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು ಅತಿಥಿಗಳಾಗಿ ಭಾಗವಹಿಸಿದ್ದರು.

ಸೀತಾರಾಮ ಭಟ್ಟ ಅವರ ಧರ್ಮಪತ್ನಿ ವಸಂತಿ ಹಾಗೂ ಪುತ್ರರಾದ ಸಿ.ಎ ರಘುಪತಿ ಭಟ್ ಗೋಪಾಲಕೃಷ್ಣ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯುಗಪುರುಷ ಪ್ರಕಟಣಾಲಯದ ಮುಖ್ಯಸ್ಥ ಭುವನಾಭಿರಾಮ ಉಡುಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News