ಎನ್ಜಿಓ ನಿಧಿಗಳಿಗೆ ನಿಗಾವಿರಿಸದ ಕೇಂದ್ರಕ್ಕೆ ಸುಪ್ರೀಂ ತರಾಟೆ
ಹೊಸದಿಲ್ಲಿ, ಜ.10: ಸರಕಾರೇತರ ಸಂಘಟನೆ (ಎನ್ಜಿಓ)ಗಳು,ಸಾಮುದಾಯಿಕ ಹಾಗೂ ಸ್ವಯಂಸೇವಾ ಸಂಸ್ಥೆಗಳ ನಿಧಿಗಳನ್ನು ಹಾಗೂ ಅವುಗಳ ಬಳಕೆಯ ಬಗ್ಗೆ ಕಣ್ಗಾವಲು ನಡೆಸಲು ನಿಯಮಿತವಾದ ಕಾರ್ಯತಂತ್ರವೊಂದನ್ನು ರೂಪಿಸದೆ ಇರುವುದಕ್ಕಾಗಿ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
2009ನೆ ಇಸವಿಯ ಆನಂತರದ ವರ್ಷಗಳಲ್ಲಿ ಮಹಾಲೇಖಪಾಲರಿಂದ (ಸಿಎಜಿ) ಸರಕಾರೇತರ ಸಂಘಟನೆಗಳ ಲೆಕ್ಕಪತ್ರಗಳ ತಪಾಸಣೆ ನಡೆದಿದೆಯೇ ಎಂಬ ಬಗ್ಗೆ ತನಗೆೆ ಮಾಹಿತಿ ನೀಡಬೇಕೆಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ನ್ಯಾಯಪೀಠವು ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿ ಹಾಗೂ ಜನತಾ ಕ್ರಿಯಾ ಹಾಗೂ ಗ್ರಾಮೀಣ ತಂತ್ರಜ್ಞಾನ ಪ್ರಗತಿ ಮಂಡಳಿಯ ನಿರ್ದೇಶಕರಿಗೆ ಆದೇಶಿಸಿತು. ಈ ಕುರಿತ ದಾಖಲೆಗಳನ್ನು ತನಗೆ ಇಂದು ಮಧ್ಯಾಹ್ನದೊಳಗೆ ಸಲ್ಲಿಸುವಂತೆಯೂ ಅದು ತಿಳಿಸಿತು.
ಎನ್ಜಿಓಗಳಿಗೆ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿವಿತ್ತ ಸಚಿವಾಲಯವು ರೂಪಿಸಿದ 2005ರ ಸಾಮಾನ್ಯ ವಿತ್ತ ನಿಯಮಾವಳಿಗಳ ಪಾಲನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವಂತೆಯೂ ಅದು ಸೂಚಿಸಿತು.