×
Ad

ಯುವತಿಯ ಸಾವಿಗೆ ಕಾರಣನಾದ ಆರೋಪಿಗೆ ಶಿಕ್ಷೆ

Update: 2017-01-12 18:31 IST

ಮಂಗಳೂರು,ಜ.12: ಯುವತಿಯೊಬ್ಬಳನ್ನು ಅತ್ಯಾಚಾರಗೈದು ಆಕೆಯ ಸಾವಿಗೆ ಕಾರಣನಾದ ಆರೋಪಿಗೆ ಜಿಲ್ಲಾ 6ನೆ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ಬೆಳ್ತಂಗಡಿ ತಾಲೂಕು ಕಯ್ಯಡಿ ಗ್ರಾಮದ ಕಲ್ಲೇರಿ ನಿವಾಸಿಯಾದ ಕೃಷಿಕ ಶಿವರಾಮ ಕೆ. (36) ಶಿಕ್ಷೆಗೊಳಗಾದ ಅಪರಾಧಿ. ಈತ ತನ್ನ ಸಂಬಂಧಿ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ಮೋಸಗೊಳಿಸಿದಕ್ಕೆ (ಐಪಿಸಿ 470 ಪ್ರಕಾರ )3 ತಿಂಗಳ ಜೈಲು ಶಿಕ್ಷೆ ಹಾಗೂ ಸಾವಿಗೆ ದುಷ್ಪ್ರೇರಣೆ ನೀಡಿದಕ್ಕೆ (ಐಪಿಸಿ 306 ಪ್ರಕಾರ ) 3 ವರ್ಷ ಜೈಲುಶಿಕ್ಷೆ ಮತ್ತು 12 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಮೊತ್ತದಲ್ಲಿ 8 ಸಾವಿರ ರೂ.ವನ್ನು ಸಂತ್ರಸ್ತೆಯ ತಾಯಿಗೆ ಪರಿಾರವಾಗಿ ನೀಡುವಂತೆ ಆದೇಶಿಸಲಾಗಿದೆ.

ಸಂತ್ರಸ್ಥ ಪರಿಹಾರ ನಿಧಿಯಿಂದ ದೊರೆಯುವ ನಿಧಿಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪಾವತಿಸಲು ಕ್ರಮಕೈಗೊಳ್ಳುವಂತೆ ನ್ಯಾಯಾಧೀಶ ಕೆ.ಎ. ಪುಟ್ಟರಂಗಸ್ವಾಮಿ ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರಿ ಪರ ವಕೀಲರಾಗಿ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.

 ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದ ಅವಿವಾಹಿತೆಯೊಬ್ಬಳ ಅಕ್ಕನ ಪತಿಯ ಸಹೋದರನಾಗಿರುವ ಶಿವರಾಮ ಆಗಾಗ್ಗೆ ಯುವತಿಯ ಮನೆಗೆ ತೆರಳುತ್ತಿದ್ದ. 2012ರ ಎ.17ರಂದು ಸಂತ್ರಸ್ಥೆ ಯುವತಿಯು ಏಕಾಂಗಿಯಾಗಿದ್ದಾಗ ಅತ್ಯಾಚಾರ ನಡೆಸಿದ್ದ. ಗರ್ಭಿಣಿ ಎಂದು ಗೊತ್ತಾದ ತಕ್ಷಣ ಆಕೆ ಮದುವೆಯಾಗಲು ಒತ್ತಡ ಹಾಕಿದ್ದರು. ಆವಾಗ ಆರೋಪಿ ವಿರೋಧ ವ್ಯಕ್ತಪಡಿಸಿದ್ದ. ಇದರಿಂದ ನೊಂದ ಯುವತಿ 2013, ಜ.7ರಂದು ತನ್ನ ಅಡಿಕೆ ತೋಟದ ಕೆರೆಗೆ ಹಾರಿ ಆತ್ಮಹತ್ಯೆಗೈದಿದ್ದಳು. ಈ ಬಗ್ಗೆ ಯುವತಿಯ ವೃದ್ಧೆ ತಾಯಿ ಹಾಗೂ ಸಹೋದರರಿಗೆ ಅರಿವಿರಲಿಲ್ಲ.

ಜ.7ರಂದು ಮನೆಯಿಂದ ಕಾಣೆಯಾಗಿದ್ದ ಯುವತಿಗಾಗಿ ಮನೆ ಮಂದಿ ಹುಡುಕಾಟ ನಡೆಸಿದಾಗ ಮರುದಿನ ಕೆರೆಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಅಂದಿನ ಉಪ್ಪಿನಂಗಡಿ ಎಸ್ಸೈ ರವಿ ಬಿ.ಎಸ್. ಶವ ಪರೀಕ್ಷೆಯ ವೇಳೆ ಕಿವಿಯೋಲೆ ಇಲ್ಲದಿರುವುದು ಪತ್ತೆಹಚ್ಚಿ ಮನೆಯ ಕೋಣೆಯಲ್ಲಿ ಪರಿಶೀಲಿಸಿದಾಗ ಪತ್ತೆಯಾದ ಡೆತ್‌ನೋಟ್‌ನಲ್ಲಿ ಶಿವರಾಮನು 2013ರ ಎಪ್ರಿಲ್ 17ರಂದು ಅತ್ಯಾಚಾರ ನಡೆಸಿರುವ ವಿಚಾರ ನಮೂದಿಸಿದ್ದಳು. ಶವಪರೀಕ್ಷೆಯಲ್ಲಿ ವೈದ್ಯರು ಹೆಣ್ಣು ಭ್ರೂಣವನ್ನು ಪತ್ತೆಹಚ್ಚಿದ್ದರು.

ಪ್ರಕರಣದಲ್ಲಿ 27 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಈ ಪೈಕಿ ಸಂತ್ರಸ್ಥೆಯ ಸ್ನೇಹಿತೆ ಕೌಕ್ರಾಡಿ ಗ್ರಾಮದ ಆನೆಗುಂಡಿಯ ವನಿತಾ ಎಂಬಾಕೆ ಸಂತ್ರಸ್ಥೆ ತನ್ನಲ್ಲಿ ಅತ್ಯಾಚಾರ ಮತ್ತು ಗರ್ಭಿಣಿಯಾಗಿರುವ ವಿಚಾರ ತಿಳಿಸಿ ಮದುವೆಯ ಮಾತುಕತೆ ನಡೆಸುವ ಬಗ್ಗೆ ತಿಳಿಸಿದ್ದನ್ನು ನ್ಯಾಯಾಲಯಕ್ಕೆ ಸಾಕ್ಷಿ ನುಡಿದಿದ್ದಳು.

ಶವದಲ್ಲಿದ್ದ ಹೆಣ್ಣುಭ್ರೂಣದ ಎಸ್‌ಎ್ಎಲ್ ವರದಿ, ಆರೋಪಿಯ ಡಿಎನ್‌ಎ,ಸಂತ್ರಸ್ಥೆ ಯುವತಿ ಸ್ವಸಹಾಯ ಸಂಘದ ಮೂಲಕ ಪಡೆದಿದ್ದ ಸಾಲದಲ್ಲಿ ಆಕೆಯ ಕೆಬರಹ ಮತ್ತು ಡೆತ್‌ನೋಟ್‌ನಲ್ಲಿ ಕೈಬರಹದ ತಾಳೆಯ ಸಾಮ್ಯತೆಯ ವರದಿ,ಫ್ಲೋರೆನ್ಸಿಕ್ ವರದಿಗಳು ಪ್ರಮುಖ ಸಾಕ್ಷಿಗಳಾಗಿ ಪರಿಗಣಿಸಲ್ಪಟ್ಟಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News