ನೋಟು ರದ್ದತಿ ಎಫೆಕ್ಟ್ : ಆರ್ಬಿಐ ಎದುರು ಸರದಿ ಸಾಲುಗಳಲ್ಲಿ ಪಿಐಓ ಮತ್ತು ಎನ್ನಾರೈಗಳು ಹೈರಾಣು
ಹೊಸದಿಲ್ಲಿ,ಜ.12: ನಿವಾಸಿ ಭಾರತೀಯರ ಬಳಿಕ ಈಗ ಅನಿವಾಸಿ ಭಾರತೀಯ(ಎನ್ನಾರೈ)ರು ಮತ್ತು ಭಾರತ ಮೂಲದ ವಿದೇಶಿಯರು(ಪಿಐಒ) ತಮ್ಮ ಬಳಿಯಿರುವ ಹಳೆಯ 500 ಮತ್ತು 1,000 ರೂ.ನೋಟುಗಳನ್ನು ಹೊಸನೋಟುಗಳಿಗೆ ಬದಲಿಸಿಕೊಳ್ಳಲು ಆರ್ಬಿಐನ ನಿಯೋಜಿತ ಐದು ಶಾಖೆಗಳ ಎದುರು ಉದ್ದನೆಯ ಸರದಿ ಸಾಲುಗಳಲ್ಲಿ ಕಾಯುತ್ತ ಹೈರಾಣಾಗುತ್ತಿದ್ದಾರೆ. ನೋಟುಗಳ ಬದಲಾವಣೆಗೆ ಕಠಿಣ ಷರತ್ತುಗಳನ್ನು ವಿಧಿಸಲಾಗಿದ್ದು, ಹಲವರು ನಿರಾಶರಾಗಿ ವಾಪಸಾಗುತ್ತಿದ್ದಾರೆ.
ಅಗತ್ಯ ದಾಖಲೆಗಳನ್ನು ಹೊಂದಿಲ್ಲವೆಂಬ ಕಾರಣವನ್ನೊಡ್ಡಿ ಭದ್ರತಾ ಸಿಬ್ಬಂದಿಗಳು ದೂರದ ಸ್ಥಳಗಳಿಂದ ಬಂದವರಿಗೆ ಪ್ರವೇಶಾವಕಾಶ ನಿರಾಕರಿಸಿದ್ದರಿಂದ ಆರ್ಬಿಐ ಶಾಖಾ ಕಚೇರಿಗಳ ಮುಂದೆ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿತ್ತು.
ತಮ್ಮ ದೂರುಗಳಿಗೆ ಕನಿಷ್ಠ ಕಿವಿಯನ್ನಾದರೂ ಕೊಡುತ್ತಿದ್ದ ಅಧಿಕಾರಿಗಳನ್ನು ಭೇಟಿಯಾಗಲೂ ತಮಗೆ ಅವಕಾಶ ನೀಡಲಿಲ್ಲ ಎಂದು ಹಲವಾರು ಎನ್ನಾರೈಗಳು ದೂರಿಕೊಂಡಿದ್ದಾರೆ.
‘‘ನನ್ನ ಬಳಿ ವಿದೇಶಿ ಪಾಸ್ಪೋರ್ಟ್ ಇದೆಯಾದರೂ ನನ್ನ ಬೇರುಗಳಿನ್ನೂ ಭಾರತದಲ್ಲಿಯೇ ಇವೆ. ನಮ್ಮ ಕುಟುಂಬ ಪ್ರತಿವರ್ಷ ಭಾರತಕ್ಕೆ ಬರುತ್ತಿದೆ. ನಮ್ಮ ಬಳಿ ಕೆಲವು ಹಳೆಯ ಭಾರತೀಯ ನೋಟುಗಳಿವೆ ಮತ್ತು ನಾವು ಅವನ್ನು ವಿನಿಮಯಿಸಿಕೊಳ್ಳಲು ಬಯಸಿದ್ದೇವೆ. ಆದರೆ ಆರ್ಬಿಐ ಕಚೇರಿಯೊಳಗೆ ಪ್ರವೇಶಿಸಲು ನಮಗೆ ಅವಕಾಶ ನೀಡುತ್ತಿಲ್ಲ. ಮಾನ್ಯ ಪ್ರಧಾನಿಯವರೇ,ನಾವು ಈ ನೋಟುಗಳನ್ನು ಸುಟ್ಟುಹಾಕಬೇಕೇ ಎಂದು ಕುಪಿತಗೊಂಡಿದ್ದ ಅಮೆರಿಕದ ನಿವಾಸಿ ರಿತು ಧವನ್ ಪ್ರಶ್ನಿಸಿದರು.
ಈ ಅನಗತ್ಯ ಕಿರುಕುಳ ಭಾರತೀಯ ಮೂಲದವರಿಗೆ ಇನ್ನು ಮುಂದೆ ತಮ್ಮ ತಾಯ್ನಡಿನಲ್ಲಿ ಸ್ವಾಗತವಿಲ್ಲ ಎನ್ನುವುದನ್ನು ಸೂಚಿಸುತ್ತದೆ...ಅಷ್ಟೇ ಎಂದರು.
ಪ್ರತಿ ಬಾರಿ ಭಾರತಕ್ಕೆ ಭೇಟಿ ನೀಡಿದಾಗಲೂ ಕರೆನ್ಸಿ ವಿನಿಮಯಕ್ಕೆ ಕಮಿಷನ್ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ ಪಿಐಒಗಳು ಸಾಮಾನ್ಯವಾಗಿ ಭಾರತೀಯ ನೋಟುಗಳಲ್ಲಿ ಕೆಲ ಮೊತ್ತವನ್ನು ಹೊಂದಿರುತ್ತಾರೆ. ಭಾರತಕ್ಕೆ ಭೇಟಿ ನೀಡುವ ಯಾರೇ ಪಿಐಒ ಆದರೂ 50,000 ರೂ.ನಿಂದ ಒಂದು ಲ.ರೂ.ವರೆಗೆ ಭಾರತೀಯ ಕರೆನ್ಸಿಯನ್ನು ಹೊಂದಿರುತ್ತಾನೆ. ಇದನ್ನು ಕಪ್ಪುಹಣವೆಂದು ರುಜುವಾತುಗೊಳಿಸಿ ನಮ್ಮಿಂದ ವಶಪಡಿಸಿಕೊಳ್ಳುವಂತೆ ನಾನು ಸರಕಾರಕ್ಕೆ ಸವಾಲು ಹಾಕುತ್ತಿದ್ದೇನೆ. ಈ ಹಣವನ್ನು ನಾವು ವಾಸವಾಗಿರುವ ದೇಶದಲ್ಲಿ ನಾವು ಖರ್ಚು ಮಾಡುವುದಿಲ್ಲ, ಆದರೆ ನಮ್ಮ ಮೂಲವಿರುವ ದೇಶದಲ್ಲಿ ಖರ್ಚು ಮಾಡುತ್ತೇವೆ ಎಂದು ಇನ್ನೋರ್ವ ಅಮೆರಿಕನ್ ಪ್ರಜೆ ಧರ್ಮವೀರ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬಳಿ ಕೋಟಿಗಟ್ಟಲೆ ಹಣವಿಲ್ಲ,ಇರುವುದೇ ಕೆಲವು ಸಾವಿರ ರೂ.ಗಳು. ಆಡಳಿತವು ಇದನ್ನು ಬದಲಿಸಿಕೊಡಬೇಕು ಎಂದು ನಿರಾಶರಾದ ಹಲವಾರು ಪಿಐಒಗಳು ಪ್ರತಿಭಟಿಸಿದರು.
ಆರ್ಬಿಐನ ‘ದುರಹಂಕಾರ’ ಮತ್ತು ಸರಕರದ ನೀತಿಯನ್ನು ವಿರೋಧಿಸಿ ಕೆಲ ಎನ್ನಾರೈಗಳು ಆರ್ಬಿಐ ಗೇಟಿನ ಬಳಿ ಹಳೆಯ ನೋಟುಗಳನ್ನು ಎಸೆದು ಪ್ರತಿಭಟನೆ ವ್ಯಕ್ತಪಡಿಸಿರುವುದು ವರದಿಯಾಗಿದೆ.
ಪಿಐಒಗಳೊಂದಿಗೆ,50 ದಿನಗಳ ಅವಧಿಯಲ್ಲಿ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ಸಾಧ್ಯವಾಗದೆ ಗಂಟೆಗಳ ಕಾಲ ಆರ್ಬಿ ಎದುರು ಸರದಿಯಲ್ಲಿ ಕಾದು ನಿಂತಿದ್ದ ನಿವಾಸಿ ಭಾರತೀಯರೂ ನಿರಾಶರಾಗಿ ಮರಳುವಂತಾಯಿತು.