ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ: ಪರಮೇಶ್ವರ್
ಗಂಗೊಳ್ಳಿ, ಜ.13: ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿಯೇ ಇದೆ. ಕೋಮುಸಂಘರ್ಷದ ವ್ಯರ್ಥತೆಯನ್ನು ಜನತೆ ಅರ್ಥ ಮಾಡಿಕೊಂಡಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ನೂತನವಾಗಿ ನಿರ್ಮಿಸಲಾದ ಕರಾವಳಿ ಕಾವಲು ಪೊಲೀಸ್ ಠಾಣೆಯನ್ನು ಉದ್ಘಾಟಿಸಲು ಆಗಮಿಸಿದ ಗೃಹ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಪ್ರಸ್ತುತ ಇರುವ ಹದಗೆಟ್ಟ ಸನ್ನಿವೇಶದ ಹಿನ್ನೆಲೆಯಲ್ಲಿ ತನಗೆ ಒದಗಿಬಂದ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿರುವ ಪ್ರಸಿದ್ಧ ಚಿಂತಕ ಹಾಗೂ ವಿಮರ್ಶಕ ಜಿ.ರಾಜಶೇಖರ್ ಅವರ ನಿರ್ಧಾರದ ಕುರಿತು ಅಭಿಪ್ರಾಯವನ್ನು ಕೇಳಿದಾಗ, ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡ ಬಳಿಕವಷ್ಟೇ ನಾನು ಪ್ರತಿಕ್ರಿಯೆ ನೀಡಲು ಸಾಧ್ಯ. ಅವರು ಯಾವ ಅರ್ಥದಲ್ಲಿ, ಯಾವ ಉದ್ದೇಶದಲ್ಲಿ ಹೀಗೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಡಾ.ಪರಮೇಶ್ವರ್ ನುಡಿದರು.
ಅಲ್ಪಸಂಖ್ಯಾತರ ಕುರಿತಂತೆ ಈಗ ಇರುವ ಅಸಹನೆಯ ಕುರಿತು ಇರಬಹುದು ಎಂದಾಗ, ಎಲ್ಲಿ ಈಗ ಎಲ್ಲವೂ ಸರಿಯಾಗಿದೆಯಲ್ಲ. ಜನ ಇದರ ವ್ಯರ್ಥತೆಯನ್ನು ತಿಳಿದುಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಕೆಲವು ಟೀಕೆಗಾಗಿ ಟೀಕೆ ಮಾಡುತ್ತಾರೆ. ಹೀಗೆ ಟೀಕೆ ಮಾಡಿದಾಗ ನಮಗೂ ಅದನ್ನು ವಿಮರ್ಶಿಸಲು ಸಾದ್ಯವಾಗುತ್ತಿದೆ ಎಂದರು.
ಹೆಗಡೆ ಎಲ್ಲಿ ಹೋಗುತ್ತಾರೆ?
ಕುಂದಾಪುರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಶಿರಸಿಯಲ್ಲಿ ವೈದ್ಯರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿರಸಿಯ ಸಂಸದ ಅನಂತ ಕುಮಾರ ಹೆಗಡೆ ಮೇಲೆ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಓರ್ವ ಸಂಸದನ ಮೇಲೆ ಪ್ರಕರಣ ದಾಖಲಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೂ ಪೊಲೀಸರು ಯೋಜನಾಬದ್ದವಾಗಿ ಸಾಕ್ಷಿಯನ್ನಾಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಅವರು ತಲೆಮರೆಸಿಕೊಂಡಿದ್ದಾರೆ. ಎಷ್ಟು ದಿನಗಳವರೆಗೆ ಅವರು ತಲೆಮರೆಸಿಕೊಂಡಿರಲು ಸಾಧ್ಯ. ಒಂದಲ್ಲ ಒಂದು ದಿನ ಸಿಗಲೇಬೇಕಲ್ಲ ಎಂದರು.
ಅಭಿಷೇಕ್ ಆತ್ಮಹತ್ಯೆ:
ಶೃಂಗೇರಿ ಕಾಲೇಜು ವಿದ್ಯಾರ್ಥಿ ಹಾಗೂ ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಆತ್ಮಹತ್ಯೆ ಪ್ರಕಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದರು.
ಕೊಲ್ಲೂರು ಪೊಲೀಸರಿಗೆ ಕ್ವಾಟರ್ಸ್ಗಳಿಗೆ ಶಾಸಕರು ಪ್ರಸ್ತಾವನೆ ಸಲ್ಲಿಸಿದರೆ ತಕ್ಷಣವೇ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಎಂಎಲ್ಸಿ ಪ್ರತಾಪಚಂದ್ರ ಶೆಟ್ಟಿ, ಶಾಸಕ ಗೋಪಾಲ ಪೂಜಾರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎ ಗಫೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ. ಹಿರಿಯಣ್ಣ ಮತ್ತಿತರರು ಉಪಸ್ಥಿತರಿದ್ದರು.