ಅಂಬಲಪಾಡಿ ನಾಟಕೋತ್ಸವ ಉದ್ಘಾಟನೆ
ಉಡುಪಿ, ಜ.14: ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ದೊಂದಿಗೆ ಉಡುಪಿ ರಂಗಭೂಮಿಯ ವತಿಯಿಂದ ದೇವಳದ ತೆರೆದ ರಂಗ ಮಂದಿರದಲ್ಲಿ ದಿ.ನಿ.ಬೀ.ಅಣ್ಣಾಜಿ ಬಲ್ಲಾಳ್ ಸ್ಮರಣಾರ್ಥ ಆಯೋಜಿಸಲಾದ ಮೂರು ದಿನಗಳ ಅಂಬಲಪಾಡಿ ನಾಟಕೋತ್ಸವವನ್ನು ಮಾನಸಿಕ ತಜ್ಞ ಡಾ. ಪಿ.ವಿ.ಭಂಡಾರಿ ಶನಿವಾರ ಉದ್ಘಾಟಿಸಿದರು. ಇಂದು ನಾಟಕಗಳ ಸ್ಥಾನವನ್ನು ಟಿವಿ ಧಾರವಾಹಿ ಗಳು ಕಸಿದುಕೊಂಡಿವೆ. ಈಗಿನ ಧಾರವಾಹಿಗಳಿಂದ ಸಮಾಜದಲ್ಲಿ ವಿಚ್ಛೇದನ, ಹಿಂಸೆಗಳು ಜಾಸ್ತಿ ಆಗುತ್ತಿವೆ. ಇವುಗಳ ಮಧ್ಯೆ ಸಾಮಾಜಿಕ ಸಂದೇಶ ಸಾರುವ ನಾಟಕಗಳು ಅತೀ ಅಗತ್ಯವಾಗಿವೆ. ಆದುದರಿಂದ ರಂಗಭೂಮಿಯನ್ನು ಜೀವಂತವಾಗಿ ಇರಿಸಬೇಕಾಗಿದೆ ಎಂದು ಡಾ.ಪಿ.ವಿ.ಭಂಡಾರಿ ಹೇಳಿದರು.
ನಾಟಕವು ಮಕ್ಕಳಲ್ಲಿರುವ ಆತಂಕ ದೂರ ಮಾಡುವ ಸಾಧನವಾಗಿದೆ. ನಾಟಕದಂತಹ ಕಲೆಗಳಿಂದ ಮಕ್ಕಳು ಇತರರೊಂದಿಗೆ ಮಾತನಾಡುವ ಹಾಗೂ ವೇದಿಕೆಯಲ್ಲಿ ನಟಿಸುವ ಧೈರ್ಯವನ್ನು ಮೈಗೂಡಿಸಿಕೊಳ್ಳುತ್ತಾರೆ. ಯುವಕರಲ್ಲಿರುವ ಅರ್ಹತೆಯನ್ನು ಗುರುತಿಸಲು ಇಂತಹ ಕಲೆಗಳಿಂದ ಸಾಧ್ಯ ವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ವಹಿಸಿದ್ದರು. ಅತಿಥಿಯಾಗಿ ಕಡೆಕಾರ್ ಲಯನ್ಸ್ ಕ್ಲಬ್ನ ಅಧ್ಯಕ್ಷ ಜಗನ್ನಾಥ್ ಕಡೆಕಾರ್ ಉಪಸ್ಥಿತರಿದ್ದರು. ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿ ರಂಗಭೂಮಿ ತಂಡದಿಂದ ‘ರೂಪರೂಪಗಳನು ದಾಟಿ’ ನಾಟಕ ಪ್ರದರ್ಶನಗೊಂಡಿತು.