ರಾಷ್ಟ್ರ ಕವಿ ಗೋವಿಂದ ಪೈ ಸ್ಮಾರಕ ಲೋಕಾರ್ಪಣೆಗೆ ಅಂತಿಮ ಸಿದ್ಧತೆ
ಕಾಸರಗೋಡು, ಜ.15 : ರಾಷ್ಟ್ರ ಕವಿ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಹಾಗೂ ಸ್ಮಾರಕ ಲೋಕಾರ್ಪಣೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ.
ಜನವರಿ 19ರಂದು ಸಂಜೆ 3.30ಕ್ಕೆ ಲೋಕಾರ್ಪಣೆ ಗೊಳ್ಳಲಿದೆ. ಕೇರಳ ಹಾಗೂ ಕರ್ನಾಟಕದ ಮುಖ್ಯ ಮಂತ್ರಿಗಳು , ಸಚಿವದ್ವಯರು ಉಪಸ್ಥಿತರಿರುವರು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಿಂದ ಪೈ ಭವನಿಕಾ ರಂಗ ಮಂದಿರವನ್ನೂ, ಗಿಳಿವಿಂಡು-ರಾಷ್ಟ್ರಕವಿ ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರವನ್ನು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ
ಪುನಶ್ಚೇತನಗೊಂಡ ಗೋವಿಂದ ಪೈ ನಿವಾಸವನ್ನು ಕೇರಳ ಸಾಂಸ್ಕೃತಿಕ ಸಚಿವ ಎ. ಕೆ. ಬಾಲನ್, ಗೋವಿಂದ ಪೈ ಪ್ರತಿಮೆ ಅನಾವರಣವನ್ನು ಕರ್ನಾಟಕ ಕನ್ನಡ ಮತ್ತು ಸಾಂಸ್ಕೃತಿಕ ಖಾತೆ ಸಚಿವೆ ಉಮಾಶ್ರೀ, ಗಿಳಿವಿಂಡು ಯಕ್ಷ ದೇಗುಲವನ್ನು ಕೇರಳ ಸಚಿವ ಇ. ಚಂದ್ರಶೇಖರನ್ , ಪಾರ್ತಿಸುಬ್ಬ ಯಕ್ಷ ವೇದಿಕೆಯನ್ನು ಕರ್ನಾಟಕ ಅರಣ್ಯ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ.
ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸುವರು
ಅತಿಥಿಗಳಾಗಿ ಕಾಸರಗೋಡು ಸಂಸದ ಪಿ . ಕರುಣಾಕರನ್ , ಶಾಸಕರಾದ ಎನ್. ಎ.ನೆಲ್ಲಿಕುನ್ನು , ಕೆ.ಕುಞರಾಮನ್, ಎಂ. ರಾಜಗೋಪಾಲ್, ಜಿಲ್ಲಾಧಿಕಾರಿ ಕೆ.ಜೀವನ್ ಬಾಬು, ಮಾಜಿ ಸಚಿವ ಎಂ.ಎ.ಬೇಬಿ , ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ ಬಶೀರ್ , ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಅಝೀಜ್ ಹಾಜಿ, ಮಾಜಿ ಶಾಸಕ ಸಿ.ಎಚ್ ಕುಞ೦ಬು ಮೊದಲಾದವರು ಉಪಸ್ಥಿತರಿರುವರು.
ಸುಮಾರು 1.83 ಎಕ್ರೆ ಜಮೀನಿನಲ್ಲಿ ತಲೆ ಎತ್ತಿ ನಿಂತಿರುವ ಯೋಜನೆಯು ಗಮನಸೆಳೆಯುತ್ತಿದೆ.
ಯಕ್ಷಗಾನ ಕಲಾರೂಪಗಳಿಗೆ ಮಾತ್ರವಾಗಿ ಒಂದು ವಿಶೇಷ ಮ್ಯೂಸಿಯಂನ್ನು ನಿರ್ಮಿಸಲಾಗಿದೆ.
6 ಅಡಿ ಎತ್ತರದ ಗೋವಿಂದ ಪೈ ಪ್ರತಿಮೆಯನ್ನು ಸ್ಥಾಪಿಸುವ ಕಾರ್ಯ ನಡೆಯುತ್ತಿದೆ.
ಗೋವಿಂದ ಪೈ ನಿವಾಸವನ್ನು ಪರಂಪರಾಗತ ಆಸ್ತಿಯನ್ನಾಗಿ ಸಂರಕ್ಷಿಸಿಡುವ ಜೊತೆಗೆ,ಅವರ ಎಲ್ಲಾ ಕೃತಿಗಳನ್ನು ಡಿಜಿಟಲೀಕ ರಣಗೊಳಿಸಲಾಗಿದೆ. ಗೋವಿಂದ ಪೈನೆಲೆಸಿದ್ದ ಮಂಜೇಶ್ವರ ನಿವಾಸವನ್ನು ಸಂರಕ್ಷಿಸುವ ಉದ್ದೇಶದಿಂದ ಆಧುನೀಕರಿಸಿ ಗಿಳಿವಿಂಡು ಎಂದು ಪುನರ್ ನಾಮಕರಣಗೊಳಿಸುವ ಯೋಜನೆಗೆ 2008ರಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿತ್ತು.
2008ರ ಮಾರ್ಚ್ 23 ರಂದು ಗೋವಿಂದ ಪೈ ಅವರ 125ನೆ ಜನ್ಮದಿನಾಚರಣೆಯಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಒಟ್ಟು ಯೋಜನೆ ಪೂರ್ಣಗೊಳ್ಳಲು 4 ಕೋಟಿ ರೂ. ವೆಚ್ಚ ಮಾಡಲಾಗಿದೆ.ಯೋಜನೆಯ ಅಂತಿಮ ಸಿದ್ಧತೆ ಕುರಿತು ಶನಿವಾರ ಸಂಜೆ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವೀರಪ್ಪ ಮೊಯ್ಲಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.