ಕಾಸರಗೋಡು ಆಡಳಿತಾತ್ಮಕವಾಗಿ ಬೇರೆಯಾದರೂ ಸಂಸ್ಕೃತಿ ಕನ್ನಡವಾಗಿದೆ - ಡಿ.ಎಚ್.ಶಂಕರಮೂರ್ತಿ
ಮಂಜೇಶ್ವರ, ಜ.15: ಆಡಳಿತಾತ್ಮಕವಾಗಿ ಕಾಸರಗೋಡು ಬೇರೆಯಾದರೂ ನಡೆ-ನುಡಿ, ಸಂಸ್ಕೃತಿ, ಚಾರಿತ್ರಿಕವಾಗಿ ಕನ್ನಡ ಪ್ರದೇಶವಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಹೇಳಿದರು.
ಅವರು ಗುರುವಾರ ಮಂಗಳೂರಿನ ಕೊಡಿಯಾಲ್ಬೈಲು ಹೊಟೇಲ್ ಓಶನ್ಪರ್ಲ್ ಸಭಾಂಗಣದಲ್ಲಿ ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆ ಹೊರತಂದ ಖ್ಯಾತ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ ಅವರ ಕಥಕ್ಕಳಿ ಕೃತಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಗಡಿನಾಡಿನಲ್ಲಿ ಆನೇಕ ಸಾಹಿತಿಗಳು ಕನ್ನಡ ಸಾಹಿತ್ಯದ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಕನ್ನಡದ ಬಗ್ಗೆ ನಿಜವಾದ ಅಭಿಮಾನ ಹೊಂದಿರುವವರೂ ಗಡಿನಾಡಿನವರೇ ಆಗಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ಕನ್ನಡದ ಬಗ್ಗೆ ಅಭಿಮಾನ ಶೂನ್ಯವಾಗಿದೆ. ಅದ್ದರಿಂದಲೇ ಮಲಯಾಳದ ಪ್ರಸಿದ್ಧ ಕಲೆಯಾದ ಕಥಕ್ಕಳಿಯನ್ನು ಕನ್ನಡಿಗರಿಗೆ ಪರಿಚಯಿಸುವ ದೊಡ್ಡ ಹೊಣೆಗಾರಿಕೆಯನ್ನು ಕೇಳು ಮಾಸ್ತರ್ ಅವರು ನಿರ್ವಹಿಸಿದ್ದಾರೆ. ಪರಸ್ಪರ ಅರಿವು ಮೂಡಿಸುವಲ್ಲಿ ಭಿನ್ನ ಭಾಷೆ, ಸಂಸ್ಕೃತಿಗಳ ಇನ್ನಷ್ಟು ಕೃತಿಗಳು ಕನ್ನಡ ಸಹಿತ ಇತರ ಪ್ರಾದೇಶಿಕ ಭಾಷೆಗಳಲ್ಲಿ ಮೂಡಿಬರಲಿ ಎಂದು ಅವರು ಹಾರೈಸಿದರು.
ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಮುಂದಿನ ತಲೆಮಾರಿಗೆ ಸಾಂಸ್ಕೃತಿಕವಾಗಿ ಕಲೆಯನ್ನು ಹಸ್ತಾಂತರಿಸುವ ಕೆಲಸ ಶ್ಲಾಘನೀಯ. ಕೇರಳ ರಾಜ್ಯದ ಕಲೆಯಾದ ಕಥಕ್ಕಳಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ್ದಾರೆ. ಅದೇ ರೀತಿಯಲ್ಲಿ ಗಂಡು ಕಲೆ ಯಕ್ಷಗಾನವನ್ನು ಕರ್ನಾಟಕದ ರಾಜ್ಯ ಕಲೆಯಾನ್ನಾಗಿ ಗುರುತಿಸಬೇಕು, ಅಲ್ಲದೇ ಈ ಕಲೆಯನ್ನು ಇತರ ಭಾಷೆಗೂ ಪರಿಚಯಪಡಿಸಬೇಕು ಎಂದರು.
ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಕರ್ನಾಟಕ ಜಾನಪದ ಪರಿಷತ್ತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಕೇಶವ ಪ್ರಸಾದ್ ನಾಣಿತ್ತಿಲು, ಮಲಯಾಳ ಕವಿ ರಾಘವನ್ ಬೆಳ್ಳಿಪ್ಪಾಡಿ, ದೇವಿ ಪ್ರಸಾದ್ ಶೆಟ್ಟಿ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಕ್ರೀಡಾ ಅಂಕಣಕಾರ ಜಗದೀಶ್ ಅಂಚನ್ ಸೂಟರ್ಪೇಟೆ ಅವರನ್ನು ಡಿ.ಎಚ್.ಶಂಕರಮೂರ್ತಿ ಸ್ಮರಣಿಕೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಕರ್ನಾಟಕ ಯಾದವಸಭಾ ಕೇಂದ್ರ ಸಮಿತಿ ಅಧ್ಯಕ್ಷ ಮಧುಸೂದನ ಆಯಾರ್, ಸಾಹಿತಿ ಪ್ರೊ.ಬಿ.ಎಂ.ಇಚ್ಲಂಗೋಡು, ಬ್ಯಾರಿ ಫೆಡರೇಶನ್ ಅಧ್ಯಕ್ಷ ಸೈಫುಲ್ಲಾ ತಂಙಳ್, ಚಿತ್ತರಂಜನ್ ಶೆಟ್ಟಿ, ಐಕಳ ಜಯಪಾಲ ಶೆಟ್ಟಿ, ಉರ್ದು ಕವಿ ಅಝೀಂ ಮಣಿಮುಂಡ, ಕೈರಳಿ ಪ್ರಕಾಶನದ ಎ.ಆರ್.ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.