ಅಲ್ಪಸಂಖ್ಯಾತರ ಕಲ್ಯಾಣದ ಹೆಸರಿನಲ್ಲಿ ಮುಸ್ಲಿಮರನ್ನು ವಿಭಜಿಸುತ್ತಿರುವ ಸಂಘಪರಿವಾರ: ಮುಸ್ಲಿಂ ಒಕ್ಕೂಟ ಖಂಡನೆ
ಮಂಗಳೂರು, ಜ.17: ಸಂಘಪರಿವಾರ ಭಾರತದ ಇತಿಹಾಸದ ಉದ್ದಕ್ಕೂ ರಾಷ್ಟ್ರದ ಅಲ್ಪಸಂಖ್ಯಾತರನ್ನು ಹಾಗೂ ದಲಿತರನ್ನು ದಮನ ಮಾಡುತ್ತಾ ಬಂದಿದೆ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಇತ್ಯಾದಿ ಹಂತದಲ್ಲೂ ಅದರ ವಿರುದ್ಧ ಷಡ್ಯಂತರಗಳನ್ನು ನಡೆಸುತ್ತಾ ಬಂದಿದೆ. ಅದರ ಜೊತೆಗೆ ಈ ರಾಷ್ಟ್ರದ ದಲಿತರು ಮತ್ತು ಮುಸ್ಲಿಮರು ಸಂಘಟಿತರಾಗುವುದು ಹಾಗೂ ಅಭಿವೃದ್ಧಿ ಹೊಂದುವುದನ್ನು ಸಹಿಸಲಾಗದ ಸಂಘಪರಿವಾರ , ರಾಷ್ಟ್ರದಾದ್ಯಂತ ವಿವಿಧ ರೀತಿಯ ವೈಭವೀಕೃತ ಹೆಸರುಗಳನ್ನು ಇಟ್ಟುಕೊಂಡು ಹೊಸ ಸಂಘಟನೆಗಳನ್ನು ರೂಪಿಸಿ ಸಂಘಟಿತರಾಗಿ ಸಮುದಾಯಗಳ ವಿರುದ್ಧ ವಿಷಬೀಜವನ್ನು ಬಿತ್ತಿ ಐಕ್ಯತೆಯನ್ನು ಒಡೆಯುತ್ತಿರುವುದನ್ನು ಮಂಗಳೂರು ಮುಸ್ಲಿಂ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ.
ಇತ್ತೀಚೆಗೆ ಜ.9ರಂದು ನಡೆದ ಸಂಘಪರಿವಾರ ಪ್ರಾಯೋಜಕತ್ವದಲ್ಲಿ ಮಂಗಳೂರು ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಮಕ್ಕಾ ಮಸೀದಿ , ಅಜ್ಮೀರ್ ದರ್ಗಾದ ಬಾಂಬ್ ಸ್ಫೋಟದ ಆರೋಪಿ ಇಂದ್ರೇಶ್ ಕುಮಾರ್ ನ ನೇತೃತ್ವದಲ್ಲಿ ನಡೆದ "ಸರ್ವ ಧರ್ಮ ಸದ್ಭಾವನಾ ಸಂಗೋಷ್ಟಿ" ಎಂಬ ಕಾರ್ಯಕ್ರಮವನ್ನು ಕೇರಳದ ಕ್ಯಾಡರ್ ನಿವೃತ್ತ ನಿರ್ದೇಶಕ ಡಿಜಿಪಿ ಎಂ.ಎನ್ ಕೃಷ್ಣಮೂರ್ತಿಯವರ ಉಸ್ತುವಾರಿಯಲ್ಲಿ ಮಂಗಳೂರು ಪೋಲೀಸ್ ಕಮಿಷನರೇಟ್ ಡಿಸಿಪಿಗಳನ್ನು ಒಳಗೊಂಡಂತೆ ಕೆಲವು ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ಅಲ್ಪಸಂಖ್ಯಾತ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದನ್ನು ಮತ್ತು ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿರುವುದು ಜಿಲ್ಲೆಯ ಅಲ್ಪಸಂಖ್ಯಾತರಲ್ಲಿ ಆತಂಕ ಮೂಡಿಸಿದೆ.
ಸರಕಾರಿ ಇಲಾಖೆಯು ಸಂಘಪರಿವಾರದ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಎಲ್ಲಾ ಕಾರಣಕ್ಕೆ ಈ ಕಾರ್ಯಕ್ರಮದಲ್ಲಿ ಮುಖ್ಯ ಪಾತ್ರ ವಹಿಸಿರುವ ಪೋಲೀಸ್ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಬೇಕು ಹಾಗೂ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಜಿಲ್ಲೆಯ ಸರ್ವಮುಸ್ಲಿಮರ ಪರವಾಗಿ ಮಂಗಳೂರು ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹಿಸುತ್ತದೆ. ಮಂಗಳೂರು ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಜ.18ರಂದು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲು ಪ್ರತಿಭಟನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ನ್ಯಾಯವಾದಿ ಸಾದುದ್ದೀನ್ ಸ್ವಾಲಿಹ್ ಹಾಗೂ ಸಂಘಟನೆ ಅಧ್ಯಕ್ಷ ಅಶ್ರಫ್.ಕೆ ಇವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.