ದ.ಕ ಜಿಲ್ಲಾ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ
ಮಂಗಳೂರು,ಜ.17:ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಾದರಿಯ 300 ನೂತನ ವಸತಿ ಶಾಲೆಗಳನ್ನು ಆರಂಭಿಸುವ ಗುರಿಹೊಂದಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಹೆಚ್.ಆಂಜನೇಯ ತಿಳಿಸಿದ್ದಾರೆ.
ನಗರದ ದೇರೆ ಬೈಲ್ ಬಳಿಯಲ್ಲಿ 12 ಕೋಟಿ ರೂ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಅಂಬೇಡ್ಕರ್ ಭವನಕ್ಕೆ ಅವರು ಇಂದು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ರಾಜ್ಯದಲ್ಲಿ 560 ವಸತಿ ಶಾಲೆಗಳಿವೆ. ಆದರೂ ದಲಿತರು ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನೆಲೆಯಲ್ಲಿ ವಸತಿ ಶಾಲೆಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಶಿಕ್ಷಣ ಎಲ್ಲರಿಗೂ ದೊರೆಯಬೇಕು ಶಿಕ್ಷಣ ಇಲ್ಲದ ಸಮಾಜ ಕ್ಷೀಣಿಸುತ್ತದೆ. ಶಿಕ್ಷಣದೊಂದಿಗೆ ಸಂಘಟಿತರಾಗಿ ಎನ್ನುವುದು ಡಾ.ಬಾಬಾ ಸಾಹೇಬರ ಕರೆಯಾಗಿದೆ.ಜಿಲ್ಲೆಯಲ್ಲಿ ದಲಿತರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಇಲ್ಲದೆ ಇದ್ದ ಸಂದರ್ಭದಲ್ಲಿ ಈ ಅವಕಾಶವನ್ನು ಕಲ್ಪಿಸಿಕೊಂಡಲು ಹೋರಾಟ ನಡೆಸಿದ ನಾರಾಯಣ ಗುರುಗಳು,ಕುದ್ಮುಲ್ ರಂಗರಾವ್ರಂತಹ ಮಹಾನೀಯರನ್ನು ತಾನು ಸ್ಮರಿಸಿಕೊಳ್ಳುವುದಾಗಿ ಸಚಿವ ಆಂಜನೇಯ ತಿಳಿಸಿದರು. ಅಂಬೇಡ್ಕರರ 125ನೆ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ಅಂಬೇಡ್ಕರ್ ಭವನ ಯೋಜನೆ ಕಾರ್ಯಗತವಾಗುತ್ತಿರುವುದು ಸರಕಾರದ ಇಚ್ಛಾಶಕ್ತಿಯ ಪ್ರತೀಕವಾಗಿದೆ ಎಂದರು.
ಕೊರಗರಿಗೆ ಮನೆ ನಿರ್ಮಾಣ:
ಜಿಲ್ಲೆಯಲ್ಲಿರುವ ಕೊರಗರಿಗೆ ಅಂಬೇಡ್ಕರ್ ವಸತಿ ಯೋಜನೆಯಿಂದ ಒಂದೂವರೆ ಲಕ್ಷ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ 2ಲಕ್ಷ ರೂ ಅನುದಾನದೊಂದಿಗೆ ಸುಮಾರು ಮೂರೂವರೆ ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆ ಸರಕಾರದ ಮುಂದಿದೆ ಎಂದು ಸಚಿವ ಆಂಜನೇಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 150 ಕೋಟಿ ರೂ ವೆಚ್ಚದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ ಸಂಸ್ಥೆಯನ್ನು ಆರಂಭಿಸುವ ಯೋಜನೆ ಇದೆ. ಜೊತೆಗೆ ಈ ವರ್ಷ ಭಾರತದಲ್ಲಿ ಮೊದಲ ಬಾರಿಗೆ ಡಾ.ಬಾಬಾ ಸಾಹೇಬರ ಬಗ್ಗೆ ವಿಶೇಷವಾದ ಅಂತರಾಷ್ಟ್ರೀಯ ವಿಚಾರಸಂಕಿರಣವನ್ನು ಏರ್ಪಡಿಸಲಾಗುವುದು.ನಿವೇಶನ ರಹಿತ ದಲಿತರಿಗೆ ರಾಜ್ಯದಲ್ಲಿ 4ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಆಂಜನೇಯ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡುತ್ತಾ , ಹಲವು ವರ್ಷಗಳ ಹಿಂದಿನ ಬೇಡಿಕೆಯಾಗಿದ್ದ ಅಂಬೇಡ್ಕರ್ ಭವನ ಎಲ್ಲಾ ದಲಿತ ಸಂಘಟನೆಗಳ ಆಶಯದಂತೆ ದೇರೆ ಬೈಲಿನ ಪ್ರದೇಶದಲ್ಲಿ ನಿರ್ಮಿಸಲು ಸರಕಾರದ ಸಹಾಯ ಅನುಮತಿ ದೊರೆತಿದೆ.ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಜೆಟ್ನಲ್ಲಿ ಪ.ಜಾ,ಪ.ಪಂಜನಸಂಖ್ಯೆಯ ಆಧಾರದಲ್ಲಿ ಅನುದಾನವನ್ನು ಮೀಸಲಾಗಿಟ್ಟು ಅದನ್ನು ವೆಚ್ಚ ಮಾಡುವ ಮಹತ್ವದ ತೀರ್ಮಾನವನ್ನು ಕೈ ಗೊಂಡಿದೆ.ಶೋಷಿತರ ಆಕ್ರೋಶವನ್ನು ಅರಿತುಕೊಳ್ಳಲು ಅವರು ಶತಮಾನಗಳ ಹಿಂದೆ ಅನುಭವಿಸಿದ ನೋವನ್ನು ಅರ್ಥ ಮಾಡಿಕೊಳ್ಳಬೇಕು .ಶೋಷಿತರು ರಾಜಕೀಯ ಶಕ್ತಿಯಾಗಬೇಕು ಎಂದು ರಮಾನಾಥ ರೈ ತಿಳಿಸಿದರು.
ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್,ಶಾಸಕ ಜೆ.ಆರ್.ಲೋಬೊ, ಐವನ್ ಡಿ ಸೋಜ,ಮೇಯರ್ ಹರಿನಾಥ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಮ.ಆರ್.ರವಿ,ಡಿಸಿಪಿ ಡಾ.ಸಂಜೀವ ಪಾಟೀಲ್,ಮನಪಾ ಆಯುಕ್ತ ಮುಹಮ್ಮದ್ ನಝೀರ್,ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮನಪಾ ಸದಸ್ಯರಾದ ಕವಿತಾ ಸನಿಲ್, ಅಪ್ಪಿ ಲತಾ,ರಾಧಾಕೃಷ್ಣ , ನಾಗವೇಣಿ,ರಜನೀಶ್ ಮೊದಲಾದವರು ಉಪಸ್ಥಿತರಿದ್ದರು.