‘ಗಿಳಿ ವಿಂಡು ’ಮಂಜೇಶ್ವರ ಗೊವಿಂದ ಪೈ ಸ್ಮಾರಕ ಭವನ ಲೋಕಾರ್ಪಣೆ

Update: 2017-01-19 15:05 GMT

ಮಂಜೇಶ್ವರ (ಮಂಗಳೂರು,)ಜ.19:ಜಾತ್ಯತೀತ ಮನೋಭಾವದ ಮಹಾನ್ ಸಾಹಿತಿ ಮಂಜೇಶ್ವರ ಗೋವಿಂದ ಪೈ ಅವರ ನೆನಪಿನ ಸ್ಮಾರಕ ಗಿಳಿವಿಂಡು ಅಭಿವೃದ್ದಿಗೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎರಡು ಕೋಟಿ ರೂ ಅನುದಾನ ಘೋಷಿಸಿದ್ದು ಒಂದು ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ ಮುಂದೆಯೂ ಸಹಾಯ ನೀಡುವುದಾಗಿ ತಿಳಿಸಿದರು.ಕೇರಳ ಸರಕಾರದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರೂ ಈ ಸ್ಮಾರಕದ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.

  ಕರ್ನಾಟಕದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಗೌರವಾರ್ಥ ಅವರ ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ದಲ್ಲಿ ಕರ್ನಾಟಕ,ಕೇರಳ ಹಾಗೂ ಕೇಂದ್ರ ಸರಕಾರ ಮತ್ತು ಇತರ ದಾನಿಗಳ ಸಹಕಾರ,ಸಹಯೋಗದೊಂದಿಗೆ ನಿರ್ಮಿಸಲಾದ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರದಲ್ಲಿ ಭವನಿಕಾ ರಂಗ ಮಂದಿರವನ್ನು ಉದ್ಘಾಟಿಸಿ ಸಿದ್ದರಾಮಯ್ಯ ಮಾತನಾಡುತ್ತಾ , ಗೋವಿಂದ ಪೈಯವರು ಕನ್ನಡದ ಪ್ರಥಮ ರಾಷ್ಟ್ರಕವಿಯಾಗಿದ್ದರೂ ಮಾತ್ರವಲ್ಲ ಜಾತ್ಯತೀತ ಮನೋಭಾವವನ್ನು ಹೊಂದಿದ್ದ ಮಹಾನ್ ಕವಿ, ಸಾಹಿತಿ, ಸಂಶೋಧಕರಾಗಿದ್ದರು.ಕನ್ನಡ ಸಾಹಿತ್ಯ ಕ್ಷೇತ್ರವನ್ನು ತಮ್ಮ ಪಾಂಡಿತ್ಯದಿಂದ ಸಮೃದ್ಧಗೊಳಿಸಿದವರು ಎಂದು ಹೇಳಿದರು.

120 ಸಂಶೋಧನಾ ಪ್ರಬಂಧ ರಚನೆ ಮಾಡಿದ್ದಾರೆ. ಏಸು, ಬುದ್ದ,ಹಾಗೂ ಇತರ ಕೃತಿಗಳನ್ನು ರಚಿಸಿದ್ದಾರೆ.ಅವರ ಮಾತೃ ಭಾಷೆ ಕೊಂಕಣಿಯಾಗಿದ್ದರೂ ಕನ್ನಡ ಭಾಷೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.ಕನ್ನಡ ಭಾಷೆಯ ಪ್ರಾಚೀನತೆಯ ಬಗ್ಗೆ ಗೋವಿಂದ ಪೈಗಳ ಸಂಶೋಧನೆಯ ಕೊಡುಗೆಯಿಂದ ಕನ್ನಡ ಭಾಷೆಗೆ ಇಂದು ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ದೊರೆಯಲು ಸಾಧ್ಯವಾಗಿದೆ.ಗೋವಿಂದ ಪೈಗಳು ಕನ್ನಡದ ಸೃಜನಶೀಲ ಸಾಹಿತಿಯಾಗಿದ್ದರು.ಅವರ ಸ್ಮಾರಕವನ್ನು ಎರಡು ರಾಜ್ಯ ಸರಕಾರ ಸೇರಿ ನಡೆಸಲು ಮುಂದಾಗಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕ ವಾಗಿದೆ. ಇದೊಂದು ಮಹತ್ವದ ಯೋಜನೆ ಇಲ್ಲಿ ಕಾರ್ಯಗತಗೊಳ್ಳಲು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಪ್ರಮುಖ ಕಾರಣ ಇದಕ್ಕೆ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.

 ಗೋವಿಂದ ಪೈಗಳಿಗೆ ಕೇರಳದ ಮಹಾನ್ ಕವಿ ವೆಲ್ಲತ್ತೋಳ್‌ಗೆ ಸಾಮ್ಯತೆ ಇದೆ:

ಕೇರಳದ ಮಹಾನ್ ಕವಿ ವೆಲ್ಲತ್ತೊಳ್‌ರಿಗೆ ಹಾಗೂ ಮಂಜೇಶ್ವರ ಗೊವಿಂದ ಪೈಗಳಿಗೆ ಹಲವು ವಿಚಾರಗಳಲ್ಲಿ ಸಾಮ್ಯತೆ ಇದೆ. ಇಬ್ಬರೂ ಜಾತ್ಯತೀತ ಮನೋಭಾವದ ಕವಿಗಳಾಗಿದ್ದರು.  ಇಬ್ಬರು ಒಂದೇ ಕಾಲಘಟ್ಟದಲ್ಲಿ ರಾಷ್ಟ್ರ ಕವಿ ಪುರಸ್ಕಾರವನ್ನು ಪಡೆದವರು ಎಂದು ಗಿಳಿವಿಂಡು ಸಾಂಸ್ಕೃತಿಕ ಕೇಂದ್ರವನ್ನು ಉದ್ಘಾಟಿಸಿದ ಕೇರಳ ಸರಕಾರದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.

ಕನ್ನಡ ಸಾಹಿತ್ಯದಲ್ಲಿ ನಡುಗನ್ನಡ ಪ್ರಕಾರವನ್ನು ಬೆಳಕಿಗೆ ತಂದ ಮಂಜೇಶ್ವರ ಗೋವಿಂದ ಪೈಗಳು ಅಗಾಧ ಪಾಂಡಿತ್ಯವನ್ನು ಹೊಂದಿದ್ದವರು ಸಂಸ್ಕೃತ, ಪಾಲಿ, ಗ್ರೀಕ್, ಲ್ಯಾಟಿನ್ ಭಾಷೆ ಸೇರಿದಂತೆ 23 ಭಾಷೆಗಳ ಬಗ್ಗೆ ಜ್ಞಾನ ಹೊಂದಿದ್ದ ಬಹು ಭಾಷಾ ಪಂಡಿತರಾಗಿದ್ದರು. ಮ್ಯಾಕ್ಸ್‌ಮುಲ್ಲರ್‌ನ ರೀತಿಯ ಚಿಂತನೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಗಾಂಧಿ ದಂಡಿ ಸತ್ಯಾಗ್ರಹಕ್ಕೆ ಹೊರಟಾಗ ಮಂಜೇಶ್ವರದ ಗೋವಿಂದ ಪೈಗಳ ಮೂಲಕ ಅವರಿಗೆ ಊರು ಗೋಲು ನೀಡಲಾಗಿತ್ತು ಎನ್ನುವ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ. ಕಾಸರಗೋಡು ಹಿಂದೆ ತುಳುನಾಡಿನ ಭಾಗವಾಗಿದ್ದು, ಬಹುಭಾಷೆ ಸಂಸ್ಕೃತಿಯ ಕೇಂದ್ರವಾಗಿದೆ ಗಾಂಧೀವಾದ, ಸಮಾಜವಾದ,ಕಮ್ಯೂನಿಸಂ ಸಿದ್ಧಾಂತಗಳಿಗೆ ತೆರೆದುಕೊಂಡ ಪ್ರದೇಶ. ಪಾರ್ತಿಸುಬ್ಬ ರಂತಹ ಯಕ್ಷಗಾನ ಕಲೆಯ ಆರಂಭಿಕರ ನೆಲೆಯಾಗಿದೆ, ಹೋರಾಟಗಾರರ ನಾಡಾಗಿದೆ. ಇಕ್ಕೇರಿ ಅರಸರು ಕಟ್ಟಿದ ಪುರಾತನ ಬೇಕಲ ಕೋಟೆ ಇರುವ ಐತಿಹಾಸಿಕ ಮಹತ್ವದ ಕೇಂದ್ರ ಇರುವ ಪ್ರದೇಶದಲ್ಲಿ ಗೋವಿಂದ ಪೈಗಳ ಸ್ಮಾರಕದ ಅಭಿವೃದ್ಧಿ ಸರಕಾರ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಪಿಣರಾಯಿ ವಿಜಯನ್ ತಿಳಿಸಿದರು.

  ಮಂಜೇಶ್ವರ ಗೊವಿಂದ ಪೈಗಳ ಬದುಕೇ ಮಹಾನ್ ಕಾವ್ಯ.ಕೇರಳದ ಮಹಾನ್‌ಕವಿ ವೆಲ್ಲತ್ತೋಳ್ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗಿದೆ ಆದರೆ ಅದೇ ಸಂದರ್ಬದಲ್ಲಿ ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಯವರು ಹೆಸರು ಗಳಿಸಿದ್ದರೂ ಅವರ ಹೆಸರಿನಲ್ಲಿ ಸ್ಮಾರಕ ಇಲ್ಲದೆ ಇರುವುದು ಒಂದು ಕೊರತೆಯಾಗಿತ್ತು ಮತ್ತು ಕನಸಾಗಿತ್ತು ಸುಮಾರು 75ವರ್ಷದ ಹಿಂದಿನ ಆ ಕನಸು ಇಂದು ಸ್ಮಾರಕ ರಚನೆಯಾಗುವ ಮೂಲಕ ನೆರವೇರಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸರಕಾರದ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ತಿಳಿಸಿದರು.

ಗೋವಿಂದ ಪೈಯವರು 1883ರಲ್ಲಿ ಆಗಿನ ಕರ್ನಾಟಕದ ಭಾಗವಾಗಿದ್ದ ಕಾಸರಗೋಡಿನ ಮಂಜೇಶ್ವರದಲ್ಲಿ ಜನಿಸಿದ್ದು ,ಗಿಳಿವಿಂಡು ಸೇರಿದಂತೆ ಹಲವು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು. ಅವರು ಹಿಂದೆ ವಾಸವಾಗಿದ್ದ ಮನೆಯನ್ನು ಸೇರಿದಂತೆ 1.83 ಎಕ್ರೆ ಪ್ರದೇಶದಲ್ಲಿ ಭವನಿಕಾ ರಂಗ ಮಂದಿರ,ರಾಷ್ಟ್ರಕವಿ ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ,ಗಿಳಿವಿಂಡು ಯಕ್ಷದೇಗುಲ,ತೆಂಕು ತಿಟ್ಟು ಯಕ್ಷಗಾನದ ಕಲಾವಿದ ಪಾರ್ಥಿ ಸುಬ್ಬರ ನೆನಪಿನಲ್ಲಿ ಪಾರ್ಥಿ ಸುಬ್ಬ ಯಕ್ಷವೇದಿಕೆ,ನವೀಕೃತ ಗೋವಿಂದ ಪೈ ನಿವಾಸ ಹಾಗೂ ಗೋವಿಂದ ಪೈ ಪ್ರತಿಮೆ ಅನಾವರಣ ಯೋಜನೆಯನ್ನು ಈ ಸಂದರ್ಭದಲ್ಲಿ ಕೇರಳ ಸರಕಾರದ ಸಹಕಾರದೊಂದಿಗೆ ಪೂರ್ಣಗೊಳಿಸಿ ಲೋಕರ್ಪಣೆಗೊಳ್ಳುವಂತಾಗಿದೆ. ಗೋವಿಂದ ಪೈ ಸಮಸ್ತ ದೇಶಕ್ಕೆ ಸೇರಿದ ವ್ಯಕ್ತಿ ಮುಂದಿನ ದಿನಗಳಲ್ಲಿ ಈ ಕೇಂದ್ರ ದೇಶದ ಪ್ರಮುಖ ಸಾಹಿತ್ಯ ಚಟುವಟಿಕೆಯ ಕೇಂದ್ರವಾಗಬೇಕು ಎಂದು ವೀರಪ್ಪ ಮೊಯಿಲಿ ತಿಳಿಸಿದರು.

 ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ , ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಗೋವಿಂದ ಪೈ ಪ್ರತಿಮೆ ಅನಾವರಣ ಗೊಳಿಸಿದರು.

ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವ ಇ ಚಂದ್ರಶೇಖರನ್ ಗಿಳಿವಿಂಡು ಯಕ್ಷ ದೇಗುಲವನ್ನು ,ನವೀಕೃತ ಗೋವಿಂದ ಪೈ ನಿವಾಸವನ್ನು ಉದ್ಘಾಟಿಸಿದರು.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕರ್ನಾಟಕ ಸರಕಾರದ ಅರಣ್ಯ,ಪರಿಸರ ಸಚಿವ ಬಿ.ರಮಾನಾಥ ರೈ ಪಾರ್ಥಿ ಸುಬ್ಬ ವೇದಿಕೆಯನ್ನು ಉದ್ಘಾಟಿಸಿದರು.

ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಸಭಾಧ್ಯಕ್ಷತೆ ವಹಿಸಿದ್ದರು.

ಲೋಕ ಸಭಾ ಸದಸ್ಯ ಪಿ.ಕರಣಾಕರನ್ ,ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್,ಟ್ರಸ್ಟ್‌ನ ಸದಸ್ಯರಾದ ಡಿ.ಕೆ.ಚೌಟ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News