×
Ad

ಜ.21ರಂದು ಬಾಲ್ಯ ವಿವಾಹ ತಡೆ ಆಂದೋಲನಕ್ಕೆ ಜಾಥಾ

Update: 2017-01-19 21:06 IST

ಉಡುಪಿ, ಜ.19: ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ತಡೆಯುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಜ.21ರಂದು ರಾಜ್ಯಾದ್ಯಂತ ಜಾಥಾ ಹಾಗೂ ಆಂದೋಲನವೊಂದನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಮುಖ್ಯಮಂತ್ರಿಗಳು ಇದಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದೇ ಸಮಯಕ್ಕೆ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ವನಿತಾ ತೊರವಿ ತಿಳಿಸಿದ್ದಾರೆ.

ಉಡುಪಿ ತಾಪಂನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೊರವಿ, 21ರಂದು ಶನಿವಾರ ಬೆಳಗ್ಗೆ ನಗರದ ಬೋರ್ಡ್ ಹೈಸ್ಕೂಲ್‌ನಿಂದ ಬಾಲಕಿಯರ ಜೂನಿಯರ್ ಕಾಲೇಜುವರೆಗೆ ಜಾಥಾವನ್ನು ಆಯೋಜಿಸ ಲಾಗಿದೆ. ಬಳಿಕ ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ಜಾಥಾಕ್ಕೆ ವನಿತಾ ತೊರವಿ ಚಾಲನೆ ನೀಡಲಿದ್ದಾರೆ. 10:00ಕ್ಕೆ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ,ಜಿಪಂ ಸಿಇಓ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂವರು ಹೇಳಿದರು.

ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ಜಾಥಾಕ್ಕೆ ವನಿತಾ ತೊರವಿ ಚಾಲನೆ ನೀಡಲಿದ್ದಾರೆ. 10:00ಕ್ಕೆ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ,ಜಿಪಂ ಸಿಇಓ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂವರು ಹೇಳಿದರು. ಕಳೆದ ವರ್ಷ ಶಾಲೆಯನ್ನು ಅರ್ಧದಲ್ಲೇ ತೊರೆದ, ಶಾಲೆಗೆ ಹೋಗದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಮರಳಿ ಕರೆತರುವ ಕಾರ್ಯಕ್ರಮ ನಡೆಸಿದ್ದರೆ, ಈ ಬಾರಿ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದವರು ಹೇಳಿದರು.

ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಸಮಿತಿ ಇದ್ದು, ಅದು ಇತ್ತೀಚೆಗೆ ಬೆಂಗಳೂರಿನಲ್ಲಿ 10 ಇಲಾಖೆಗಳ ಕಾರ್ಯದರ್ಶಿಗಳ ಮಟ್ಟದ ಸಭೆ ಕರೆದು ಬಾಲ್ಯವಿವಾಹ ತಡೆಗಟ್ಟಲು ಕೈಗೊಳ್ಳಬೇಕಾದ ಕಾರ್ಯಸೂಚಿಯ ಕುರಿತು ಚರ್ಚಿಸಿದೆ. ಇದಕ್ಕಾಗಿ ರಾಜ್ಯಾದ್ಯಂತ ಜನರಿಗೆ ಅರಿವು ಮೂಡಿಸಲು ಆಂದೋಲನ ನಡೆಸಲು ನಿರ್ಧರಿಸಿದೆ ಎಂದರು. ಮುಂದಿನ ಆರು ತಿಂಗಳ ಕಾಲ ಪ್ರತಿ ತಿಂಗಳ 21ರಂದು ಈ ಕುರಿತು ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಕರ್ನಾಟಕ ದೇಶದಲ್ಲಿ ರಾಜಸ್ತಾನ ಹಾಗೂ ಗುಜರಾತ್ ಬಳಿಕ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ರಾಯಚೂರು ಬಾಲ್ಯವಿವಾಹದಲ್ಲಿ ಅಗ್ರಸ್ಥಾನದಲ್ಲಿದೆ. ಯಾದಗಿರಿ, ಗುಲ್ಬರ್ಗ, ಕೊಪ್ಪಳ, ವಿಜಯಪುರ ನಂತರದ ಸ್ಥಾನದಲ್ಲಿವೆ ಎಂದರು.

ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ ನಿನ್ನೆ ತಾವು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದು, ಜಿಲ್ಲೆಯಲ್ಲಿ 825 ಮಂದಿ ಮಕ್ಕಳು ಶಾಲೆಯಿಂದ ಹೊರಗುಳಿದ ಮಾಹಿತಿ ಸಿಕ್ಕಿದೆ. ಇವರೆಲ್ಲವೂ ವಲಸೆಗಾರರ ಮಕ್ಕಳು ಎಂದರು. ರಾಜ್ಯದಲ್ಲಿ ಒಟ್ಟು 1,46,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ರಾಯಚೂರು(16,000), ಯಾದಗಿರಿ(14,500), ವಿಜಯಪುರ(12,500) ಮೊದಲ ಮೂರು ಸ್ಥಾನ ದಲ್ಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ಉಡುಪಿಯಲ್ಲಿ ಬಾಲ್ಯವಿವಾಹದ 2 ಪ್ರಕರಣ ಪತ್ತೆ

ಸಾಕ್ಷರತೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಬಾಲ್ಯವಿವಾಹದ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ತಿಳಿಸಿದರು.

ಒಂದು ಪ್ರಕರಣ 2016ರ ಮೇ ತಿಂಗಳಲ್ಲಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಬೇರುವಿನಿಂದ ವರದಿಯಾಗಿದೆ. ಆಗ 16 ವರ್ಷ ತುಂಬಿದ ಬಾಲಕಿಯನ್ನು ಅದೇ ಗ್ರಾಮದ 26 ವರ್ಷ ಪ್ರಾಯದ ಯುವಕನಿಗೆ ಮದುವೆ ಮಾಡಲಾಗಿತ್ತು. ಮದುವೆಯಾದ ಬಳಿಕ ಮಾಹಿತಿ ಸಿಕ್ಕಿ ಈ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿತ್ತು. ಮಕ್ಕಳ ಕಲ್ಯಾಣ ಸಮಿತಿ ಮಕ್ಕಳ ಹೆತ್ತವರನ್ನು ಕರೆಸಿ ಅವರಿಗೆ ಕೌನ್ಸಿಲಿಂಗ್ ನಡೆಸಿ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಬಾಲಕಿಗೆ 18 ವರ್ಷ ತುಂಬುವವರೆಗೆ ತವರು ಮನೆಯಲ್ಲೇ ಉಳಿಸಿಕೊಳ್ಳುವಂತೆ, ಅವರು ಒಟ್ಟಿಗೆ ಸೇರದಂತೆ ನೋಡಿಕೊಳ್ಳುವಂತೆ ಎಚ್ಚರಿಸಲಾಗಿದೆ. ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯ ಮೂಲಕ ಅವರ ಮೇಲೆ ನಿಗಾ ಇರಿಸಲಾಗಿದೆ ಎಂದು ಗ್ರೇಸಿ ತಿಳಿಸಿದರು.

ಮತ್ತೊಂದು ಪ್ರಕರಣ ಕಳೆದ ಡಿಸೆಂಬರ್‌ನಲ್ಲಿ ಕೋಟ ಪಡುಕೆರೆಯಿಂದ ವರದಿಯಾಗಿದೆ. 16 ವರ್ಷದ ಪಿಯುಸಿ ಕಲಿಯುತಿದ್ದ ಬಾಲಕಿಗೆ ಕೋಡಿಯ 23 ವರ್ಷ ಪ್ರಾಯದ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆದ ವಿಷಯ ತಿಳಿದ ಮಕ್ಕಳ ಕಲ್ಯಾಣ ಸಮಿತಿ ಇಲ್ಲೂ ಮಧ್ಯಪ್ರವೇಶಿಸಿ ದಿನ ನಿಗದಿಯಾದಂದು ಮದುವೆ ನಡೆಸದಂತೆ ಇಬ್ಬರಿಗೂ ಎಚ್ಟರಿಸಲಾಗಿತ್ತು. ಬಾಲಕಿ ಈಗ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ ಎಂದು ಅವರು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News