ಕಾಯಕದ ಮಹತ್ವ ಸಾರಿದ ಅಂಬಿಗರ ಚೌಡಯ್ಯ : ಮೀನಾಕ್ಷಿ ಮಾಧವ ಬನ್ನಂಜೆ
ಉಡುಪಿ, ಜ.21: ತಮ್ಮ 300ಕ್ಕೂ ಅಧಿಕ ವಚನಗಳ ಮೂಲಕ ಅಂಬಿಗರ ಚೌಡಯ್ಯ ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ ಎಂದು ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ಶನಿವಾರ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಚೌಡಯ್ಯ ತನ್ನ ದೋಣಿ ನಡೆಸುವ ಕಾಯಕದ ಜೊತೆಯಲ್ಲೇ ಈ ವಚನಗಳನ್ನು ರಚಿಸಿದ್ದಾರೆ ಎಂದರು.
ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಕೋಟ ಪಡುಕೆರೆಯ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಮಾತನಾಡಿ, 12ನೇ ಶತಮಾನದಲ್ಲಿ ಜೀವಿಸಿದ್ದ ಅಂಬಿಗರ ಚೌಡಯ್ಯ, ನೇರ ನಿಷ್ಠುರ ವಚನವಾದಿ ಯಾಗಿದ್ದರು. ತನ್ನ ಕಾಯಕದ ನಡುವೆಯೇ 330 ವಚನಗಳನ್ನು ರಚಿಸಿ, ಮಾನವೀಯ ಸಂದೇಶಗಳನ್ನು, ಬದುಕಿನ ತತ್ವಗಳನ್ನು ತಮ್ಮ ವಚನದಲ್ಲಿ ತಿಳಿಸಿದ್ದಾರೆ ಎಂದರು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆಯ ಪೌರಾಯುಕ್ತ ಮಂಜುನಾಥಯ್ಯ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿ, ತಹಶೀಲ್ದಾರ್ ಮಹೇಶ್ಚಂದ್ರ ವಂದಿಸಿದರು.
ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಅಂಬಿಗರ ಚೌಡಯ್ಯ ಕುರಿತು ಮೀನಾಕ್ಷಿ ಎಸ್.ಎಂ.ರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.