ಅತ್ಯಾಚಾರ; ದಲಿತ ದೌರ್ಜನ್ಯ ಕೇಸು ದಾಖಲು

Update: 2017-01-21 18:30 GMT

ಮೂಡುಬಿದಿರೆ, ಜ.21: ಅಲಂಗಾರಿನ ಆಶ್ರಯ ಕಾಲನಿ ದಲಿತ ಯುವತಿಯೋರ್ವಳನ್ನು ಆಕೆಯ ಸ್ನೇಹಿತ ಬೆಂಗಳೂರಿನಲ್ಲಿ ಅತ್ಯಾಚಾರವೆಸಗಿದ ಪರಿಣಾಮ ಗರ್ಭವತಿಯಾದ ಯುವತಿ ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

ಅಲಂಗಾರಿನ ದಲಿತ ಯುವತಿ ಕೆಲಸ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಅಲ್ಲಿ ಅಲಂಗಾರಿನವನಾದ ಪ್ರವೀಣ್ ಎಂಬಾತನ ಪರಿಚಯವಾಗಿ ಅವನ ಜೊತೆ ಕಟ್ಟಡ ಕೆಲಸಕ್ಕೆ ಹೋಗುತ್ತಿದ್ದಳು. ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿನ ಸೀಗೆಹಳ್ಳಿಯಲ್ಲಿರುವ ಪ್ರವೀಣ್ ಮನೆಯಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮವಿದ್ದು ಅಲಂಗಾರಿನ ಯುವತಿ ಅದರಲ್ಲಿ ಪಾಲ್ಗೊಂಡಿದ್ದಳು. ಈ ಕಾರ್ಯಕ್ರಮಕ್ಕೆ ಬಂದಿದ್ದ ಪ್ರವೀಣನ ಸ್ನೇಹಿತ ಬೆಂಗಳೂರಿನ ಹೇಮಂತ ಗೌಡನಿಗೆ ಯುವತಿಯ ಪರಿಚಯವಾಯಿತು. ಕಾರ್ಯಕ್ರಮದ ಬಳಿಕ ಇವರೆಲ್ಲ ಪ್ರವೀಣನ ಮನೆಯಲ್ಲಿ ಉಳಿದುಕೊಂಡಿದ್ದರೆನ್ನಲಾಗಿದೆ. ಅದೇ ರಾತ್ರಿ ಅಲಂಗಾರಿನ ಯುವತಿಯನ್ನು ಪುಸಲಾಯಿಸಿ ಹೇಮಂತ ಗೌಡ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಮೂಡುಬಿದಿರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಅತ್ಯಾಚಾರಕ್ಕೊಳಗಾದ ಯುವತಿ ಗಭರ್ಧರಿಸಿದ್ದು ಇತ್ತೀಚೆಗೆ ಊರಿಗೆ ಬಂದವಳು ಹೆರಿಗೆಗೆಂದು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಆರೋಪಿ ಬೆಂಗಳೂರಿನ ಹೇಮಂತ ಗೌಡನ ವಿರುದ್ಧ ಅತ್ಯಾಚಾರ ಮತ್ತು ದಲಿತ ದೌರ್ಜನ್ಯ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News