ಜ.26 : ಕಾಪುವಿನಲ್ಲಿ ಪ್ರಥಮ ಸರ್ವೋದಯ ಸಮಾಜ ವಿಚಾರ ಸಂಕಿರಣ
ಕಾಪು,ಜ.23: ಕಾಪುವಿನ ವಿದ್ಯಾನಿಕೇತನ ಸಮೂಹ ಸಂಸ್ಥೆಯ ಸಹಯೋಗದೊಂದಿಗೆ ದ.ಕ. ಮತ್ತು ಉಡುಪಿ ಜಿಲ್ಲಾ ಸರ್ವೋದಯ ಮಂಡಲ, ಭಾರತದ 68ನೇ ಗಣರಾಜ್ಯೋತ್ಸವ ದಿನಾಚರಣೆ ಮತ್ತು ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಒಂದು ದಿನದ ಪ್ರಥಮ ಸರ್ವೋದಯ ಸಮಾಜ ವಿಚಾರ ಸಂಕಿರಣವು ಜನವರಿ 26ರಂದು , ಸ್ಥಳ : ವಿದ್ಯಾನಿಕೇತನ ಸಮೂಹ ಸಂಸ್ಥೆಯ ಸಭಾ ಭವನ ನಡೆಯಲಿದೆ.
ಸ್ಥಿತ್ಯಂತರ ಗತಿಯಲ್ಲಿರುವ ಈಗಿನ ದಿನಗಳಲ್ಲಿ ರೂಪುಗೊಳ್ಳುವ ವಯಸ್ಸಿನ ಶಾಲಾ ಕಾಲೇಜು, ಪದವಿ ಮಟ್ಟದ ವಿದ್ಯಾರ್ಥಿಗಳೆಲ್ಲರಿಗೂ ಗಾಂಧೀಜಿ, ವಿನೋಬ, ಜಯಪ್ರಕಾಶ ನಾರಾಯಣ ಇವರೆಲ್ಲರ ಮಾರ್ಗ ಮತ್ತು ಮೌಲ್ಯಗಳ ಪರಿಚಯ ಹಾಗೆಯೇ ಅವರು ಪ್ರತಿಪಾದಿಸಿದ ಸರ್ವೋದಯ ಸಮಾಜದ ಪರಿಕಲ್ಪನೆ ಮತ್ತು ಅದರ ಪ್ರಸ್ತುತತೆಯನ್ನು ತಿಳಿಸುವ ಪ್ರಯತ್ನವಾಗಿದೆ. ಈ ವಿಚಾರ ಸಂಕಿರಣದಲ್ಲಿ ದ.ಕ. ಉಡುಪಿ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಹಲವಾರು ಶಾಲಾ ಕಾಲೇಜು ವಿದ್ಯಾರ್ಥಿಗಳೂ ಭಾಗವಹಿಸಲಿದ್ದಾರೆ.
ವಿಚಾರ ಸಂಕಿರಣದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸರ್ವೋದಯದ ಜಿಲ್ಲಾ ಸಂಚಾಲಕರೂ ಆದ ಬದಿಯಡ್ಕ ನಾಮದೇವ ಶೆಣೈಯವರು ಭಾಗವಹಿಸಿವರು. ವಿಚಾರ ಸಂಕಿರಣವನ್ನು ವಿದ್ಯಾನಿಕೇತನ ಸಮೂಹ ಸಂಸ್ಥೆಗಳು ಕಾಪು ಇದರ ಅಧ್ಯಕ್ಷರಾಗಿರುವ ಕೆ.ಪಿ. ಆಚಾರ್ಯರವರು ಉದ್ಘಾಟಿಸಲಿರುವರು. ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ದ.ಕ. ಮತ್ತು ಉಡುಪಿ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಲಿರುವರು. ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಎಲ್. ನರಸಿಂಹಯ್ಯ, ಸಂಘಟನಾ ಕಾರ್ಯದರ್ಶಿ ಡಾ.ಎಚ್. ಎಸ್. ಸುರೇಶ್, ಆಡಳಿತ ಸಮಿತಿ ಸದಸ್ಯ ಶ್ರೀ ಯಶವಂತ ಕೊಡಿಯಾಲ್ ಬೈಲ್, ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜನಾಧಿಕಾರಿ ವಿನುತ ರೈ ಮತ್ತು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ವಿ.ಕೆ. ಉದ್ಯಾವರ, ಯುವ ಜನತೆಗೆ ಮಾರ್ಗದರ್ಶನ ಮಾಡಲಿರುವರು.
ವಿಚಾರ ಸಂಕಿರಣದಲ್ಲಿ ಸರ್ವೋದಯ ಸಮಾಜದ ಮೂಲಭೂತ ತತ್ವವಾದ ಪ್ರಜಾಪ್ರಭುತ್ವದಲ್ಲಿ ಸ್ವಹಿತಕ್ಕಿಂತ ದೇಶದ ಹಿತ ಮೇಲು ಎಂದು ವಿಚಾರ ಸಂಕಿರಣದಲ್ಲಿ ಯುವ ಜನತೆಯೊಂದಿಗೆ ಚಿಂತನೆ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.