ಕಂಬಳ ಉಳಿಸಲು ರಾಜ್ಯ ಸರಕಾರ ಬೆಂಬಲ: ಸಚಿವ ಖಾದರ್
Update: 2017-01-23 16:45 GMT
ಮಂಗಳೂರು, ಜ.23: ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಸರಕಾರ ಸದಾ ಬೆಂಬಲಿಸುತ್ತದೆ ಎಂದು ರಾಜ್ಯ ಅಹಾರ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಯಕ್ಷಗಾನ ಹಾಗೂ ಕಂಬಳ ಕರಾವಳಿಯ ಸಂಸ್ಕೃತಿಯ ಎರಡು ಕಣ್ಣುಗಳು. ಹೈಕೋರ್ಟಿನಲ್ಲಿ ನಡೆಯುತ್ತಿರುವ ಕಂಬಳ ವಿಷಯದಲ್ಲಿ ಕರಾವಳಿಯ ಪರ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ. ಕರ್ನಾಟಕ ಸರಕಾರವು ಹೈಕೋರ್ಟಿನಲ್ಲಿ ಕಂಬಳ ಪರವಾಗಿ ವಾದ ಮಂಡಿಸಲಿದೆ. ಕಂಬಳ ನಡೆಸಲು ಸರಕಾರ ಸಂಪೂರ್ಣ ಬೆಂಬಲ ನೀಡಲಿದೆ. ಕಂಬಳ ಪರ ನಿಂತು ನೇರ ಹಾಗೂ ಸ್ಪಷ್ಟವಾಗಿ ಬೆಂಬಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸಚಿವ ಖಾದರ್ ತಿಳಿಸಿದ್ದಾರೆ.
ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರಕಾರ ಬೆಂಬಲ ನೀಡಿದ್ದು, ಕಂಬಳ ಕ್ರೀಡೆಗೂ ಬೆಂಬಲ ನೀಡುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ ಎಂದು ಸಚಿವ ಖಾದರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.