ಕಂಬಳ ಉಳಿಸಲು ಸರ್ವ ಪ್ರಯತ್ನ: ರಮಾನಾಥ ರೈ

Update: 2017-01-23 16:56 GMT

ಮಂಗಳೂರು, ಜ.23: ದ.ಕ ಜಿಲ್ಲೆಯ ಜಾನಪದ ಕಲೆಯಾದ ‘ಕಂಬಳ’ವನ್ನು ರಕ್ಷಿಸಲು ಕಾಂಗ್ರೆಸ್ ಕಟಿಬದ್ಧವಾಗಿದೆ. ಈ ಕಲೆಗೆ ಕಾಂಗ್ರೆಸ್ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹೇರುವ ನಿರಂತರ ಪ್ರಯತ್ನ ನಡೆಸಿದೆ. ಈ ನೆಲೆಯಲ್ಲಿ ಕೇಂದ್ರ ಸರಕಾರ ಜಲ್ಲಿಕಟ್ಟುಗೆ ನೀಡಿದ ಪ್ರಾಮುಖ್ಯತೆಯನ್ನು ಕಂಬಳಕ್ಕೂ ನೀಡಬೇಕು. ಅಲ್ಲದೆ ಎಲ್ಲ ಗೊಂದಲ ಪರಿಹರಿಸಿ ಕಂಬಳವನ್ನು ಉಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಸೋಮವಾರ ಕದ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ನೂತನ ಎ.ಪಿ.ಎಂ.ಸಿ. ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ಬಳಿಕ ಅವರು ಮಾತನಾಡಿದರು.

ಕಂಬಳಕ್ಕೆ ಮೊತ್ತ ಮೊದಲ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅನುದಾನ ನೀಡಿದ ಹೆಗ್ಗಳಿಕೆ ಕಾಂಗ್ರೆಸ್ ನೇತೃತ್ವದ ಸರಕಾರಕ್ಕಿದೆ. ನೋಟು ಅಮಾನ್ಯದಿಂದ ಜನ ಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಇದು ಬಡಜನರ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದು ಸಚಿವ ರೈ ನುಡಿದರು.

ಜಿಲ್ಲೆಯ ಎಲ್ಲ ಬ್ಲಾಕ್‌ಗಳಲ್ಲಿ ಇಂದಿರಾಗಾಂಧಿ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಆಚರಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಗಾಂಧಿ ಕಟ್ಟೆ ನಿರ್ಮಿಸಬೇಕು, 94 ಸಿಸಿ ಹಾಗೂ ಇತರ ಸರಕಾರಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಚಿವ ರಮಾನಾಥ ರೈ ಕರೆ ನೀಡಿದರು.

 ವೇದಿಕೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಬಿ.ಅಭಯಚಂದ್ರ ಜೈನ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್, ಮುಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಪಕ್ಷದ ಮುಖಂಡರಾದ ಚಂದ್ರಹಾಸ ಕರ್ಕೇರ, ಶಶಿಧರ್ ಹೆಗ್ಡೆ, ಬಿ.ಇಬ್ರಾಹೀಂ, ಪಿ.ವಿ.ಮೋಹನ್, ಕಣಚೂರು ಮೋನು, ಎ.ಸಿ.ಭಂಡಾರಿ, ಶಾಲೆಟ್ ಪಿಂಟೊ, ಎಚ್.ಎಂ.ಅಶ್ರಫ್, ಧರಣೇಂದ್ರ ಕುಮಾರ್, ಅಬ್ಬಾಸ್ ಅಲಿ, ಧನಂಜಯ ಮಟ್ಟು, ವಲೇರಿಯನ್ ಡಿಸೋಜ, ವಿಜಯ್ ರೈ ಕಡಬ, ಫಝಲ್ ರಹೀಂ, ಪ್ರವೀಣ್ ಚಂದ್ರ ಆಳ್ವ, ಆರ್.ಕೆ. ಪೃಥ್ವಿರಾಜ್, ಉಮಾನಾಥ್ ಶೆಟ್ಟಿ, ಡಾ. ರಘ, ಸ್ಟಾನಿ ಅಲ್ವಾರೀಸ್, ಸಂತೋಷ್ ಕುಮಾರ್ ಶೆಟ್ಟಿ, ಬಿ.ಕೆ. ಇದಿನಬ್ಬ, ಎಂ.ಎಸ್. ಮುಹಮ್ಮದ್, ಹರೀಶ್ ಕುಮಾರ್, ಶಬ್ಬೀರ್ ಸಿದ್ಧಕಟ್ಟೆ, ಬಲರಾಜ್ ರೈ, ವಿಟ್ಲ ಅಬ್ದುಲ್ ಖಾದರ್, ಹರ್ಷರಾಜ್ ಮುದ್ಯ, ಕೆ. ಅಶ್ರಫ್, ಬಾಲಕೃಷ್ಣ ಶೆಟ್ಟಿ, ಹಿಲ್ಡಾ ಆಳ್ವ, ಮಿಥುನ್ ರೈ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಉಸ್ತುವಾರಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ಕಾಂಗ್ರೆಸ್ ಪತ್ರಿಕಾ ಕಾರ್ಯದರ್ಶಿ ಟಿ.ಕೆ.ಸುಧೀರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News