ಉಪ್ಪಿನಂಗಡಿ: ಜ.26ರಂದು ಎಸ್ಕೆಎಸ್ಸೆಸೆಫ್ ನಿಂದ ಮಾನವ ಸರಪಳಿ
ಮಂಗಳೂರು, ಜ.24: ಎಸ್ಕೆಎಸ್ಸೆಸೆಫ್ ಕೇಂದ್ರ ಸಮಿತಿಯ ಆದೇಶದ ಮೇರೆಗೆ ಪ್ರತಿವರ್ಷದಂತೆ ಜ.26ರಂದು ‘ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ’ ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ನಡೆಸಲ್ಪಡುವ ಮಾನವ ಸರಪಳಿ ಕಾರ್ಯಕ್ರಮವು ಉಪ್ಪಿನಂಗಡಿಯ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಎಸ್ಕೆಎಸ್ಸೆಸ್ಸೆಫ್ನ ಜಿಲ್ಲಾ ಕೋಶಾಧಿಕಾರಿ ಜಲೀಲ್ ಬದ್ರಿಯಾ ತಿಳಿಸಿದ್ದಾರೆ.
ಮಂಗಳವಾರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶದ ಸಂವಿಧಾನ ಜಾರಿಯಾಗಿದ್ದಾಗಿನಿಂದ ಪ್ರತೀ ವರ್ಷವೂ ಎಸ್ಕೆಎಸ್ಸೆಸೆಫ್ ಜಿಲ್ಲಾ ಸಮಿತಿಯು ಮಾನವ ಸರಪಳಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಪ್ರಸ್ತುತ ಕಾರ್ಯಕ್ರಮವು ಸಕಾಲಿಕ ಬೇಡಿಕೆಯಾಗಿದ್ದಲ್ಲದೆ ಜನಸಾಮಾನ್ಯರ ಪ್ರಶಂಸೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಜ.26ರಂದು ಬೆಳಗ್ಗೆ 9:30ಕ್ಕೆ ಕೂಟೇಲು ದರ್ಗಾ ಝಿಯಾರತ್ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 10 ಗಂಟೆಗೆ ಸೈಯದ್ ಅನಸ್ ತಂಙಳ್ ಗಂಡಿಬಗಿಲು ರಾಷ್ಟ್ರ ಧ್ವಜಾರೋಹಣ ಗೈಯಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಾವಿರಾರು ಜನ ಪಾಲ್ಗೊಳ್ಳುವ ಈ ಜಾಥಾವನ್ನು ಆತೂರು ಮುದರ್ರಿಸ್ ಅಸ್ಸಯದ್ ಜುನೈದ್ ಜಿಫ್ರಿ ತಂಙಳ್ ಉದ್ಘಾಟಿಸಲಿದ್ದಾರೆ.
ಜಾಥಾದಲ್ಲಿ ಸಮವಸ್ತ್ರಧಾರಿಗಳಾದ ವಿಖಾಯ ಸ್ವಯಂ ಸೇವಕರು, ತ್ವಲಬಾ ವಿಂಗ್ ಸದಸ್ಯರು, ಕ್ಯಾಂಪಸ್ ವಿಂಗ್ ಸದಸ್ಯರು, ಜಿಲ್ಲೆಯ ಖ್ಯಾತ ಧಫ್, ಸ್ಕೌಟ್ ತಂಡಗಳು ಭಾಗವಹಿಸಲಿದೆ ಎಂದು ಹೇಳಿದರು.
ಸಂಜೆ 4 ಗಂಟೆಗೆ ಕಾಲೇಜು ಮೈದಾನದಲ್ಲಿ ಶೈಖುನಾ ಕೋಟುಮಲ ಬಾಪು ಉಸ್ತಾದ್ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಸ್ಸಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ದುಆಃ ಗೈಯಲಿದ್ದಾರೆ. ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಸ್ವಾಗತ ಸಮಿತಿಯ ಚೇರ್ಮನ್ ಮುಸ್ತಫಾ ಹಾಜಿ ಕೆಂಪಿ ಸ್ವಾಗತ ಭಾಷಣ ಮಾಡಲಿದ್ದಾರೆ. ಹಾಫಿಳ್ ತ್ವಯಿಬ್ ಅಲ್-ಖಾಸಿಮಿ ಕಿರಾ ಅತ್ ಪಠಿಸಲಿದ್ದಾರೆ. ಎಸ್ಕೆಎಸ್ಸೆಸೆಫ್ ಕೇಂದ್ರ ಸಮಿತಿ ಉಪಾಧ್ಯಕ್ಷ ಮುಸ್ತಫಾ ಆಶ್ರಫೀ ಕಕ್ಕುಪ್ಪಡಿ, ಸ್ವಧಕತುಲ್ಲಾ ಫೈಝಿ ಪ್ರತಿಜ್ಞೆ ಬೋಧಿಸಲಿದ್ದಾರೆ. ಮಂಗಳನಗರ ದಾರುಸ್ಸಲಾಂ ವಿದ್ಯಾರ್ಥಿಗಳು ರಾಷ್ಟ್ರಗೀತೆ ಆಲಾಪನೆ ಗೈಯಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಹಾರ ಮತ್ತು ಪೂರೈಕೆ ಸಚಿವ ಯು.ಟಿ. ಖಾದರ್, ಮುಖ್ಯ ಸಚೇತಕ ಐವನ್ ಡಿಸೋಜ, ಎಸ್ವೈಎಸ್ನ ಜಿಲ್ಲಾ ಅಧ್ಯಕ್ಷ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾನ, ಪುತ್ತೂರು ಡಿವೈಎಸ್ಪಿ ಪಿ. ಭಾಸ್ಕರ್ ರೈ, ಪ್ರಕಾಶ್ ಶೆಟ್ಟಿ ತುಂಬೆ, ಇಬ್ರಾಹೀಮ್ ಕೋಡಿಜಾಲ್, ಗೇರು ಅಭಿವೃದ್ಧಿ ನಿಗಮದ ಬಿ.ಎಚ್. ಖಾದರ್, ಸಮಸ್ತ ಕರ್ನಾಟಕ ಮುಶಾವರ ಉಪಾಧ್ಯಕ್ಷ ಇಬ್ರಾಹೀಮ್ ಬಾಖವಿ ಕೆ.ಸಿ. ರೋಡ್, ಎಸ್ಕೆಎಸ್ಸೆಸೆಫ್ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ರಾಧಾಕೃಷ್ಣ ನಾಯಕ್ ಉಪ್ಪಿನಂಗಡಿ, ಡಾ. ನಿರಂಜನ್ ರೈ, ಉಮರ್ ದಾರಿಮಿ ಪಟ್ಟೋರಿ, ಗ್ರಾಪಂ ಉಪಾಧ್ಯಕ್ಷ ಅಸ್ಗರ್ ಅಲಿ ಮೇದರಬೆಟ್ಟು, ರೇಂಜ್ ಅಧ್ಯಕ್ಷ ಇಬ್ರಾಹೀಮ್ ದಾರಿಮಿ ಮಠ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಎಸ್ಕೆಎಸ್ಸೆಸೆಫ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಉಪಸ್ಥಿತರಿದ್ದರು