ಗರಡಿಗಳು ಸಾಮಾಜಿಕ ಏಕತೆಯ ಸಾಕಾರ: ಯಡಿಯೂರಪ್ಪ
ಉಡುಪಿ, ಜ.24: ನಂಬಿಕೆಗಳು ವ್ಯಕ್ತಿತ್ವವನ್ನು ರೂಪಿಸುತ್ತದೆ. ನಂಬಿಕೆ ಮೂಢನಂಬಿಕೆ ಆಗದೆ ತತ್ವ ನಿಷ್ಠೆಯಾಗಬೇಕು. ಗರಡಿಗಳು ಸಾಮಾಜಿಕ ಏಕತೆಯ ಸಾಕಾರ. ಇಲ್ಲಿನ ಆಚರಣೆ ಜಾತಿಬೇಧಗಳನ್ನು ಮೀರಿದ ಸಾಮ ರಸ್ಯದ ಆಚರಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ತಿಂಗಳೆ ಪ್ರತಿಷ್ಠಾನದ ವತಿಯಿಂದ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ತುಳುನಾಡ ಗರಡಿಗಳ ಎರಡನೆ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದಿನ ಯುವ ತಲೆಮಾರು ಪಾಶ್ಚಿಮಾತ್ಯ ಸಂಸ್ಕೃತಿಗೆ ಬಲಿಯಾಗುತ್ತಿದೆ. ಆದುದರಿಂದ ನಮ್ಮ ದೇಶಿ ಸಂಸ್ಕೃತಿಯ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕಾ ಗಿದೆ. ಆದುದರಿಂದ ಗರಡಿ ಸೇರಿದಂತೆ ನಮ್ಮ ಸಂಸ್ಕೃತಿಯ ಕುರಿತು ಸಮಗ್ರ ಚಿಂತನೆ ಅಗತ್ಯ. ಇದನ್ನು ಮುಂದಿನ ತಲೆಮಾರಿಗೆ ಸಂರಕ್ಷಿಸುವ ಅಗತ್ಯವಿದೆ ಎಂದರು.
ಭೂತರಾಧನೆ, ಗರಡಿಗಳ ಅಭಿವೃದ್ಧಿಗೆ ಅನುದಾನ ಹಾಗೂ ಅವುಗಳಿಗೆ ಸಂಬಂಧಪಟ್ಟವರಿಗೆ ಮಾಸಶಾನ ನೀಡುವ ಕುರಿತು ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿ ಅಧಿಕಾರಕ್ಕೆ ಬಂದರೆ ಜಾರಿಗೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.
ಶಿರೂರು ಮಠಾಧೀಶ ಶ್ರೀಲಕ್ಷ್ಮಿವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಇರುವ ವೈಶಿಷ್ಟಪೂರ್ಣ ಆರಾಧನೆ ಗಳು ಮನಸ್ಸಿಗೆ ಶಾಂತಿ ನೀಡುತ್ತದೆ. ನ್ಯಾಯದ ವಿಚಾರದಲ್ಲಿ ಪೊಲೀಸ್, ಕೋರ್ಟ್ ಮೇಲಿನ ನಂಬಿಕೆ ಕಳೆದುಕೊಂಡವರು ಅಂತಿಮವಾಗಿ ದೈವದ ಮೊರೆಹೋಗುತ್ತಾರೆ. ಇದರಲ್ಲಿ ಯಾವುದೇ ಅನ್ಯಾಯ ಆಗಲ್ಲ ಎಂಬ ನಂಬಿಕೆ ಜನರದ್ದು ಎಂದರು.
ತಮಿಳುನಾಡಿನ ಜಲ್ಲಿಕಟ್ಟು ಜನರ ಪ್ರಾಣಕ್ಕೆ ಅಪಾಯವಾಗಿದೆ. ಆದರೆ ಕಂಬಳದಲ್ಲಿ ಯಾರಿಗೂ ಅಪಾಯವಿಲ್ಲ. ಆದುದರಿಂದ ಸರಕಾರ ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕರಾವಳಿಯಲ್ಲಿರುವ ಎಲ್ಲ 242 ಗರಡಿಗಳು ಶ್ರೀಮಂತವಲ್ಲ. ಇದರಲ್ಲಿ ಸಾಕಷ್ಟು ಗರಡಿಗಳು ಶಿಥಿಲಾವಸ್ಥೆಯಲ್ಲಿವೆ. ಆದುದರಿಂದ ಗರಡಿಗಳ ಅಭಿವೃದ್ಧಿ ಹಾಗೂ ಆರಾಧನೆಯನ್ನು ಮುಂದುವರೆಸಿಕೊಂಡು ಹೋಗಲು ಅಗತ್ಯ ಅನುದಾನ ಮತ್ತು ಗರಡಿಯನ್ನು ಮುನ್ನಡೆಸುವವರಿಗೆ ಮಾಸಾಶನವನ್ನು ಸರಕಾರ ನೀಡಬೇಕು ಎಂದು ತಿಳಿಸಿದರು.
ಕಂಬಳದ ಪರವಾದ ಧ್ವನಿ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಕಡಿಮೆ ಆಗಿದೆ. ಜಲ್ಲಿಕಟ್ಟು ಮಾದರಿಯಲ್ಲಿಯೇ ಕಂಬಳವನ್ನು ನಡೆಸಲು ಅವಕಾಶ ನೀಡ ಬೇಕು. ಈ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳು ಜ.30ರಂದು ನಡೆಯುವ ಅಧಿವೇಶನದಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ವಹಿಸಿದ್ದರು.
ನವೀನ್ ಚಂದ್ರ ಡಿ.ಸುವರ್ಣ ಮಂಗಳೂರು, ಮುಂಬೈಯ ಉದ್ಯಮಿಗಳಾದ ಕೃಷ್ಣ ವೈ.ಶೆಟ್ಟಿ, ಕೆ.ಎಂ.ಶೆಟ್ಟಿ, ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಮುಖ್ಯಅತಿಥಿಗಳಾಗಿದ್ದರು.
ಸಮ್ಮೇಳನ ಸ್ವಾಗತ ಸಮಿತಿಯ ಗೌರವ ಸಲಹೆಗಾರ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ಉಪಸ್ಥಿತರಿದ್ದರು.
ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು.
ಸಂಚಾಲಕ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಉಡುಪಿ ಮಿಷನ್ ಆಸ್ಪತ್ರೆಯಿಂದ ಸಭಾಂಗಣದವರೆಗೆ ಭವ್ಯ ಮೆರವಣಿಗೆ ನಡೆಯಿತು.