×
Ad

ಜ.27ರಿಂದ 29:ಉಜಿರೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

Update: 2017-01-24 19:22 IST

ಮಂಗಳೂರು , ಜ.24: ದಕ್ಷಿಣ ಕನ್ನಡ ಜಿಲ್ಲೆಯ 21ನೇ ಸಾಹಿತ್ಯ ಸಮ್ಮೇಳನ ಜನವರಿ 27ರಿಂದ 29ರವರಗೆ ಬೆಳ್ತಂಗಡಿಯ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಹಾವೇರಿ ಜಾನಪದ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.ಸಮ್ಮೇಳನಕ್ಕೆ ಪೂರಕವಾದ ಸಿದ್ಧತೆಗಳು ನಡೆಯುತ್ತಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಬಿ.ರಮಾನಾಥ ರೈ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

 ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈಯವರ ಗೌರವಾಧ್ಯಕ್ಷತೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರ ಗೌರವ ಮಾರ್ಗದರ್ಶನದಲ್ಲಿ ಬೆಳ್ತಂಗಡಿಯ ಶಾಸಕರಾದ ವಸಂತ ಬಂಗೇರರ ಗೌರವ ಉಸ್ತುವಾರಿ ಮಾರ್ಗದರ್ಶನದ ಸ್ವಾಗತಿ ಸಮಿತಿಯ ನೇತೃತ್ವದಲ್ಲಿ ಡಾ.ಯಶೋವರ್ಮ, ಧರ್ಮದರ್ಶಿ ವಿಜಯರಾಘವ ಪಡ್ವೆಟ್ನಾಯ ಅವರನ್ನೊಳಗೊಂಡ ತಂಡದಿಂದ ತಯಾರಿ ನಡೆಯುತ್ತಿದೆ.

ಮೂರು ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ ‘ಸ್ವಚ್ಛ ಭಾಷೆ,ಸ್ವಚ್ಛ ಜೀವನ,ಸ್ವಚ್ಛ ಭಾರತ ’ ಆಶಯದೊಂದಿಗೆ ನಡೆಯಲಿದೆ.ಸಮ್ಮೇಳನದ ಧ್ವಜವನ್ನು ಉಜಿರೆ ಜುಮ್ಮಾ ಮಸೀದಿ ಮುಖ್ಯ ಗುರುಗಳಾದ ಅಬೂಸೂಫಿಯಾನ್ ಎಚ್.ಐ.ಇಬ್ರಾಹೀಂ ಮದನಿ ಅರಳಿಸಲಿದ್ದಾರೆ.ಜ.27ರಂದು ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಬ ನಡೆಯಲಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣ ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಶಾಸಕ ವಸಂತ ಬಂಗೇರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ ನಾಡೋಜ ಸಾರಾ ಅಬೂಬಕ್ಕರ್, ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್, ಶಿಶು ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಜಾನಪದ ಕಲಾವಿದರಾದ ಮಾಚಾರು ಗೋಪಾಲ ನಾಯ್ಕ,ಗಂಗು ಮೊದಲಾದವರಿಗೆ ಸನ್ಮಾನ ನಡೆಯಲಿದೆ. ಹಳೆ ಪುಸ್ತಕಗಳ ಪ್ರದರ್ಶನ ಚಿತ್ರಕಲೆ ರಂಗೋಲಿ ಪ್ರದರ್ಶನ ನಡೆಯಲಿದೆ.  ಉಜಿರೆ ಎಸ್‌ಡಿಎಂ ಇಂದ್ರ ಪ್ರಸ್ಥ ಒಳಾಂಗಣ ಸಭಾಂಗಣದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ತಮ್ಮಯ್ಯ,ಬೆಳ್ತಂಗಡಿ ತಾಲೂಕು ಕಸಾಪ ಅದ್ಯಕ್ಷ ಡಾ.ಬಿ.ಯಶೋವರ್ಮ,ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News