×
Ad

ಆಧಾರ್ ಆಧಾರಿತ ನಗದು ರಹಿತ ಪಾವತಿ ಆರ್ಥಿಕ ವ್ಯವಹಾರದ ವಿಸ್ತರಣೆಗೆ ಕ್ರಮ : ರವಿಶಂಕರ ಪ್ರಸಾದ್

Update: 2017-01-25 21:05 IST

ಮಂಗಳೂರು.ಜ.25:  ಆಧಾರ್ ಆಧಾರಿತ ನಗದು ರಹಿತ ಡಿಜಿಟಲ್ ಪಾವತಿಯನ್ನು ವ್ಯಾಪಾರ,  ಮಾರುಕಟ್ಟೆ ಕೈಗಾರಿಕೆ ಸೇರಿದಂತೆ ದೇಶದ ಎಲ್ಲಾ ರಂಗಗಳಲ್ಲಿಯೂ ವಿಸ್ತರಿಸುವ ಯೋಜನೆಯನ್ನು ಸರಕಾರ ಹೊಂದಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿ ಶಂಕರ ಪ್ರಸಾದ್ ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಗರದ ಪುರಭವನದಲ್ಲಿ ಇಂದು ಹಮ್ಮಿಕೊಂಡ ಡಿಜಿಧನ್ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಂದಿನ ದಿನಗಳಲ್ಲಿ ಬೆರಳಿನ ಗುರುತು ದಾಖಲಿಸಿ ಆರ್ಥಿಕ ವ್ಯವಹಾರ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಡಿಜಿಟಲ್ ಪಾವತಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು. ಮಂಗಳೂರಿನಲ್ಲಿ 30ನೆ ಡಿಜಿಧನ್ ಮೇಳ ಮತ್ತು ಲಕ್ಕಿ ಗ್ರಾಹಕ ಯೋಜನೆಯ ಲಕ್ಕಿಡ್ರಾ ನಡೆದಿದೆ. ಇದುವರೆಗೆ 5ಲಕ್ಷ ಗ್ರಾಹಕರಿಗೆ 6 ಕೋಟಿ ರೂ. ಗಳನ್ನು ನೀಡಲಾಗಿದೆ. ಭಾರತದಲ್ಲಿ ನೋಟುಗಳ ಅಮಾನ್ಯಗೊಳಿಸಿದ ಸಂದರ್ಭದಲ್ಲಿ ದೇಶದ ಆರ್ಥಿಕ ವ್ಯವಹಾರ ನಗದು ರೂಪದಲ್ಲಿ ನಡೆಯುತ್ತಿತ್ತು. ಆದರೆ ಪ್ರಸಕ್ತ ದೇಶದಲ್ಲಿ ನಗದು ರಹಿತ ಡಿಜಿಟಲ್ ಮೂಲಕ ಆರ್ಥಿಕ ಚಟುವಟಿಕೆ ನಡೆಯುವ ಪ್ರಕ್ರಿಯೆ ಚುರುಕುಗೊಂಡಿದೆ. ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು 500,1000 ನೋಟುಗಳನ್ನು ನಿಷೇಧಿಸಲಾಯಿತು. ಇದರಿಂದ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಮಾನವ ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ರವಿಶಂಕರ ಪ್ರಸಾದ್ ತಿಳಿಸಿದ್ದಾರೆ.

 ಅಭಿವೃದ್ಧಿ ಯೋಜನೆಗಳಿಗೆ ಬಜೆಟ್‌ನಲ್ಲಿ 5ಲಕ್ಷ ಕೋಟಿ :

ದೇಶದ 20 ಲಕ್ಷ ಕೋಟಿ ರೂ. ವೆಚ್ಚದ ಬಜೆಟ್‌ನಲ್ಲಿ 5ಲಕ್ಷ ಕೋಟಿ ಅಭಿವೃದ್ಧಿ ಯೋಜನೆಗೆ ಮೀಸಲಿಡಲಾಗುತ್ತಿದೆ. ಆದರೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಪಾವತಿ, ಕ್ಯಾಶ್‌ಲೆಸ್ ಪಾವತಿ ಹೆಚ್ಚಾಗಬೇಕಾಗಿದೆ ಎಂದು ರವಿಶಂಕರ ಪ್ರಸಾದ್ ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಪಾರ್ಕ್ ವಿಸ್ತರಣೆಯ ಬಗ್ಗೆ ಪರಿಶೀಲನೆ:

ರಾಜ್ಯದಲ್ಲಿ ಈಗಾಗಲೇ ಮಾಹಿತಿ ತಂತ್ರಜ್ಞಾನ ಪಾರ್ಕ್ ರಚನೆಯಾಗಿದ್ದು,  ಅದರ ವಿಸ್ತರಣೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ರವಿಶಂಕರ ಪ್ರಸಾದ್ ತಿಳಿಸಿದ್ದಾರೆ.

ಜಿಲ್ಲೆಗೆ ಪ್ರತ್ಯೇಕ ಐಟಿ ಪಾರ್ಕ್:

ಜಿಲ್ಲೆಯಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳಿವೆ ಕಾಲೇಜುಗಳಿವೆ ಪ್ರಮುಖ ಬ್ಯಾಂಕ್‌ಗಳು ಜಿಲ್ಲೆಯಿಂದಲೇ ಆರಂಭವಾಗಿದೆ ಆದುದರಿಂದ ಜಿಲ್ಲೆಗೆ ಪ್ರತ್ಯೇಕವಾಗಿ ಐಟಿ ಪಾರ್ಕ್‌ನ್ನು ರಚನೆ ಮಾಡಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಐಟಿ ಸಚಿವರಿಗೆ ಬಹಿರಂಗವಾಗಿ ಮನವಿ ಸಲ್ಲಿಸಿದರು.ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪ ಗ್ರಾಮದಲ್ಲಿ ಶೇ.100ರಷ್ಟು ಡಿಜಿಟಲ್ ವ್ಯವಹಾರ ಆರಂಭಗೊಂಡಿದೆ.ಮಾರ್ಚ್ ಅಂತ್ಯದೊಳಗೆ ದ.ಕ ಜಿಲ್ಲೆ ಸಂಪೂರ್ಣ ಡಿಜಿಟಲ್ ವ್ಯವಹಾರ ನಡೆಸುವ ಜಿಲ್ಲೆಯಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಸಭೆಯಲ್ಲಿ ಕೇಂದ್ರ ಸರಕಾರದ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ರಾಜ್ಯ ಸಚಿವ ರಮೇಶ್ ಜಿಗಜಿಣಗಿ, ಶಾಸಕರಾದ ಅಭಯ ಚಂದ್ರ ಜೈನ್, ಮೊಹಿಯುದ್ಧೀನ್ ಬಾವ, ಗಣೇಶ್ ಕಾರ್ನಿಕ್, ನೀತಿ ಆಯೋಗದ ಸಲಹೆಗಾರ ಯೋಗೇಂದ್ರ ಸೂರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಮ್.ಆರ್.ರವಿ, ಉಪಮೇಯರ್ ಸುಮಿತ್ರ ಕೆ.ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಡಿಜಿಧನ್ ಯೋಜನೆಯಲ್ಲಿ ಸಕ್ರಿಯವಾಗಿರುವರಿಗೆ ಲ್ಯಾಪ್‌ಟಾಪ್ ನೀಡಿ ಗೌರವಿಸಲಾಯಿತು. ಹಾಸನದ ಉಮ್ಮರ್ ಫಾರೂಕ್, ಬೀದರ್‌ನ ರವಿಶಂಕರ್, ದಾವಣಗೆರೆಯ ಕೈಲಾಸ್, ಧಾರವಾಡದ ಶಿವು, ಬೆಂಗಳೂರು ನಗರದ ಸಲೀಮ ಲ್ಯಾಪ್ ಟಾಪನ್ನು ಸಚಿವರಿಂದ ಸ್ವೀಕರಿಸಿದರು.

 ಡಿಜಿಧನ್ ಲಕ್ಕಿ ಗ್ರಾಹಕ ಪ್ರಶಸ್ತಿಗೆ ಆಯ್ಕೆ ವಿಜೇತರಾದ ನಡೆದು ತುಳಸಿ ಶೆಟ್ಟಿ, ರವಿಂದ್ರ ನಾಥ ಕಾಮತ್, ಪೂರ್ಣಿಮಾ, ಜೊಸ್, ಸುರೇಶ್ ಹೆಗ್ಡೆ, ಗೀತಾ ಮೂಲ್ಯರವರಿಗೆ ಸಾಂಕೇತಿಕವಾಗಿ ಪ್ರಶಸ್ತಿ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು.ಮನಪಾ ಉಪ ಆಯುಕ್ತ ಗೋಕುಲ್ ದಾಸ್ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News