ಶಿರಿಯಾರ ಗ್ರಾಪಂ ದಲಿತ ಅಧ್ಯಕ್ಷೆಗೆ ಕಿರುಕುಳ ಪ್ರಕರಣ: ಮರು ಪ್ರಕರಣ ದಾಖಲಿಸಿ ಸಮಗ್ರ ತನಿಖೆ- ಎಸ್ಪಿ ಬಾಲಕೃಷ್ಣ
ಉಡುಪಿ, ಜ.28: ಶಿರಿಯಾರ ಗ್ರಾಪಂ ಅಧ್ಯಕ್ಷೆ, ದಲಿತ ಮಹಿಳೆ ಜ್ಯೋತಿ ಅವರಿಗೆ ಅಸಹಕಾರ ಹಾಗೂ ಕಿರುಕುಳ ನೀಡಿ ಗ್ರಾಪಂ ಸಭೆಗಳನ್ನು ನಡೆಸಲು ಅಡ್ಡಿ ಮಾಡುತ್ತಿರುವ ಕುರಿತು ಮರು ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ಜರಗಿದ ದಲಿತರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈ ಪ್ರಕರಣಕ್ಕೆ ಸಾಕ್ಷಿ ಇಲ್ಲ ಅಂತ ಹೇಳಿ ಪೊಲೀಸರು ಬಿ ರಿಪೋರ್ಟ್ ಹಾಕಿರುವು ದಕ್ಕೆ ದಲಿತ ಮುಖಂಡರು ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಮರು ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ವಿಶ್ವನಾಥ್ ಪೇತ್ರಿ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ ಸಹಿತ ದೂರು ನೀಡಲಾಗಿದೆ. ಆದರೂ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ. ಇದರಲ್ಲಿ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ದಸಂಸ ಮುಖಂಡರಾದ ಶ್ಯಾಮ್ರಾಜ್ ಬಿರ್ತಿ, ಉದಯ ಕುಮಾರ್ ತಲ್ಲೂರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
ಈ ಬಗ್ಗೆ ಸರಿಯಾದ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸುಂದರ್ ಮಾಸ್ಟರ್ ಎಚ್ಚರಿಕೆ ನೀಡಿದರು. ಈ ಪ್ರಕರಣದ ಸಂಬಂಧ ಇನ್ನೊಂದು ದೂರು ನೀಡಿದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗು ವುದು ಎಂದು ಎಸ್ಪಿ ಬಾಲಕೃಷ್ಣ ಭರವಸೆ ನೀಡಿದರು.
ಜಾತಿ ಪ್ರಮಾಣಪತ್ರ ಅಗತ್ಯವಿಲ್ಲ:ದಲಿತ ಮುಖಂಡ, ನ್ಯಾಯವಾದಿ ಮಂಜುನಾಥ್ ಗಿಳಿಯಾರು ಮಾತನಾಡಿ, ಮಣಿಪಾಲ ಮಣ್ಣಪಳ್ಳ ಗ್ರಂಥಾಲ ಯದ ದಲಿತ ಗ್ರಂಥಪಾಲಕಿಗೆ ಮೇಲ್ಜಾತಿಯವರು ಮಾಡಿರುವ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕುರಿತು ಪ್ರಕರಣ ದಾಖಲಿಸುವ ವೇಳೆ ಮಣಿಪಾಲ ಪೊಲೀಸ್ ನಿರೀಕ್ಷಕರು ಜಾತಿ ಪ್ರಮಾಣ ಪತ್ರ ಸಲ್ಲಿಸುವಂತೆ ತಿಳಿಸಿ, ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂದರು.
ಆರೋಪಿಗಳು ಠಾಣೆಯಲ್ಲಿದ್ದರೂ ಅವರನ್ನು ಬಂಧಿಸದೆ ಅವರ ಪರ ವಹಿಸಿ ಅನ್ಯಾಯ ಎಸಗಿದ್ದಾರೆ. ಪಿರ್ಯಾದಿ ಬರೆದುಕೊಟ್ಟವರ ಹೆಸರನ್ನು ನಮೂದಿಸುವ ಮೂಲಕ ಆರೋಪಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮಣಿಪಾಲ ನಿರೀಕ್ಷಕರ ವಿರುದ್ಧ ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮ ಜರಗಿಸುವಂತೆ ಅವರು ಆಗ್ರಹಿಸಿದರು.
ದಲಿತರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವ ವೇಳೆ ಜಾತಿ ಪ್ರಮಾಣಪತ್ರವನ್ನು ಸಲ್ಲಿಸುವ ಮತ್ತು ಪಿರ್ಯಾದಿ ಬರೆದು ಕೊಟ್ಟವರ ಹೆಸರು ನಮೂದಿಸುವ ಅಗತ್ಯವಿಲ್ಲ. ಅದೆಲ್ಲವೂ ತನಿಖಾ ಹಂತ ದಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ನಿರೀಕ್ಷಕರ ಕರ್ತವ್ಯ ಲೋಪದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಬಾಲಕೃಷ್ಣ ತಿಳಿಸಿದರು.
ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ: ದಲಿತೆ ಎಂಬ ಕಾರಣಕ್ಕೆ ಮಣಿಪಾಲ ರಜತಾದ್ರಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಹೊರಗುತ್ತಿಗೆ ಆಧಾರದ ಉದ್ಯೋಗಿ ಸಂತೆಕಟ್ಟೆ ಕೆಳಾರ್ಕಳಬೆಟ್ಟುವಿನ ಸವಿತಾ ಎಂಬವರಿಗೆ ಮಂಡಳಿಯ ಅಧಿಕಾರಿ ವಿದ್ಯಾ ನಾಯಕ್ ಜಾತಿ ನಿಂದನೆ ಮಾಡಿ ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಆರೋಪಿ ಅಧಿಕಾರಿಯನ್ನು ಈವರೆಗೆ ಬಂಧಿಸಿಲ್ಲ ಎಂದು ದಲಿತ ಹೋರಾಟಗಾರ ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ದೌರ್ಜನ್ಯ ಪ್ರಕರಣದ ಯಾವುದೇ ಆರೋಪಿಗಳನ್ನು ಬಂಧಿಸದೆ ರಕ್ಷಣೆ ಮಾಡಲಾಗುತ್ತಿದೆ. ಅದೇ ಬೇರೆ ಪ್ರಕರಣದಲ್ಲಿ ದಲಿತರು ಆರೋಪಿ ಗಳಾಗಿದ್ದರೆ 24ಗಂಟೆಯೊಳಗೆ ಅವರ ಮನೆಗಳಿಗೆ ನುಗ್ಗಿ ಬಂಧಿಸಲಾಗುತ್ತದೆ. ಪೊಲೀಸರ ಈ ರೀತಿಯ ತಾರತಮ್ಯದಿಂದಾಗಿ ದಲಿತರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಉದಯ ಕುಮಾರ್ ತಲ್ಲೂರು ಮಾತನಾಡಿ, ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಪ್ರಕರಣ ದಾಖಲಾದರೂ ಅದರ ಒಂದು ಪ್ರತಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ದಾಖ ಲಾಗಿರುವ ದಲಿತ ದೌರ್ಜನ್ಯ ಪ್ರಕರಣ, ಕ್ರಮ ಹಾಗೂ ಬಿ ರಿಪೋರ್ಟ್ ಸಲ್ಲಿಕೆಯ ವಿವರಗಳನ್ನು ನೀಡಬೇಕು ಎಂದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣು ವರ್ದನ್, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಗಳು, ವಿವಿಧ ದಲಿತ ಸಂಘಟನೆಳ ಮುಖಂಡರು ಉಪಸ್ಥಿತರಿದ್ದರು.
ಅಂಬೇಡ್ಕರ್ ಅವಮಾನ: ವಾರದೊಳಗೆ ಕ್ರಮ
ಫೇಸ್ಬುಕ್ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾ ನಿಸಿದ ಪ್ರಕರಣದಲ್ಲಿ ಈವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವ ವಿರುದ್ಧ ದಲಿತ ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು
ಎರಡು ತಿಂಗಳ ಹಿಂದೆ ಕುಂದಾಪುರದ ಇಬ್ಬರು ಫೇಸ್ಬುಕ್ನಲ್ಲಿ ಅಂಬೇಡ್ಕರ್ರನ್ನು ಅವಮಾನಿಸಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಜರಗಿಸಿಲ್ಲ ಎಂದು ಉದಯ ಕುಮಾರ್ ತಲ್ಲೂರು ಆರೋಪಿಸಿದರು. ಇದಕ್ಕೆ ಪ್ರತ್ರಿಕಿಯಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಆರೋಪಿಗಳು ಫೇಸ್ಬುಕ್ ಅಕೌಂಟ್ನ್ನು ತಕ್ಷಣ ವೇ ಡಿಲಿಟ್ ಮಾಡಿರುವುದರಿಂದ ಅವರ ವಿಳಾಸ ಪತ್ತೆ ಸಾಧ್ಯವಾಗಿಲ್ಲ. ಅದಕ್ಕಾಗಿ ಈ ಬಗ್ಗೆ ತನಿಖೆಗಾಗಿ ಸೈಬರ್ ಕ್ರೈಮ್ ವಿಭಾಗಕ್ಕೆ ಹಸ್ತಾಂತರಿಸ ಲಾಗಿದೆ. ಇನ್ನು ಒಂದು ವಾರದಲ್ಲಿ ಅವರು ನೀಡುವ ವರದಿಯಂತೆ ಕಾನೂನು ಕ್ರಮ ಜರಗಿಸಲಾಗುವುದು ಎಂದರು.