‘ಪದ್ಮಾವತಿ’ ಚಿತ್ರದ ಹೆಸರನ್ನು ಬದಲಿಸುವಂತೆ ಬನ್ಸಾಲಿಗೆ ಆಗ್ರಹ
ಹೊಸದಿಲ್ಲಿ,ಜ.30: ಸಂಜಯ ಲೀಲಾ ಬನ್ಸಾಲಿಯವರು ರಜಪೂತ ಕರಣಿ ಸೇನಾದ ಪ್ರತಿರೋಧವಿಲ್ಲದೇ ತನ್ನ ‘ಪದ್ಮಾವತಿ ’ ಚಿತ್ರದ ಕೆಲಸವನ್ನು ಪುನರಾರಂಭಿಸಲು ಬಯಸಿದ್ದರೆ ಚಿತ್ರವು ಬಿಡುಗಡೆಗೊಳ್ಳುವ ಮುನ್ನ ಅದರ ವೀಕ್ಷಣೆಗೆ ಸೇನಾ ಕಾರ್ಯಕರ್ತ ರಿಗೆ ಅವಕಾಶ ನೀಡಬೇಕು ಮತ್ತು ಚಿತ್ರದ ಹೆಸರನ್ನು ಬದಲಿಸಬೇಕು ಎಂಬ ಹೊಸ ಬೇಡಿಕೆಯನ್ನು ಸಂಘಟನೆಯು ಮುಂದಿರಿಸಿದೆ.
ರಜಪೂತ ರಾಣಿ ಪದ್ಮಾವತಿ ಕುರಿತ ಐತಿಹಾಸಿಕ ಸತ್ಯಗಳನ್ನು ಬನ್ಸಾಲಿ ತಿರುಚಿದ್ದಾರೆ ಎಂದು ಆರೋಪಿಸಿ ಕರಣಿ ಸೇನಾ ಶುಕ್ರವಾರ ಜೈಪುರ ಸಮೀಪದ ಕೋಟೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಬನ್ಸಾಲಿಯವರ ಮೇಲೆ ಹಲ್ಲೆ ನಡೆಸಿತ್ತು. ಚಿತ್ರೀಕರಣಕ್ಕೆ ಹಾಕಲಾಗಿದ್ದ ಸೆಟ್ಗೂ ಹಾನಿಯನ್ನುಂಟುಮಾಡಿತ್ತು. ರಾಣಿ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಡುವೆ ಪ್ರಣಯವನ್ನು ನಿರ್ದೇಶಕರು ಸೃಷ್ಟಿಸಿದ್ದಾರೆ ಎಂದು ಸೇನಾ ಆರೋಪಸಿತ್ತು.
ಯಾವುದೇ ಪ್ರಣಯಭರಿತ ಕನಸಿನ ದೃಶ್ಯ ಅಥವಾ ಯಾವುದೇ ಆಕ್ಷೇಪಾರ್ಹ ದೃಶ್ಯಗಳು ತನ್ನ ಚಿತ್ರದಲ್ಲಿಲ್ಲ ಎಂದು ಹೇಳಿದ ಬನ್ಸಾಲಿ, ಕರಣಿ ಸೇನಾದ ಹೊಸ ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.