×
Ad

ಬುಡಕಟ್ಟು ಜನರು ಸುಲಭದಲ್ಲಿ ಮುಖ್ಯವಾಹಿನಿಗೆ ಬರಬಲ್ಲರು : ಮ್ಯಾಗ್ಸಸೆ ವಿಜೇತ ಡಾ.ಪ್ರಕಾಶ್ ಅಮ್ಟೆ

Update: 2017-02-01 22:52 IST

ಉಡುಪಿ, ಫೆ.1: ದೇಶದಲ್ಲಿ ಈಗಲೂ ತೀರಾ ಹಿಂದುಳಿದಿರುವ ಬುಡಕಟ್ಟು ಜನರನ್ನು ಆತ್ಮೀಯವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಸಾಧ್ಯವಿದೆ. ತಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಅವರಿಗೆ ಅರಿವು ಮೂಡಿಸಲು ಸಾದ್ಯವಿದೆ ಎಂದು ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಡಾ.ಪ್ರಕಾಶ್ ಅಮ್ಟೆ ಅಭಿಪ್ರಾಯ ಪಟ್ಟಿದ್ದಾರೆ.

  2008ರಲ್ಲಿ ಪ್ರತಿಷ್ಠಿತ ಮ್ಯಾಗ್ಸಸೆ ಪ್ರಶಸ್ತಿ ಪಡೆದಿರುವ ಮಹಾರಾಷ್ಟ್ರದ ವೈದ್ಯ ದಂಪತಿ ಡಾ.ಪ್ರಕಾಶ್ ಅಮ್ಟೆ ಹಾಗೂ ಡಾ.ಮಂದಾಕಿನಿ ಅಮ್ಟೆ ಅವರು ಮಣಿಪಾಲ ವಿವಿಯ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಪಾಲ್ಗೊಂಡು ಮಾತನಾಡುತಿದ್ದರು.

ತನ್ನ ತಂದೆ, ಕುಷ್ಠರೋಗಿಗಳ ಸೇವೆಗಾಗಿ 1985ರಲ್ಲಿ ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಗಾಂದಿವಾದಿ ದಿ. ಬಾಬಾ ಅಮ್ಟೆ ಅವರು 1973ರಲ್ಲಿ ಮಹಾರಾಷ್ಟ್ರದಲ್ಲಿ ತೀರಾ ಹಿಂದುಳಿದ ಹಾಗೂ ಬುಡಕಟ್ಟು ಜನರೇ ವಾಸವಾಗಿದ್ದ ಹಳ್ಳಿಯೊಂದರಲ್ಲಿ ಪ್ರಾರಂಭಿಸಿದ್ದ ‘ಲೋಕ ಬಿರಾದರಿ ಪ್ರಕಲ್ಪ’ ಯೋಜನೆಯಲ್ಲಿ 1974ರಲ್ಲಿ ಕೈಜೋಡಿಸಿದ ಡಾ.ಪ್ರಕಾಶ್ ಅಮ್ಟೆ, ವೈದ್ಯೆ ಪತ್ನಿ ಡಾ.ಮಂದಾಕಿನಿ ಅವರೊಂದಿಗೆ ತಂದೆಯ ಆಶ್ರಮದಲ್ಲಿ ಉಚಿತ ವೈದ್ಯಕೀಯ ಕೇಂದ್ರವನ್ನು ಪ್ರಾರಂಭಿಸಿದ್ದರು.

  ಕುಷ್ಠರೋಗ ಎಂಬುದು ಅಂದು ಅಸ್ಪಶ್ಯ ರೋಗವಾಗಿತ್ತು. ಈ ರೋಗಿಯ ಚಿಕಿತ್ಸೆಗೆ ಯಾರೂ ಹತ್ತಿರಬರುತ್ತಿರಲಿಲ್ಲ. ಅಲ್ಲದೇ ತಂದೆ ಕೆಲಸ ಮಾಡುತಿದ್ದ ಪ್ರದೇಶ, ಕಾಡಿನ ಮಧ್ಯದಲ್ಲಿದ್ದು, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಹಾಳು ಕೊಂಪೆಯಾಗಿತ್ತು ಎಂದು ನೆನಪಿಸಿಕೊಂಡರು.

ರೋಗರುಜಿನಗಳಿಂದ ನರಳುತಿದ್ದ ಅವರಿಗೆ ಆಧುನಿಕ ವೈದ್ಯ ಪದ್ಧತಿ ವಿಷಯವೇ ಗೊತ್ತಿರಲಿಲ್ಲ. ಮೊದಲು ಅವರ ವಿಶ್ವಾಸ ಸಂಪಾದಿಸಲು ನಾನು ಮತ್ತು ಮಂದಾಕಿನಿ, ಅವರು ಮಾತನಾಡುತಿದ್ದ ವಿಶಿಷ್ಟ ಬುಡಕಟ್ಟು ಭಾಷೆಯನ್ನು ಕಲಿಯಬೇಕಾಯಿತು. ಇದಕ್ಕಾಗಿ ಕಾಡಿನಲ್ಲಿ ಕೆಲಸ ಮಾಡಿದ್ದ ಕೆಲವು ಅಧಿಕಾರಿಗಳ ಸಹಾಯದಿಂದ ಡಿಕ್ಷನರಿಯನ್ನು ರಚಿಸಬೇಕಾಯಿತು ಎಂದರು.

ಅಧಿಕಾರಿಶಾಹಿಗಳ ದರ್ಪ, ದಬ್ಬಾಳಿಕೆಯಿಂದ ಹೆದರಿದ್ದ ಈ ಜನರ ವಿಶ್ವಾಸ ಸಂಪಾದಿಸಲು ನಾವು ವಿಶೇಷ ಪ್ರಯತ್ನ ನಡೆಸಬೇಕಾಯಿತು. ಖಂಡಿತವಾಗಿ ಈ ಜನರು ಅತ್ಯಂತ ಮುಗ್ದರು. ತಮ್ಮ ಕೇರಿಯಲ್ಲಿ ಯಾವುದೇ ಸೌಲಭ್ಯ ಇಲ್ಲದಿರುವ ಬಗ್ಗೆ, ಆಸ್ಪತ್ರೆಗಳಲ್ಲಿ ತಮ್ಮವರು ಚಿಕಿತ್ಸೆ ಸಿಗದೇ ಸತ್ತರೂ ಅವರು ಸಿಟ್ಟಿಗೇಳುತ್ತಿರಲಿಲ್ಲ. ಪ್ರಾಮಾಣಿಕರೂ, ಪ್ರಾಂಜಲ ಮನಸ್ಸಿನವರೂ ಆದ ಈ ಜನಾಂಗ, ಪಾಲಿಗೆ ಬಂದಿರುವುದೇ ಪಂಚಾಮೃತ ಎಂದು ನಂಬಿದವರು ಎಂದರು.

ಈ ಜನರ ಇದೇ ವಿಶ್ವಾಸವನ್ನು ಮುಂದುವರಿಸಿ ತಾವು ಅವರಿಗೆ ಶಿಕ್ಷಣ ನೀಡುವ ಪ್ರಯತ್ನ ಮಾಡಿದೆವು. ಅಲ್ಲಿ ಶಾಲೆಯನ್ನು ತೆರೆದು ಅವರಿಗೆ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಕಲ್ಪಿಸಿದೆವು. ಕೊನೆಗೆ ಅವರಿಗೆ ಉದ್ಯೋಗ ದೊರಕಲು ಪ್ರಯತ್ನ ಮುಂದುವರಿಯಿತು ಎಂದರು. ಅವರಿಗೆ ಭ್ರಷ್ಟಾಚಾರ ಹಾಗೂ ಶೋಷಣೆಯ ಕುರಿತೂ ಅರಿವು ಮೂಡಿಸಲಾಯಿತು ಎಂದರು.

  ಈ ಬುಡಕಟ್ಟು ಜನರಿಗೆ ಕಾಡು ಪ್ರಾಣಿಗಳನ್ನು ಕೊಲ್ಲದಂತೆ ತಿಳುವಳಿಕೆ ನೀಡಲಾಯಿತು. ಇದರಿಂದ ಅವರ ವಶದಲ್ಲಿದ್ದ ಹೆಬ್ಬಾವು, ಜಿಂಕೆ, ಚಿರತೆ, ಮಂಗಗಳನ್ನು ನಾವು ಪಡೆದು ಅವುಗಳನ್ನು ಆಶ್ರಮದಲ್ಲೇ ಸಾಕುವ ಪ್ರಯತ್ನ ನಡೆಸಿದ್ದೇವೆ. ಇಂದು ಪ್ರಾಣಿಗಳನ್ನು ಸಾಕುವ ಪ್ರತ್ಯೇಕ ಕೇಂದ್ರದಲ್ಲಿ ಅಲ್ಲಿದೆ. ಅವರ ಮಧ್ಯೆ ಪ್ರಚಲಿತವಿದ್ದ ನರ ಬಲಿ ಪದ್ಧತಿಯನ್ನೂ ನಿಲ್ಲಿಸಲು ಶ್ರಮ ಪಡಬೇಕಾಯಿತು ಎಂದು ಡಾ.ಅಮ್ಟೆ ನುಡಿದರು.

 ಪ್ರೀತಿಸಿ ಮದುವೆಯಾದ ಮರುದಿನದಿಂದಲೇ ತಂದೆಯವರ ಸಮಾಜ ಸೇವೆಯೊಂದಿಗೆ ಕೈಜೋಡಿಸಿದ ನಾವು ಈ ಸೇವೆಯಲ್ಲಿ ಮೂರು ದಶಕಗಳನ್ನು ಕಳೆದಿದ್ದೇವೆ. ಇಂದು ನಾವು ವಸತಿ ಶಾಲೆ, ಸುಸಜ್ಜಿತ ಆಸ್ಪತ್ರೆ, ಪ್ರಾಣಿಗಳಿಗಾಗಿ ಕೇಂದ್ರ, ಕರಕುಶಲ ಕೇಂದ್ರವನ್ನು ಪ್ರಾರಂಬಿಸಿದ್ದೇವೆ. ಮಹಾರಾಷ್ಟ್ರದ ಬುಡಕಟ್ಟು ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದ ತೃಪ್ತಿ ಇದೆ ಎಂದರು.

ಮಣಿಪಾಲ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ ನಾಲ್ಕನೇ ಬಾರಿ ಆರಂಭಿಸಿದ ಕೋರ್ಸ್‌ನ್ನು ಡಾ.ಅಮ್ಟೆ ದಂಪತಿಗಳು ಉದ್ಘಾಟಿಸಿದರು.

ಈ ಬಾರಿ ಕೋರ್ಸ್‌ಗೆ 60 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿರುವುದು ವಿಶೇಷ ಎಂದು ಅತಿಥಿಗಳನ್ನು ಸ್ವಾಗತಿಸಿದ ಕೇಂದ್ರದ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ನುಡಿದರು.

ಡಾ.ಅಮ್ಟೆ ದಂಪತಿಗಳ ಜೀವನಗಾಥೆಯ ಕುರಿತ ಡಾಕ್ಯುಮೆಂಟರಿ ಚಿತ್ರವೊಂದನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News