ಕವಿ ತಿರುಮಲೇಶ್ಗೆ ‘ಗೋವಿಂದ ಪೈ ದತ್ತಿ ಪ್ರಶಸ್ತಿ’
Update: 2017-02-01 18:11 GMT
ಉಡುಪಿ, ಫೆ.1: ಪ್ರಸಕ್ತ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಕನ್ನಡದ ಖ್ಯಾತ ಕವಿ, ವಿಮರ್ಶಕ, ಕತೆಗಾರ ಡಾ.ಕೆ.ವಿ. ತಿರುಮಲೇಶ ಆಯ್ಕೆಯಾಗಿದ್ದಾರೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ.ಹೆರಂಜೆ ಕೃಷ್ಣ ಭಟ್ ತಿಳಿಸಿದ್ದಾರೆ. ಡಾ.ತಿರುಮಲೇಶ್ ಕನ್ನಡ ಸಾಹಿತ್ಯದ ವಿವಿಧ ವಿಭಾಗಗಳಲ್ಲಿ ಅಪೂರ್ವ ಕೃತಿ ಮಾಡಿದ್ದು ಮೂವತ್ತಕ್ಕೂ ಅಧಿಕ ಪಾಂಡಿತ್ಯಪೂರ್ಣ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೇರಳದ ‘ಕುಮಾರನ್ ಆಶಾನ್’ ಪ್ರಶಸ್ತಿ, ಕಾಂತಾವರದ ‘ವರ್ಧಮಾನ’ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪುತ್ತೂರಿನ ‘ನಿರಂಜನ’ ಪ್ರಶಸ್ತಿ, ಶಿವಮೊಗ್ಗದ ‘ಹಾಮಾನಾ ಪ್ರಶಸ್ತಿ’, ಮಂಗಳೂರಿನ ‘ಸಂದೇಶ’ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಸಾಹಿತ್ಯ ಪ್ರಶಸ್ತಿ, 2016ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳೂ ಇವರನ್ನು ಅರಸಿ ಬಂದಿವೆ.