ಪಾದೂರು ಬಳಿ ಪೈಪ್ಲೈನ್ ಕಾಮಗಾರಿ: ಬಂಡೆ ಸಿಡಿಸುವಾಗ ಮನೆಗಳಿಗೆ ಹಾನಿ
ಸುರತ್ಕಲ್, ಫೆ.2: ಐಎಸ್ಪಿಆರ್ಎಲ್ ಕಂಪೆನಿ ಪಾದೂರು ಬಳಿ ಪೈಪ್ಲೈನ್ ಕಾಮಗಾರಿ ನಡೆಸುತ್ತಿರುವ ವೇಳೆ ಬಂಡೆಕಲ್ಲುಗಳನ್ನು ಸಿಡಿಸುವಾಗ ಸೂರಿಂಜೆ ಕುಲ್ಲಂಗಾಲು ಪ್ರದೇಶದ 9 ಮನೆಗಳಿಗೆ ಹಾನಿಯಾಗಿದ್ದು, ಪರಿಹಾರ ಕಲ್ಪಿಸುವವರೆಗೂ ಕಾಮಗಾರಿ ಮುಂದುವರಿಯಲು ಬಿಡುವುದಿಲ್ಲ ಎಂದು ಸ್ಥಳೀಯರು ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿದ ಘಟನೆ ಗುರುವಾರ ನಡೆದಿದೆ.
ಸೂರಿಂಜೆ ಕುಲ್ಲಂಗಾಲು ಪ್ರದೇಶದ ರಾಜೇಶ್, ವೀರಪ್ಪ, ಮಂಜು, ಬಾಲಕೃಷ್ಣ, ನೀಲಯ್ಯ ದೇವಾಡಿಗ, ನರೇಶ, ಬಾಬು ಸಾಲ್ಯಾನ್, ಶಶಿ, ರಮೇಶ ಎಂಬವರ ಮನೆಗಳು ಬಂಡೆ ಒಡೆಯುವ ಕಾಮಗಾರಿಯಿಂದ ಬಿರುಕು ಬಿಟ್ಟಿವೆ. ಅಲ್ಲದೆ, ಕಂಪೆನಿಯವರು ಒಬ್ಬಂಟಿಯಾಗಿರುವ ವೃದ್ಧೆಯೋರ್ವರ ಮನೆಯ ಸುತ್ತ ಒಡೆದ ಬಂಡೆಕಲ್ಲುಗಳನ್ನು ತಂದು ರಾಶಿ ಹಾಕಿದ್ದಾರೆ. ಪೈಪ್ ಲೈನ್ ಕಾಮಗಾರಿಗೆ ವಿಧಿಸಲಾಗಿರುವ ಮಿತಿಗಿಂತಲೂ ಸುಮಾರು 8ಮೀ. ದೂರದಲ್ಲಿರುವ ಕುಡಿಯುವ ನೀರಿನ ಬಾವಿಯನ್ನೂ ಮಣ್ಣು ಹಾಕಿ ಮುಚ್ಚಲಾಗಿದೆ. ಅಲ್ಲದೆ ಪೈಪ್ಲೈನ್ ಹಾದು ಹೋಗುವ ಮಾರ್ಗದ ಬದಿಯಲ್ಲಿರುವ ಫಸಲು ಬೆಳೆಯುತ್ತಿದ್ದ ಗದ್ದೆಗಳಿಗೆ ಮಣ್ಣು, ಕೆಸರು ನೀರನ್ನು ಬಿಡಲಾಗುತ್ತಿದೆ. ಇದರಿಂದ ಅಲ್ಪಸ್ವಲ್ಪ ಪ್ರದೇಶದಲ್ಲಿಯೂ ನಾಟಿ ಮಾಡಲಾಗುತ್ತಿಲ್ಲ ಎಂದು ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರಲ್ಲಿ ತಮ್ಮ ಅಳಲು ತೋಡಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಳೀಯರು ಅನುಮತಿಯಿಲ್ಲದೆ, ಬಂಡೆಗಳನ್ನು ಒಡೆಯಲು ಮತ್ತು ಒಡೆದ ಬಂಡೆಗಳನ್ನು ಸಿಕ್ಕ ಸಿಕ್ಕ ಕಡೆಗಳಲ್ಲಿ ತಂದು ರಾಶಿಹಾಕಲು ಪರವಾನಿಗೆ ನೀಡಿದವರು ಯಾರು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಶೀಘ್ರವಾಗಿ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ ಅವರು, 2 ತಿಂಗಳ ಒಳಗಾಗಿ ಕಾಮಗಾರಿ ಮುಗಿಸಿ ಸ್ಥಳೀಯರಿಗೆ ಕಂಪೆನಿ ನೀಡಿರುವ ಎಲ್ಲಾ ತೊಂದರೆಗಳಿಂದ ಮುಕ್ತಿ ನೀಡಬೇಕೆಂದು ಸೂಚಿಸಿದರು.
ಕಳೆದ ಎರಡು ತಿಂಗಳುಗಳಿಂದ ಈ ಪ್ರದೇಶದಲ್ಲಿ ಪಾದೂರು ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ನಿರಂತರ ಬಂಡೆಗಳನ್ನು ಒಡೆಯಲಾಗುತ್ತಿದೆ. ಇದರಿಂದ ಮನೆಗಳು ಬಿರುಕು ಬಿಟ್ಟಿದ್ದು, ಪೈಪ್ಲೈನ್ನ ಕಂಪೆನಿಯವರು ಮನೆಗಳನ್ನು ವ್ಯವಸ್ಥಿತ ರೀತಿಯಲ್ಲಿ ದುರಸ್ತಿಪಡಿಸದೆ ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲ ಎಂದು ಅಧಿಕಾರಿಗಳನ್ನು ತಡೆದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಸೈಟ್ ಇನ್ಚಾರ್ಜ್ ಹಾಗೂ ಇಂಜಿನಿಯರ್ ಅವಿನಾಶ್ ಮಾತನಾಡಿ, ಪಾದೂರು ಪೈಪ್ ಲೈನ್ ಕಾಮಗಾರಿಯಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಈ ಭಾಗದ ಸುಮಾರು 200 ಮೀ. ವಿಸ್ತೀರ್ಣದ ಕಾಮಗಾರಿ ಬಾಕಿಯಿದೆ. ಸ್ಥಳೀಯರು ಬಂಡೆ ಒಡೆಯುವ ವೇಳೆ ಮನೆಗಳಿಗೆ ಹಾನಿಯಾಗಿದೆ ಎಂದು ದೂರು ನೀಡಿದ್ದಾರೆ. ಅದರಂತೆ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ಬಿರುಕುಬಿಟ್ಟ ಮನೆಗಳನ್ನು ಗುರುತಿಸಿ ಮುಂದಿನ 2ರಿಂದ 3ತಿಂಗಳೊಳಗಾಗಿ ವ್ಯವಸ್ಥಿತ ರೀತಿಯಲ್ಲಿ ದುರಸ್ತಿ ಮಾಡಿಕೊಡಲಾಗುವುದು. ಈ ಬಗ್ಗೆ ಲಿಖಿತವಾಗಿ ಬರೆದು ಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಆರ್ಐ ನವೀನ್, ಗುತ್ತಿಗೆದಾರ ಬೋಸ್, ಇಂಜಿನಿಯರ್ ಅವಿನಾಶ್, ಪಂಚಾಯತ್ ಅಧ್ಯಕ್ಷೆ ಕಸ್ತೂರಿ ದಯಾನಂದ, ಉಪಾಧ್ಯಕ್ಷ ವಿಜೇಂದ್ರ ಶೆಟ್ಟಿ, ಪಂಚಾಯತ್ ಸದಸ್ಯರಾದ ಅಬ್ದುರ್ರಝಾಕ್, ಪದ್ಮ್ಮಾವತಿ, ಲೋಲಾಕ್ಷಿ, ದಿವಾಕರ, ಬೋಜರಾಜ ಶೆಟ್ಟಿ, ಈಶ್ವರ್ ಕಟೀಲ್ ಮೊದಲಾದವರಿದ್ದರು.
ಐಎಸ್ಪಿಆರ್ಎಲ್ ಕಂಪೆಞನಿಗೆ ಸುಮಾರು 35ಕಿ.ಮೀ. ೂರದವರೆಗಿನ ಕಾಮಗಾರಿ ವಹಿಸಲಾಗಿದೆ. ಮುಂದಿನ 2 ತಿಂಗಳಲ್ಲಿ ಕಾಮಗಾರಿ ಮುಗಿಸಿ ಮನೆಗಳನ್ನು ದುರಸ್ತಿಗೊಳಿಸಿ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.
*ದಾಸೇಗೌಡ,
ಕೆಡಿಬಿ ಸಹಾಯಕ ಆಯುಕ್ತ
ಪಾದೂರಿನಿಂದ ಎಂಆರ್ಪಿಎಲ್ಗೆ ಸಂಪರ್ಕ ಕಲ್ಪಿಸುವ ಪಾದೂರು ಪೈಪ್ಲೈನ್ ಕಾಮಗಾರಿಯಲ್ಲಿ ಅವೈಜ್ಞಾನಿಕ ಕ್ರಮಗಳ ಅನುಕರಣೆಯಿಂದ ಬಂಡೆಗಳನ್ನು ಸ್ಪೋಟಿಸುತ್ತಿರುವುದರಿಂದ ಈ ದುರ್ಘಟನೆ ನಡೆದಿದೆ. ಸೂರಿಂಜೆಯಲ್ಲಿ ಸರ್ವೇ ಮಾಡಿರುವ ಸ್ಥಳಕ್ಕಿಂತ ಹೆಚ್ಚುವರಿಯಾಗಿ ಸುಮಾರು 8 ಮೀ. ದೂರದಲ್ಲಿರುವ ಸ್ಥಳೀಯರು ಕುಡಿಯಲು ಉಪಯೋಗಿಸುತ್ತಿದ್ದ ಬಾವಿಯನ್ನು ಮುಚ್ಚಲಾಗಿದೆ. ಸಮೀಪದ ದೈವಸ್ಥಾನಕ್ಕೂ ಸರಿಯಾದ ಕ್ರಮದಲ್ಲಿ ಸೂಕ್ತ ಪರಿಹಾರ ನೀಡಿಲ್ಲ. ಇಂತಹ ಘಟನೆ ಸೂರಿಂಜೆ ಮಾತ್ರವಲ್ಲದೆ, ಪಾದೂರು ಪೈಪ್ಲೈನ್ ಹಾದು ಹೋಗುವ ಮಧ್ಯೆ, ತೋಕೂರು ಪ್ರದೇಶಗಳು ಸೇರಿ ಹಲವು ಪ್ರದೇಶಗಳಲ್ಲಿ ಇದಕ್ಕಿಂತಲೂ ಭಿನ್ನವಾದ ಸಮಸ್ಯೆಗಳನ್ನು ಕಂಪೆನಿ ತಂದೊಡ್ಡಿದೆ. ಈ ಬಗ್ಗೆ ಪೈಪ್ನ ಕಾಮಗಾರಿ ವೇಳೆ ಜನಸಾಮಾನ್ಯರಿಗೆ ಇರುವ ನಷ್ಟಪರಿಹಾರ ನೀಡದೆ ಯಾವುದೇ ಕಾರಣಕ್ಕೂ ಬಿಲ್ ಪಾವತಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
*ಕಸ್ತೂರಿ ಪಂಜ, ಜಿಪಂ ಉಪಾಧ್ಯಕ್ಷೆ.