×
Ad

ಫೆ.6ರಿಂದ ನೋಟು ಅಮಾನ್ಯ ನಡೆ ವಿರೋಧಿಸಿ ಸಿಪಿಎಂನಿಂದ ಪ್ರಚಾರಾಂದೋಲನ

Update: 2017-02-04 18:47 IST

ಮಂಗಳೂರು, ಫೆ.4: ನೋಟಿನ ಅಮಾನ್ಯೀಕರಣವು ಒಂದು ಅಪ್ರಬುದ್ಧ ಸರ್ವಾಧಿಕಾರಿ ನಡೆಯಾಗಿದ್ದು, ಅದನ್ನು ವಿರೋಧಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಫೆ.6ರಿಂದ 13ರ ವರೆಗೆ ಪ್ರಚಾರಾಂದೋಲನ ನಡೆಸಲಾಗುವುದು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.

ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚಾರಾಂದೋಲನದ ಮುಂದುವರಿದ ಭಾಗವಾಗಿ ಸಿಪಿಎಂ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ‘ಕರಾವಳಿ ಸೌಹಾರ್ದ ರ‍್ಯಾಲಿ’ಯನ್ನು ಫೆ.25ರಂದು ಮಧ್ಯಾಹ್ನ 3 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಏರ್ಪಡಿಸಲಾಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಷಣ ಮಾಡಲಿದ್ದಾರೆ. ಅಂದು ಅಪರಾಹ್ನ 2:30ರಿಂದ ಜ್ಯೋತಿಯ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಬೆಂಬಲಿಗರ ರ‍್ಯಾಲಿ ನಡೆಯಲಿದೆ ಎಂದು ತಿಳಿಸಿದರು.

ಕಳೆದ ಮೂವತ್ತು ವರ್ಷಗಳಿಂದ ಕರಾವಳಿ ಜಿಲ್ಲೆಯಲ್ಲಿ ಸಂಘಪರಿವಾರ ಪ್ರೇರಿತ ಹಿಂದುತ್ವ ಕೋಮುವಾದದ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಇತ್ತೀಚೆಗೆ ಹಿಂದುತ್ವದ ಶಕ್ತಿಗಳು ಮತಾಂತರ, ಘರ್‌ವಾಪಸಿ, ಲವ್‌ಜಿಹಾದ್, ಯುವಕ-ಯುವತಿಯರ ಸ್ನೇಹ ಸನ್ನಿವೇಶಗಳು, ಗೋರಕ್ಷಣೆ, ಮಂಗಲ ಗೋಯಾತ್ರೆಗಳ ನೆಪ ಮಾಡಿ ಜಿಲ್ಲೆಯಲ್ಲಿ ಹಿಂದೂಗಳ ಮನಸನ್ನು ಕೆಡಿಸುತ್ತಿವೆ. ಯುವಕರ-ಯುವತಿಯರು ಜೊತೆಯಾಗಿ ಉಪಹಾರ, ವಿಹಾರ ಹೋಗುವ ಸಂದರ್ಭಗಳಲ್ಲಿ ಹಿಂದುತ್ವದ ಗೂಂಡಾಪಡೆಗಳು ನೈತಿಕ ಪೊಲೀಸ್‌ಗಿರಿಯ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ವಸಂತ ಆಚಾರಿ ಹೇಳಿದರು.

ಉತ್ತರ ಪ್ರದೇಶದ ದಾದ್ರಿ ಎಂಬಲ್ಲಿನ ಗೋಮಾಂಸ ಹೊಂದಿದ ಕಾರಣ ಹೇಳಿ ಬಡ ಮುಸ್ಲಿಮನೋರ್ವನನ್ನು ಕೊಂದದ್ದು, ಸತ್ತ ದನದ ಚರ್ಮ ಸುಲಿದುದ್ದಕ್ಕಾಗಿ  ಗುಜರಾತಿನ ಊನಾ ಎಂಬಲ್ಲಿ ನಾಲ್ವರು ಬಡ ದಲಿತರನ್ನು ಥಳಿಸಿದ್ದು, ದಲಿತ ಆದಿವಾಸಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಕರಾವಳಿಯ ಕೋಮುವಾದಿ ಗೂಂಡಾಗಳ ನೀಚಕೃತ್ಯಗಳಿಗೆ ಧೈರ್ಯ ತುಂಬಿಸುತ್ತಿದೆ ಎಂದು ತಿಳಿಸಿದರು.

ಕರಾವಳಿಯಲ್ಲಿ ನಡೆಯುತ್ತಿರುವ ಅನೇಕ ಕ್ರಿಮಿನಲ್ ಕೃತ್ಯಗಳ ಹಿಂದೆ ಕೋಮುವಾದಿ ಗೂಂಡಾಗಳಿದ್ದರೂ ಕೇವಲ ಮುಸ್ಲಿಮರ ಮೇಲೆ ಆರೋಪ ಹೊರಿಸಿ, ಮುಸ್ಲಿಮರ ಮೇಲೆ ಕ್ರಮ ಕೈಗೊಳ್ಳಲಿಲ್ಲವಾದರೆ ಜಿಲ್ಲೆಗೇ ಬೆಂಕಿ ಹಚ್ಚುತ್ತೇವೆ ಎಂಬ ಭಯೋತ್ಪಾದಕ ಮಾತುಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿರುವುದು ಖಂಡನೀಯ. ನೋಟು ಅಮಾನ್ಯೀಕರಣದಂತಹ ಬಡಜನ ವಿರೋಧಿ ಕೃತ್ಯದಿಂದ ಆಗಿರುವ ಅನಾಹುತವನ್ನು ಸರಿಪಡಿಸಲು ಸೂಕ್ತ ಕ್ರಮ ವಹಿಸಲು ಸಿಪಿಎಂ ಒತ್ತಾಯಿಸಿದೆ ಎಂದರು.

ಕೇಂದ್ರದ ಎನ್‌ಡಿಎ ಸರಕಾರವು ಅಭಿವೃದ್ಧಿಯ ಅಜೆಂಡಾವನ್ನು ಚುನಾವಣೆ ಸಂದರ್ಭದಲ್ಲಿ ಮುಂದಿಟ್ಟಿದ್ದರೂ ಗುಪ್ತ ಅಜೆಂಡಾವಾದ ಹಿಂದುತ್ವವನ್ನು ಕಳೆದ ಎರಡೂವರೆ ವರ್ಷಗಳಲ್ಲಿ ಜಾರಿ ಮಾಡಿದೆ. ಸಂಸತ್ತನ್ನೂ ಕಡೆಗಣಿಸಿ ಕಾನೂನುಗಳನ್ನು ಜಾರಿ ಮಾಡಲಾಗುತ್ತಿದೆ. ದೇಶದ ಪ್ರತಿಷ್ಠಿತ ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಗಳ ಆಡಳಿತದಲ್ಲಿ ಅಯೋಗ್ಯರನ್ನು ಇಲ್ಲವೇ ಹಿಂದುತ್ವದ ವಕ್ತಾರರನ್ನು ಕುಳ್ಳಿರಿಸಲಾಗುತ್ತಿದೆ. ನೇಮಕಾತಿಯಲ್ಲಿ ಸರ್ವಾಧಿಕಾರಿ ನೆಲೆಯಲ್ಲಿ ಹಸ್ತಕ್ಷೇಪಗಳು ನಡೆಯುತ್ತಿರುವುದು ಖಂಡನೀಯ ಎಂದರು.

ಫೆ.6ರಿಂದ 13ರವರೆಗೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಸಾರ್ವಜನಿಕ ಸಭೆ ಮತ್ತು ವಾಹನ ಜಾಥಾ ನಡೆಸಿ ಕರಪತ್ರ ಹಂಚಲಾಗುವುದು. ಫೆ.25ರಂದು ನಡೆಯವ ‘ಕರಾವಳಿ ಸೌಹಾರ್ದ ರ‍್ಯಾಲಿ ’ಯಲ್ಲಿ 10,000ಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಜೆ. ಬಾಲಕೃಷ್ಣ ಶೆಟ್ಟಿ, ಕೆ.ಯಾದವ ಶೆಟ್ಟಿ, ವಾಸುದೇವ ಉಚ್ಚಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News