×
Ad

ಉಗಾಂಡದಲ್ಲಿ ಸಂಕಷ್ಟದಲ್ಲಿ ಬಿದ್ದಿರುವ ಬೆಳ್ತಂಗಡಿ ಮೂಲದ ಕುಟಂಬ

Update: 2017-02-04 20:24 IST

 ಬೆಳ್ತಂಗಡಿ , ಫೆ.4 : ಆಫ್ರಿಕಾದ ಉಗಾಂಡದಲ್ಲಿ ಉದ್ಯೋಗಿಯಾಗಿದ್ದ ಬೆಳ್ತಂಗಡಿ ತಾಲೂಕು ಪಣಕಜೆಯ ನಿವಾಸಿ ಮಹಮ್ಮದ್ ಶಾಫಿ ಎಂಬುವರ ಪುತ್ರ ಅಬ್ದುಲ್ ರಶೀದ್ (33) ಎಂಬುವರು ತನ್ನಲ್ಲದ ತಪ್ಪಿಗೆ ಸಂಕಷ್ಟಕ್ಕೊಳಗಾಗಿ ಅತಂತ್ರ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ.

ರಶೀದ್ ಅವರ ಈ ಪರಿಸ್ಥಿತಿಯಿಂದಾಗಿ ಅವರ ಕುಟುಂಬ ಬೀದಿಗೆ ಬೀಳುವಂತಾಗಿದೆ. ಅಲ್ಲದೆ ಹುಟ್ಟೂರಿನಲ್ಲಿರುವ ಅವರ ತಂದೆಯವರ ಮೇಲೆ ಉಗಾಂಡದ ಕಂಪೆನಿಯು ಹಣಕ್ಕಾಗಿ ತೊಂದರೆ ನೀಡುತ್ತಿರುವುದೂ ತಿಳಿದು ಬಂದಿದೆ.

ಸುಮಾರು 6 ವರ್ಷಗಳಿಂದ ರಶೀದ್ ಉಗಾಂಡಾದ ಕಂಪಾಲದಲ್ಲಿನ ಕಂಪೆನಿಯೊಂದರಲ್ಲಿ ಕೆಲಸಮಾಡುತ್ತಿದ್ದರು. ವರ್ಷದ ಹಿಂದೆ ಒಂದು ದಿನ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಆತನನ್ನು ತಡೆದು ದರೋಡೆ ಮಾಡಲಾಗಿತ್ತು. ಹಣ ಹಾಗೂ ಕಂಪೆನಿಯ ದಾಖಲೆಗಳು ಕಳ್ಳತನವಾಗಿತ್ತು. ಈ ಬಗ್ಗೆ ಇವರು ಅಲ್ಲಿನ ಪೋಲಿಸರಿಗೆ ದೂರು ನೀಡಿದ್ದರು. ಆದರೆ ಕಂಪೆನಿಯವರು ರಶೀದ್‌ನೇ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಆತನ ಮೆಲೇಯೇ ದೂರು ನೀಡಿ ಅವನನ್ನು ಜೈಲಿಗೆ ತಳ್ಳಿದ್ದರು. ಕಳೆದ ಜುಲೈನಿಂದೀಚೆಗೆ ಇವರು ಜೈಲಿನಲ್ಲಿಯೇ ಇದ್ದರು. ಇದೀಗ ಡಿಸೆಂಬರ್‌ನಲ್ಲಿ ಸ್ಥಳೀಯರ ನೆರವಿನಿಂದ ಜಾಮೀನು ದೊರೆತು ಹೊರಗೆ ಬಂದಿದ್ದಾರೆ.

ಇವರು, ಉಗಾಂಡದಲ್ಲಿಯೇ ನೈಜೀರಿಯಾ ಮೂಲದ ಸೋಮಾಲಿಯಾದ ಪ್ರಜೆಯೊಬ್ಬಳನ್ನು ಮದುವೆಯಾಗಿದ್ದು ಐದು, ಮೂರು ವರ್ಷದ ಹೆಣ್ಣು ಮಕ್ಕಳು ಹಾಗು ಒಂದು ವರ್ಷದ ಗಂಡು ಮಗುವಿದೆ. ಇವರು ಜೈಲಿಗೆ ಹೋದಾಗಿನಿಂದಿ ಸ್ಥಳೀಯ ಜನರು ಮಾಡಿರುವ ಸಹಾಯದಿಂದಲೇ ಕುಟುಂಬ ಜೀವನ ಸಾಗಿಸುತ್ತಿತ್ತು. ಅವರು ಜಾಮೀನಿನಿಂದ ಹೊರಗೆ ಬಂದಿದ್ದರೂ ದುಡಿಯಲು ಸಾಧ್ಯವಾಗುತ್ತಿಲ್ಲ.  ಯಾಕೆಂದರೆ ಇದೀಗ ಇವರ ಪಾಸ್ ಪೋರ್ಟ್‌ನ್ನು ಕಂಪೆನಿಯವರೇ ಇಟ್ಟು ಕೊಂಡಿದ್ದಾರೆ. ಹೀಗಾಗಿ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಭಾರತಕ್ಕೆ ಹಿಂದಿರುಗಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಕುಟುಂಬದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಮನೆ ಬಾಡಿಗೆ, ದಿನಬಳಕೆ ವಸ್ತುಗಳಿಗಾಗಿ ಪರದಾಡುವ ಸ್ಥಿತಿ ಬಂದಿದ್ದು ಚಿಂತಾಜನಕ ಸ್ಥಿತಿಯಲ್ಲಿ ಕುಂಟುಂಬವಿದೆ.

ರಶೀದ್ ಅವರ ತಂದೆ ಸ್ಥಳೀಯ ಸಚಿವರಾದ ಯು.ಟಿ.ಖಾದರ್, ರಮಾನಾಥ್ ರೈ ಸೇರಿದಂತೆ ಹಲವಾರು ಗಣ್ಯರ ಕಚೇರಿ, ಮನೆಬಾಗಿಲಿಗೆ ಅಲೆದು ಬಂದಿದ್ದಾರೆ. ಇನ್ನೊಂದೆಡೆ ಭಾರತ ಸರಕಾರದ ವಿದೇಶಾಂಗ ಕಚೇರಿಗೂ ಮಾಹಿತಿ ನೀಡಲಾಗಿದ್ದು ಅವರು ಉಗಾಂಡಾದ ಹೈಕಮಿಷನರ್ ಅವರನ್ನು ಸಂಪರ್ಕಿಸಿದ್ದಾರೆ. ಆದರೆ ಅಲ್ಲಿನ ಸರಕಾರ ರಶೀದ್ ಅವರು ಅಪರಾಧಿ ಎಂದು ಪರಿಗಣಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ವರದಿಯನ್ನು ಭಾರತ ಸರಕಾಕ್ಕೆ ನೀಡಿದೆ. ಇದರಿಂದಾಗಿ ಸರಕಾರದಿಂದಲೂ ಯಾವುದೇ ಸಹಾಯ ಈತನಿಗೆ ದೊರೆತಿಲ್ಲ.

  ಇತ್ತ ಉಗಾಂಡದ ಕಂಪೆನಿಯು ಈತನ ವಿರುದ್ದ ರೂ.5 ಲಕ್ಷ ಕಳ್ಳತನವಾಗಿದೆಯೆಂದು ಪ್ರಕರಣ ದಾಖಲಿಸಿದೆ. ಆದರೆ ಪ್ರಕರಣ ಮುಗಿಸಲು ಕಂಪೆನಿ 15 ಲಕ್ಷ ರೂ ಬೇಡಿಕೆ ಇಟ್ಟಿದೆ. ಕಂಪೆನಿಯವರು ಇಲ್ಲಿನ ಮನೆಗೆ ಕರೆಮಾಡಿ ಹಣ ಹೊಂದಿಸಿಕೊಡುವಂತೆ ಬೆದರಿಕೆಯನ್ನು ಒಡ್ಡಿದ್ದರು ಹಣ ನೀಡದಿದ್ದರೆ ರಶೀದ್ ನನ್ನು ಶಾಶ್ವತವಾಗಿ ಜೈಲಿನಲ್ಲಿರಿಸುವುದಾಗಿಯೂ ಹೇಳುತ್ತಿದ್ದಾರೆ.

ಭಾರತ್ ಬೀಡಿ ಕಂಪೆನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ತಂದೆ ಶಾಫಿ ಅವರಿಗೆ ಆದಾಯದ ಬೇರೆ ಮೂಲಗಳೇ ಇಲ್ಲ. ತಮ್ಮ ಬದುಕನ್ನು ಮುನ್ನಡೆಸಲು ಹೆಣಗಾಡುತ್ತಿರುವ ಇವರು ಅಷ್ಟು ಹಣ ಹೊಂದಿಸುವ ಶಕ್ತಿ ಹೊಂದಿಲ್ಲ. ಇತ್ತ ಉಗಾಂಡಾದಲ್ಲಿರುವ ಕರ್ನಾಟಕ ಸಂಘದ ಪದಾಧಿಕಾರಿಗಳು ಕಂಪೆನಿಯ ಮುಖ್ಯಸ್ಥರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದೆ. ಆದರೆ ಅವರಲ್ಲಿಯೂ ಕಂಪೆನಿಯು ರೂ. 15 ಲಕ್ಷ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿದೆ. ಆದರೆ ಹಣ ಹೊಂದಿಸುವುದು ಕುಟುಂಬದವರಿಂದ ಅಸಾಧ್ಯದ ವಿಚಾರವಾಗಿದ್ದು  , ಸಮಸ್ಯೆ ಪರಿಹಾರ ಕಾಣದೆ ಮುಂದುವರಿದಿದೆ. ರಶೀದ್ ಅವರ ಕುಟುಂಬದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಅತಿ ಶೀಘ್ರ ಪರಿಹಾರ ಕಾಣಬೇಕಾಗಿದೆ.

ನನಗೆ ಹಿಂದಿನ ಕಂಪೆನಿಯಲ್ಲಿಯೇ ಕೆಲಸ ಸಿಕ್ಕಿದರೂ ದುಡಿಯಲು ತಯಾರಿದ್ದೇನೆ. ನನಗೆ ಬಂದ ಸಂಬಳದಲ್ಲಿಯೇ ಹಣ ಹೊಂದಿಸಿಕೊಳ್ಳಲಿ. ಅಥವಾ ಯಾವುದಾದರೂ ಬೇರೆ ಕಂಪೆನಿಯಲ್ಲಿ ಕೆಲಸ ಸಿಕ್ಕಿದರೂ ಸಾಕು. ಇಲ್ಲಿಯೇ ದುಡಿದು ಏನಾದರೂ ಮಾಡಿ ಹಣ ಹೊಂದಿಸಿ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ತಯಾರಿದ್ದೇನೆ. ಆದರೆ ತಾನಿದ್ದ ಕಂಪೆನಿಯು ತನ್ನ ಪಾಸ್‌ಪೋರ್ಟ್‌ನ್ನು ನೀಡದೇ ಇರುವುದರಿಂದ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇನೆ. ಹೆಂಡತಿ ಮಕ್ಕಳ ಒಂದುಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದಿದೆ. ಭಾರತಕ್ಕೆ ಬರಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರ ಶೀಘ್ರ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು

– ಅಬ್ದುಲ್ ರಶೀದ್  , ಸಂತ್ರಸ್ಥ
   

ನನ್ನ ಮಗನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರಕಾರ ಏರ್ಪಾಡು ಮಾಡಬೇಕು. ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಯಾವುದೇ ಹೆಚ್ಚಿನ ಆದಾಯದ ಮೂಲವಿಲ್ಲ ನನಗೆ ಅಷ್ಟೆಲ್ಲಾ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ನನ್ನಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಿದ್ದೇನೆ ಇನ್ನೇನು ಮಾಡುವ ಸ್ಥಿತಿಯಲ್ಲಿ ನಾನಿಲ್ಲ

- ಮಹಮ್ಮದ್ ಶಾಫಿ , ರಶೀದ್ ತಂದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News