ನಾಲ್ಕು ದಿನದೊಳಗೆ ಕಾಮಗಾರಿ ವರದಿ ನೀಡಿ: ಸಚಿವ ಪ್ರಮೋದ್ ಸೂಚನೆ
ಉಡುಪಿ, ಫೆ.4: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಶೇ.90ರಷ್ಟು ಕಾಮಗಾರಿ ಮುಗಿದಿರುವ ಬಗ್ಗೆ ನಾಲ್ಕು ದಿನಗಳೊಳಗಾಗಿ ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಂಜಿನಿಯರ್ಗಳು ಸಮೀಕ್ಷೆ ನಡೆಸಿ ವರದಿ ನೀಡಬೇಕೆಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಟೋಲ್ ಜಾರಿ ಕುರಿತು ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಕರೆಯಲಾದ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಮತ್ತು ವಿವಿಧ ಮುಖಂಡರು, ಬಸ್ ಮಾಲಕರು, ಟ್ಯಾಕ್ಸಿ ಮಾಲಕರ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಕಾಮಗಾರಿ ಸಂಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹಿ ಸಲು ಕೇಂದ್ರ ಸರಕಾರ ಅನುಮತಿ ನೀಡಿರುವ ಬಗ್ಗೆ ಸಭೆಯಲ್ಲಿ ಅಪಸ್ವರ ಕೇಳಿಬಂತು. ಆದುದರಿಂದ ಕಾನೂನು ಮತ್ತು ಒಪ್ಪಂದ ಬಗ್ಗೆ ಸವಿವರ ಚರ್ಚೆ ಗಳು ನಡೆದವು. 'ಸರ್ವೀಸ್ ರಸ್ತೆ ಜೂನ್ನೊಳಗೆ ಸಂಪೂರ್ಣಗೊಳ್ಳಲಿದ್ದು, ಸರ್ವೀಸ್ ರೋಡ್ ಮುಗಿದ ಬಳಿಕವೇ ಟೋಲ್ ಹಾಕಬೇಕೆಂಬುದು ಯಾವುದೇ ಕಾನೂನಿಲ್ಲ, ಚತುಷ್ಫಥ ಕಾಮಗಾರಿ ಶೇ.90ರಷ್ಟು ಪೂರ್ಣ ಗೊಂಡಿದೆ ಎಂದು ಎನ್ಎಚ್ ಅಧಿಕಾರಿ ವಿಜಯ್ ಸ್ಯಾಮ್ಸನ್ ಸಭೆಯಲ್ಲಿ ಸ್ಪಷ್ಟನೆ ನೀಡಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸರ್ವೀಸ್ ರೋಡ್ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡದ ಪರಿಣಾಮ ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ಹೆಚ್ಚು ಅವಘಡಗಳಿಗೆ ಸಂಭವಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಸಾಸ್ತಾನದಲ್ಲಿ ರಾಂಗ್ ಸೈಡ್ ಡ್ರೈವಿಂಗ್ನಿಂದ ಅಪಘಾತಗಳು ಹೆಚ್ಚಿವೆ ಎಂದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಕುಂದಾ ಪುರದಿಂದ ಮಂಗಳೂರುವರೆಗೆ ಟಾಯ್ಲೆಟ್ ಇಲ್ಲ. ಭೂಸ್ವಾಧೀನ ಮಾಡಿ ಜಾಗಕೊಡಿ. ಹೆಜಮಾಡಿ, ಸುರತ್ಕಲ್ನಲ್ಲಿ ಟೋಲ್ಗಳು ಬರೀ 12ರಿಂದ 15 ಕಿ.ಮೀ ಇದ್ದು ಜನರಿಗೆ ಟೋಲ್ ನೀಡುವ ಹೊಣೆ ಅಕ್ಷಮ್ಯ ಎಂದು ಟೀಕಿಸಿದರು.
ಟೋಲ್ ಸಂಗ್ರಹದ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಬೇಕಾಗಿದೆ. ಸಾಸ್ತಾನ, ಬ್ರಹ್ಮಾವರದಲ್ಲಿನ ಜನರ ದೈನಂದಿನ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಉಚ್ಚಿಲದಲ್ಲಿ ಸರ್ವಿಸ್ ರಸ್ತೆ ಇಲ್ಲದೆ ಜನ ಸಾಕಷ್ಟು ಸಮಸ್ಯೆ ಅನುಭವಿಸುತ್ತಿ ದ್ದಾರೆ ಎಂದು ಜಿಪಂ ಸದಸ್ಯೆ ಶಿಲ್ಪಸುವರ್ಣ ದೂರಿದರು. ಕಾಪು ದಿವಾಕರ ಶೆಟ್ಟಿ ಮಾತನಾಡಿ, ಮಾಹಿತಿ ಹಕ್ಕಿನಿಂದ ಪಡೆದ ಮಾಹಿತಿಯ ಪ್ರಕಾರ ಸಂಪೂರ್ಣ ಕಾಮಗಾರಿ ಆಗಿಲ್ಲ ಎಂದು ಆರೋಪಿಸಿದರು.
ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ಮಾಹಿತಿ ನೀಡಿ, ಹೆದ್ದಾರಿ ಕಾಮ ಗಾರಿಗೆ ಜಾಗ ಕೊಟ್ಟಿದ್ದು ಜಾಗದ ಸಮಸ್ಯೆ ಇಲ್ಲ ಎಂದರು. ಸಾಸಾತಿನದ ಸಾರ್ವಜನಿಕರು ತಾವು ಯಾವುದೇ ಕಾರಣಕ್ಕೂ ಟೋಲ್ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು. ವಸತಿ ಪ್ರದೇಶಕ್ಕಿಂತ ಮೇಲೆ ಡ್ರೈನೆಜ್ ಇದ್ದು, ಸ್ಥಳೀಯ ಜನರಿಗೆ ತೊಂದರೆ ಆಗುತ್ತದೆ. ಸರ್ವೀಸ್ ರೋಡ್, ಬಸ್ ಬೇ, ಲಾರಿ ಬೇ ಆಗದೆ ಟೋಲ್ ಸಂಗ್ರಹ ಮಾಡಬಾರದು ಎಂದು ಸಾರ್ವ ಜನಿಕರು ಆಗ್ರಹಿಸಿದರು. ಕೇಂದ್ರ ಸರಕಾರದ ನೀತಿಯನ್ನು ಬದಲಾಯಿಸಲು ಜಿಲ್ಲಾಡಳಿತಕ್ಕೆ ಅವಕಾಶ ವಿಲ್ಲ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಸ್ಪಷ್ಟಪಡಿಸಿದರು. ಕಳೆದ ಸೆಪ್ಟೆಂಬರ್ ನಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಲು ಎನ್ಎಚ್ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಜಿಲ್ಲಾಡಳಿತಕ್ಕೆ ಜನರ ಹಿತರಕ್ಷಣೆ ಹೊಣೆ ಇದ್ದು, ಜನಪ್ರತಿನಿಧಿಗಳು, ಜನರು ಟೋಲ್ ಬಗ್ಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಕಾಮಗಾರಿ ಗಳನ್ನು ಸಂಪೂರ್ಣಗೊಳಿಸಬೇಕು ಎಂದು ಸಚಿವರು ನಿರ್ದೇಶಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಡಿವೈಎಸ್ಪಿ ಕುಮಾರ ಸ್ವಾಮಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿ ಯರ್ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.