ಕೋಮುವಾದಿಗಳಿಂದ ಇತಿಹಾಸ ತಿರುಚುವ ಮೂಲಕ ಓಟಿನ ರಾಜಕಾರಣ: ಶ್ರೀರಾಮ ರೆಡ್ಡಿ
ಉಡುಪಿ, ಫೆ.6: ಕೋಮುವಾದಿ ಶಕ್ತಿಗಳು ಇತಿಹಾಸವನ್ನು ಪುರಾಣವನ್ನಾಗಿ, ಪುರಾಣವನ್ನು ಇತಿಹಾಸವನ್ನಾಗಿ ತಿರುಚುವ ವ್ಯವಸ್ಥಿತ ಪಿತೂರಿ ನಡೆಸುತ್ತಿವೆ. ಈ ಮೂಲಕ ಸಂಘಪರಿವಾರ ಕೋಮುವಾದ ಮತ್ತು ಓಟಿನ ರಾಜಕಾರಣವನ್ನು ಮಾಡುತ್ತಿದೆ. ಸುಳ್ಳು ಇತಿಹಾಸವನ್ನು ಸೃಷ್ಠಿ ಮಾಡುವ ಕೆಲಸ ಪ್ರಧಾನಿ ಮೋದಿ ಸೇರಿದಂತೆ ಆರ್ಎಸ್ಎಸ್ನಿಂದ ನಡೆಯುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸಮಿತಿ ಸದಸ್ಯ, ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಆರೋಪಿಸಿದ್ದಾರೆ.
ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ಬನ್ನಂಜೆಯ ಶಿವಗಿರಿ ನಾರಾಯಣಗುರು ಸಭಾಭವನ ದಲ್ಲಿ ಆಯೋಜಿಸಲಾದ ಕೋಮವಾದದ ವಿರುದ್ಧ ಸಮಾವೇಶ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬಾಬರಿ ಮಸೀದಿ ಧ್ವಂಸದ ಬಳಿಕ ಸಂಘಪರಿವಾರದ ರಾಜಕೀಯಕ್ಕೆ ಅಸ್ತಿತ್ವ ದೊರೆತಿರುವುದು ಈ ದೇಶದ ಬಹಳ ದೊಡ್ಡ ಗಂಡಾಂತರ. ಇಂದು ಪ್ರಧಾನಿ ನರೇಂದ್ರ ಮೋದಿ ಈ ದೇಶದಲ್ಲಿ ಆಕ್ರಮಣಕಾರಿಯಾಗಿ ಕೋಮುವಾದವನ್ನು ಜಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಕಮ್ಯುನಿಷ್ಟರು, ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು, ಬೌದ್ಧಿಕ ಚಿಂತನೆಗಳು ಇವರ ದಾಳಿಯ ಪ್ರಮುಖ ಗುರಿಗಳಾಗಿವೆ ಎಂದರು.
ಮೋದಿ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ಅಪಾಯಕಾರಿ ಬೆಳ ವಣಿಗೆಗಳು ನಡೆಯುತ್ತಿವೆ. ಆಹಾರ, ಹಕ್ಕುಗಳು, ಸಂವಿಧಾನ, ಮುಸ್ಲಿಮರು, ದಲಿತರು, ಬೌದ್ಧಿಕ ಚಿಂತನೆಯನ್ನು ಹುಟ್ಟು ಹಾಕುವ ವಿಶ್ವವಿದ್ಯಾನಿಲಯಗಳ ಮೇಲೆ ದಾಳಿಗಳು ನಡೆಯುತ್ತಿವೆ. ಪಕ್ಷ, ಧರ್ಮದ ವಿರುದ್ಧ ಮಾತನಾಡಿದ ವರಿಗೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಕರಾವಳಿ ಜಿಲ್ಲೆಯನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ರಕ್ಷಣೆ ಹಾಗೂ ಪೋಷಣೆ ಮಾಡಿಕೊಂಡು ಬಂದ ಬಹುಸಂಸ್ಕೃತಿ, ಬಹುಭಾಷೆ, ಬಹುಧರ್ಮವನ್ನು ಆರೆಸ್ಸೆಸ್ ಹಾಗೂ ಸಂಘಪರಿವಾರ ಇಂದು ನಾಶ ಮಾಡುತ್ತಿದೆ. ಏಕ ಸಂಸ್ಕೃತಿ, ಏಕಭಾಷೆ, ಏಕ ಧರ್ಮ ಎಂಬುದು ಇವರ ಅಜೆಂಡಾ ಆಗಿದೆ. ಅದನ್ನು ಜಾರಿಗೆ ತರಲು ಇವರು ಸತತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ನಡೆಸುತ್ತಿರುವ ಆಕ್ರಮಣವನ್ನು ತಡೆ ಯುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ಕಾಂಗ್ರೆಸ್ ರಾಜಕೀಯ ವಾಗಿ ಬಲ ಕಳೆದುಕೊಂಡು, ಸೈದ್ಧಾಂತಿಕವಾಗಿ ದಿವಾಳಿ ಆಗುತ್ತಿದೆ. ಪ್ರಾದೇಶಿಕ ಪಕ್ಷಗಳು ಅವಕಾಶವಾದಿ ರಾಜಕಾರಣ ಮಾಡಿ ಬಿಜೆಪಿ ಜೊತೆ ಕೈಜೋಡಿ ಸುತ್ತಿವೆ. ಆದುದರಿಂದ ಎಡಪಕ್ಷಗಳು ಹಾಗೂ ಪ್ರಗತಿಪರ ಶಕ್ತಿಗಳು ಒಂದು ಗೂಡಿ ಕರ್ನಾಟಕದಲ್ಲಿ ಕೋಮುವಾದವನ್ನು ಎದುರಿಸಬೇಕಾಗಿದೆ. ಅದರ ವಿರುದ್ಧ ರಾಜಿ ಇಲ್ಲದ ಹೋರಾಟಕ್ಕೆ ಸಿದ್ಧರಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಪಿ.ಕೆ.ಪಿ.ಕೃಷ್ಣನ್ ಕನ್ನಡಕ್ಕೆ ಅನುವಾದಿಸಿರುವ ಸುಧೀಶ್ ಮುನ್ನಿ ಅವರ ‘ನರಕದ ಗರ್ಭಗುಡಿಯೊಳಗೆ’ ಕೃತಿಯನ್ನು ಹಿರಿಯ ಚಿಂತಕ ಜಿ.ರಾಜ ಶೇಖರ್ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಸಿಪಿಎಂ ರಾಜ್ಯ ಕಾರ್ಯ ದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ವಹಿಸಿದ್ದರು. ಸಿಐಟಿಯು ಜಿಲ್ಲಾಧ್ಯಕ್ಷ ಪಿ.ವಿಶ್ವನಾಥ್ ರೈ ಉಪಸ್ಥಿತರಿದ್ದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
‘ಕರಾವಳಿಯಲ್ಲಿ ಕೋಮುವಾದದ್ದೆ ಆಳ್ವಿಕೆ’
ಕರಾವಳಿ ಜಿಲ್ಲೆಯ ಬಜರಂಗ ದಳದ ಜಾನುವಾರು ರಾಜಕಾರಣದಲ್ಲಿ ಮಾಧ್ಯಮ, ಪೊಲೀಸರು ಹಾಗೂ ನ್ಯಾಯಾಲಯಗಳು ಕೂಡ ಶಾಮೀಲಾ ಗಿವೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರ ಅಸ್ತಿತ್ವದಲ್ಲಿ ಇದ್ದರೂ ಕರಾವಳಿ ಯಲ್ಲಿ ಆಳ್ವಿಕೆ ನಡೆಸುವುದು ಮಾತ್ರ ಕೋಮುವಾದವೇ. ಆರೆಸ್ಸೆಸ್ಗೆ ಬೇಕಾಗಿ ರುವುದು ಜಾತಿ, ವರ್ಗ, ಲಿಂಗ ಸಮಾನತೆ ಅಲ್ಲ. ಬದಲಾಗಿ ಮುಸ್ಲಿಮರು, ಕ್ರಿಶ್ಚಿಯನ್ನರು, ಕಮ್ಯುನಿಸ್ಟರನ್ನು ಬಡಿಯಲು ಹಿಂದುಗಳ ಒಗ್ಗಟ್ಟು ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಟೀಕಿಸಿದರು.