×
Ad

ಎಲ್ಲರನ್ನು ಒಟ್ಟುಗೂಡಿಸುವುದೆ ಸಂಘಟನೆಯ ಉದ್ದೇಶ: ಏರ್ಯ ಲಕ್ಷ್ಮೀನಾರಾಯಣ ಆಳ್ವ

Update: 2017-02-07 20:00 IST

 ಬಂಟ್ವಾಳ, ಫೆ. 7: ಮಂಗಳೂರು ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ತೃತೀಯ ವರ್ಷದ ಬಂಟ ಸಮಾಗಮ 2017 ಬಂಟವಾಳದ ಬಂಟರ ಭವನದಲ್ಲಿ ಮಂಗಳವಾರ ವೈವಿದ್ಯ ಪೂರ್ಣವಾಗಿ ನಡೆಯಿತು.

ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎ. ಸದಾನಂದ ಶೆಟ್ಟಿ ಮತ್ತು ಮೈನಾ ಶೆಟ್ಟಿ ದಂಪತಿಯವರು ಬೆಳಗ್ಗೆ ದೀಪಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ ನೀಡಿದರು. ಬಳಿಕ ಬೋಳಂತೂರು ಗುತ್ತು ಗಂಗಾಧರ ರೈ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸ್ಪರ್ಧಾ ಕಾರ್ಯಕ್ರಮಗಳು ನೆರೆದ ಜನರನ್ನು ಮನರಂಜಿಸಿತು.

ಈ ಸಂದರ್ಭದಲ್ಲಿ ಮಿಸ್ಟರ್ ಬಂಟ್, ಮಿಸ್‌ಬಂಟ್, ಬಂಟ್ಸ್ ಕಪಲ್ ಸ್ಪರ್ಧೆಯು ನಡೆಯಿತು. ’ಭೂತಾಳ ಪಾಂಡ್ಯ ವೈಭವ’ಕ್ಕೆ ತುಳು ರೂಪಕ, ಪಟ್ಲ ಸತೀಶ್ ಶೆಟ್ಟಿ ಹಿಮ್ಮೇಳದೊಂದಿಗೆ ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶಿಸಿದ ಡಾ. ವರ್ಷಾ ಶೆಟ್ಟಿ ಮತ್ತು ಕು. ದೀಶಾ ಶೆಟ್ಟಿ ಅಭಿನಯದ ’ನೇನಪಾದಳಾ ಶಕುಂತಳಾ’ ಯಕ್ಷ ನಾಟ್ಯ ಪ್ರದರ್ಶನವು  ಮನಸೂರೆಗೊಂಡಿತು.

ಸಮಾರೋಪ ಸಮಾರಂಭ: ಸಂಜೆ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಂಟ ಮಹಾ ಸಮ್ಮೇಳನ - 2016 ಸಂಪೂರ್ಣ ಚಿತ್ರಣದೊಂದಿಗೆ ’ಸದಾಶಯ’ ವಿಷೇಶ ಸಂಚಿಕೆಯನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಅವರು ಅನಾವರಣಗೊಳಿಸಿದರು. ಈ ಸಂಚಿಕೆಯನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆಯ ಮೂಲಕ ವೇದಿಕೆಗೆ ತರಲಾಯಿತು. 

ನಂತರ ಮಾತನಾಡಿದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು, ಎಲ್ಲ ಸಮಾಜದವರನ್ನು ಒಟ್ಟುಗೂಡಿಸಿ ಕೆಲಸ ಮಾಡುವುದನ್ನು ಮೈಗೂಡಿಸಿಕೊಂಡರೆ ಸಂಘಟನೆಯ ಉದ್ದೇಶ ಈಡೇರಲು ಸಾಧ್ಯ. ನಾವೆಷ್ಟು ಬೆಳೆದರೂ ಪ್ರೀತಿ, ವಿಶ್ವಾಸ, ವಿವೇಕದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
 
ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಬಂಟ ಎಂದರೆ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಇರುವ ವ್ಯಕ್ತಿ. ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿ ಅಭಿನಂದನೀಯ ಎಂದರಲ್ಲದೆ. ಜಿಲ್ಲೆಯ ಜಾನಪದ ಕ್ರೀಡೆ ಕಂಬಳ ಹಾಗೂ ನೇತ್ರಾವತಿ ನದಿಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಸ್ವರವು ಒಂದಾಗಬೇಕು.

ತನ್ಮೂಲಕವಾಗಿ ಈ ಎರಡನ್ನೂ ಶಾಶ್ವತವಾಗಿ ಉಳಿಸುವ ಕೆಲಸ ಆಗಬೇಕೆಂದರು. ವೇದಿಕೆಯಲ್ಲಿ ಉದ್ಯಮಿಗಳಾದ ಡಾ. ಎ.ಜೆ. ಶೆಟ್ಟಿ, ಡಾ ಭಾಸ್ಕರ ಶೆಟ್ಟಿ, ಡಾ ಸರ್ವೋತ್ತಮ ಶೆಟ್ಟಿ ಅಬುದಾಬಿ, ಪಾದೆ ಅಜಿತ್ ರೈ, ವಿಜಯನಾಥ ವಿಠಲ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ನಗ್ರಿ ರೋಹಿತ್ ಶೆಟ್ಟಿ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ ಆಳ್ವ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಎಲ್. ಪ್ರಭಾಕರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಮುಂಬೈ ಸಂಘದ ಮಾಜಿ ಅಧ್ಯಕ್ಷರಾದ ಸಿ.ಎ. ಶಂಕರ ಶೆಟ್ಟಿ, ಐಕಳ ಹರೀಶ್ ಶಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ರಶ್ಮಿ ಶಿಕ್ಷಣ ಸಂಸ್ಥೆಯ ಸವಣೂರು ಸೀತಾರಾಮ ರೈ, ಸುಳ್ಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಮುಂಬೈ ಬಂಟರ ಯಾನೆ ನಾಡವರ ಸಂಘದ ಖಜಾಂಚಿ ಸತೀಶ್ ಶೆಟ್ಟಿ, ಪ್ರಮೋದ್ ರೈ ಕೆದಂಬಾಡಿ, ಸದಾನಂದ ಶೆಟ್ಟಿ ರಂಗೋಲಿ ಬಿ.ಸಿ.ರೋಡು, ಅಭಿನಂದನ್ ಶೆಟ್ಟಿ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮಂಜುನಾಥ ಭಂಡಾರಿ, ನೇಮಿರಾಜ ರೈ ಬೋಳಂತೂರು, ನ್ಯಾಯವಾದಿ ಸೀತಾರಾಮ ಶೆಟ್ಟಿ, ದೇವಾನಂದ ಶೆಟ್ಟಿ ದಿಕ್ಸಿ, ಶಾಂತರಾಮ ಶೆಟ್ಟಿ ದಂಪತಿ, ಸಂತೋಷ್ ಶೆಟ್ಟಿ ಮೂಲ್ಕಿ, ಜಯಕರ ಆಳ್ವ ದಂಪತಿ, ಗೀತಾಭಾಸ್ಕರ ಶೆಟ್ಟಿ, ಸುಧಾಕರ ಶೆಟ್ಟಿ ಬಾರಕೂರು, ಪಟ್ಲ ಸತೀಶ್ ಶೆಟ್ಟಿ, ಕಿರಣ್ ಹೆಗ್ಡೆ, ತೋನ್ಸೆ ಮನೋಹರ್ ಶೆಟ್ಟಿ, ಮೈನಾ ಸದಾನಂದ ಶೆಟ್ಟಿ, ಸದಾಶಯ ಸಂಪಾದಕರಾದ ಕದ್ರಿ ನವನೀತ್ ಶೆಟ್ಟಿ, ತೀರ್ಥಳ್ಳಿ ವಿಶ್ವನಾಥ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ಬಳಿಕ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕೊನೆಗೆ ಹಾಸ್ಯಲಹರಿ, ನೃತ್ಯ ಸಂಗೀತಗಳ ಸಿಂಚನ, ಬಂಟ ಪ್ರತಿಭೆಗಳ ಪ್ರದರ್ಶನ ನಡೆಯಿತು. ಮಾಜಿ ಸಚಿವ ಅಮರನಾಥ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಪ್ರಾಸ್ತಾವನಗೈದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News