ಸ್ವಾಭಿಮಾನಿಗಳಾಗುತ್ತಿರುವ ಮಂಗಳಮುಖಿಯರಿಗೆ ಕಿರುಕುಳ

Update: 2017-02-07 15:04 GMT

ಮಂಗಳೂರು, ಫೆ.7: ಸ್ವಾಭಿಮಾನಿಗಳಾಗಿ ಹಾಗೂ ಸಮಾಜದ ಮುಖ್ಯ ವಾಹಿನಿಯಲ್ಲಿ ಸಭ್ಯ ನಾಗರಿಕರಾಗಿ ಬದುಕಲು ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕೆಲವೊಂದು ಮಂದಿ ವಿವಿಧ ರೀತಿಯ ಕಿರುಕುಳ ನೀಡುವುದರೊಂದಿಗೆ ಬಲವಂತವಾಗಿ ಲೈಂಗಿಕ ಕಾರ್ಯಕರ್ತೆಯರನ್ನಾಗಿ ಅಥವಾ ಭಿಕ್ಷೆ ಬೇಡಿ ದಿನ ದೂಡುವಂತೆ ಮಾಡುತ್ತಿದ್ದಾರೆ ಎಂದು ಪರಿವರ್ತನಾ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷೆ ಚಂದ್ರಕಲಾ ತಿಳಿಸಿದರು

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳಮುಖಿಯರಾಗಿ ಯಾವುದೇ ರೀತಿಯ ಆಸರೆ ಇಲ್ಲದೆ ಬದುಕುತ್ತಿದ್ದ ನಮಗೆ ವಾಯ್ಲೆಟ್ ಪಿರೇರಾ ಉತ್ತಮ ಭವಿಷ್ಯಕ್ಕಾಗಿ, ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದ್ದಾರೆ. 'ಮಾ ಗುರುಗಳು' ಎಂದು ಕರೆಯುವ ಕೆಲವರು ನಮ್ಮನ್ನು 'ಪರಿವರ್ತನಾ ಟ್ರಸ್ಟಿಗೆ ಹೋಗಬಾರದು, ಅದರ ಸದಸ್ಯರಾಗಬಾರದು' ಎಂಬ ಬೆದರಿಕೆಯನ್ನು ಹಾಕಿದ್ದರು. 'ನೀವು ಭಿಕ್ಷೆ ಬೇಡಿ ಅಥವಾ ಲೈಂಗಿಕ ಕಾರ್ಯಕರ್ತೆಯರಾಗಿ ಜೀವನ ನಡೆಸಬೇಕು' ಎಂದು ಬೇದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಸ್ವ ಉದ್ಯೋಗದೊಂದಿಗೆ ಸ್ವಾಭಿಮಾನದೊಂದಿಗೆ ಬದುಕುವ ಆಸೆಯನ್ನು ಹೊಂದಿದ ನಮಗೆ ಕೆಲವು ಮಂಗಳಮುಖಿಯರ ನಾಯಕಿಯರು ಒತ್ತಾಯಪೂರ್ವಕವಾಗಿ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಪ್ರತಿ ತಿಂಗಳು 6,000 ರೂ. ಕೊಡಬೇಕು, ಇಲ್ಲದಿದ್ದರೆ ಮಂಗಳೂರಿನಲ್ಲಿ ಜೀವಿಸಲು ಬಿಡುವುದಿಲ್ಲವೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

'ನಾವು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಅವರಿಗೆ ಯಾಕೆ ಕೊಡಬೇಕು' ಎಂದು ಪ್ರಶ್ನಿಸಿದ ಚಂದ್ರಕಲಾ, ಇತ್ತೀಚೆಗೆ ಸಹಪಾಠಿ ಪ್ರಿಯಾ ಎಂಬವರ ಮೇಲೆ 6,000 ರೂ. ಕೊಡಲು ನಿರಾಕರಿಸಿದ್ದರಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.

ಟ್ರಸ್ಟಿನ ಸಹಾಯದಿಂದ ಸ್ವಾಭಿಮಾನದೊಂದಿಗೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುವ ನಮಗೆ ಕೆಲವೊಂದು ವ್ಯಕ್ತಿಗಳ ಕಿರುಕುಳದಿಂದ ನಡೆದಾಡುವುದು ಕೂಡ ಕಷ್ಟವಾಗಿದೆ. ನಮಗೆ ಸಮಾಜದಲ್ಲಿ, ಆಡಳಿತ ವರ್ಗ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ರಕ್ಷಣೆಯ ಅಗತ್ಯವಿದೆ. ಅಲ್ಲದೆ, ಇಂತಹ ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಮಗೆ ಸರಕಾರದಿಂದ ಬರುವ ಸೌಲಭ್ಯಗಳನ್ನು ಕೊಡಿಸಲು ವಾಯ್ಲೆಟ್ ಪಿರೇರಾ ಪ್ರಯತ್ನಿಸಿದ್ದಾರೆ. ಆಧಾರ್ ಕಾರ್ಡ್ ಮಾಡಿಸಲು ಅವರು ಸಹಕರಿಸಿದ್ದಾರೆ. ಈಗಾಗಲೇ ಟ್ರಸ್ಟ್ ವತಿಯಿಂದ 10 ಮಂಗಳಮುಖಿಯರಿಗೆ ಟೈಲರಿಂಗ್ ಮೆಷಿನ್ ಹಾಗೂ ನಾಲ್ವರಿಗೆ ಬ್ಯೂಟಿಶಿಯನ್‌ಕೋರ್ಸ್ ಮಾಡಿಸಲು ಅರ್ಜಿ ಸಲ್ಲಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್‌ನ ಕೋಶಾಧಿಕಾರಿ ಶ್ರೀನಿಧಿ, ಪ್ರಿಯಾ, ರೇಖಾ, ದಿವ್ಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News