ಮಕ್ಕಳಿಗೆ ಉಡುಗೊರೆ ಜೊತೆಗೆ ಮನೆಗೆ ಹೊರಟಿದ್ದ ತಂದೆ ಕಾರಿನಲ್ಲಿ ಸಜೀವ ದಹನ

Update: 2017-02-09 06:06 GMT

ಹೊಸದಿಲ್ಲಿ, ಫೆ.9: ತನ್ನ ಪ್ರೀತಿಯ ಮಕ್ಕಳಿಗೆ ಉಡುಗೊರೆ ಖರೀದಿಸಿ ಅದನ್ನು ಮಕ್ಕಳಿಗೆ ನೀಡಲೆಂದು ಮನೆಯತ್ತ ತನ್ನ ಕಾರನ್ನು ಚಲಾಯಿಸಿ ಹೋಗುತ್ತಿದ್ದ ಕ್ಯಾಬ್ ಚಾಲಕನೊಬ್ಬ ದಾರಿ ಮಧ್ಯದಲ್ಲಿಯೇ ಬೆಂಕಿ ಅಪಘಾತದಿಂದ ತನ್ನ ಕಾರಿನಲ್ಲಿ ಸಜೀವ ದಹನವಾದ ದಾರುಣ ಘಟನೆ ರಾಜಧಾನಿಯಿಂದ ವರದಿಯಾಗಿದೆ. ಮೃತ ಚಾಲಕನನ್ನು ಸಚಿನ್ ತ್ಯಾಗಿ ಎಂದು ಗುರುತಿಸಲಾಗಿದೆ.

ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ತ್ಯಾಗಿ ತನ್ನ ಪತ್ನಿಗೆ ಫೋನ್ ಮಾಡಿ ಡಿನ್ನರ್ ತಯಾರಿಸಿಡುವಂತೆ ಹೇಳಿದ್ದ. ಕಾರಿನ ಎದುರಿನ ಸೀಟಿನಲ್ಲಿ ತ್ಯಾಗಿ ತನ್ನ ಮಕ್ಕಳಿಗಾಗಿ ಖರೀದಿಸಿದ್ದ ಉಡುಗೊರೆ ಸುಟ್ಟು ಕರಕಲಾಗಿದ್ದು ಅದರ ಅವಶೇಷಗಳು ಪತ್ತೆಯಾಗಿವೆ.

ತನ್ನ ಪತ್ನಿ ಮಮತಾ, ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ತ್ಯಾಗಿ ಮಂಡೋಲಿ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿ ಕಳೆದ ಐದು ವರ್ಷಗಳಿಂದ ವಾಸಿಸುತ್ತಿದ್ದು ಆತನ ತಂದೆ ಕೆಲ ತಿಂಗಳ ಹಿಂದೆ ತೀರಿಕೊಂಡಿದ್ದರು. ಅನಾರೋಗ್ಯದಿಂದಿರುವ ತಾಯಿಯ ಚಿಕಿತ್ಸೆಗೆ ಹಣ ಸಾಲದೆಂದು ಹೆಚ್ಚುವರಿ ಸಮಯ ಕೆಲಸ ಮಾಡುತ್ತಿದ್ದ ತ್ಯಾಗಿ ಒಂದೂವರೆ ವರ್ಷಗಳ ಹಿಂದೆಯಷ್ಟೇ ಪೂರ್ವ ದಿಲ್ಲಿಯ ಶೋರೂಂ ಒಂದರಿಂದ ಹೊಸ ಕಾರು ಖರೀದಿಸಿದ್ದನಲ್ಲದೆ ಅದರ ನಿರ್ವಹಣೆಯನ್ನು ಜತನದಿಂದಲೇ ಮಾಡುತ್ತಿದ್ದ. ಅದರ ನಿರ್ವಹಣೆಗೆಂದೇ ಅರ್ಧ ದಿನ ಆತ ಉಪಯೋಗಿಸುತ್ತಿದ್ದ. ಇಂತಹ ಕಾರು ಸುಟ್ಟು ಹೋಗಿದೆಯೆಂದರೆ ನಂಬಲಸಾಧ್ಯ ಎಂದು ತ್ಯಾಗಿ ನೆರೆಮನೆಯವರು ಹೇಳುತ್ತಾರೆ.

ತ್ಯಾಗಿ ಕುಟುಂಬಕ್ಕೆ ಯಾರ ಮೇಲೂ ಸಂಶಯವಿಲ್ಲದೇ ಇದ್ದರೂ ಕಾರು ಬೆಂಕಿ ಹತ್ತಿಕೊಂಡಾಗ ಇಬ್ಬರು ವ್ಯಕ್ತಿಗಳ ಸಂಶಯಾಸ್ಪದವಾಗಿ ಓಡಿ ಹೋಗುವುದನ್ನು ತಾವು ನೋಡಿದ್ದೇವೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News