ಯುನಿವರ್ಸಲ್ ವಿಮೆನ್ಸ್ ಫೋರಂ ಮಹಿಳಾ ಸಮಾವೇಶ
ಮಂಗಳೂರು, ಫೆ.9: ಯುನಿವರ್ಸಲ್ ವಿಮೆನ್ಸ್ ಫೋರಂ ಇದರ ವತಿಯಿಂದ ಮಹಿಳಾ ಸಮಾವೇಶವು ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಂಡರ್ಸ್ಟ್ಯಾಂಡ್ ಕುರ್ಅನ್ ಅಕಾಡಮಿ ಹೈದರಾಬಾದ್ ಇದರ ಮುಖ್ಯ ತರಬೇತುಗಾರ್ತಿ ಆಯಿಷಾ ಖಮರ್ ರವರು ಉರ್ದು ಭಾಷೆಯಲ್ಲಿ ಶರೀಅತ್, ರಸೂಲ್ (ಸ) ಔರ್ ಔರತ್ ಎಂಬ ವಿಷಯದಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿ ಇಂದು ದೇಶದಲ್ಲಿ ನಡೆಯುತ್ತಿರುವ ಬಹುತೇಕ ದಬ್ಬಾಳಿಕೆಯ ಬಲಿಪಶು ಸ್ತ್ರೀಯೇ ಆಗಿರುತ್ತಾಳೆ. ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ ಮುಂತಾದ ಸ್ತ್ರೀ ಶೋಷಣೆ ಹೆಚ್ಚಾಗಿದೆ.
ಇಸ್ಲಾಮ್ ಇದಕ್ಕೆಲ್ಲಾ ಪರಿಹಾರವನ್ನು ಸೂಚಿಸಿ ಮಹಿಳೆಗೆ ಆಸ್ತಿಯ ಹಕ್ಕು, ಜನ್ಮ ತಾಳುವ ಹಕ್ಕನ್ನು ನೀಡಿತು. ಭೌತಿಕವಾದಕ್ಕೆ ಹೆಚ್ಚಿನ ಮಹತ್ವವನ್ನು ನೀಡದೆ ಸ್ತ್ರೀಯು ಶರೀಅತ್ ಪಾಲನೆ ಮತ್ತು ಪ್ರವಾದಿ(ಸ) ರ ಅನುಸ್ಮರಣೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉನ್ನತ ಸ್ಥಾನಮಾನ, ಗೌರವಕ್ಕೆ ಪಾತ್ರಳಾಗುತ್ತಾಳೆ ಎಂದು ಹೇಳಿದರು.
ಯುನಿವೆರ್ಸಲ್ ವಿಮೆನ್ಸ್ ಫೋರಂ ಉಪಾಧ್ಯಕ್ಷೆ ಸುನೈನಾ ಮಹಿಳೆಯರ ಹೊಣೆಗಾರಿಕೆಗಳು ಎಂಬ ವಿಷಯದಲ್ಲಿ ಕನ್ನಡದಲ್ಲಿ ಮಾತನಾಡಿದರು. ಯುನಿವೆಫ್ ವಿಮೆನ್ಸ್ ಫೋರಂ ಇದರ ಅಧ್ಯಕ್ಷೆ ಫಾತಿಮಾ ಬಿಂತ್ ಅಬ್ಬಾಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಆಯಿಷಾ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಸೌದಾ ಬಿಂತ್ ಮುಹಮ್ಮದ್ ಕಿರಾಅತ್ ಪಠಿಸಿದರು. ನುಝ್ಹತುನ್ನೀಸಾ ಉರ್ದುವಿನಲ್ಲಿ ಅಲ್ಲಾಹನ ಸ್ತುತಿಗೀತೆಯೊಂದನ್ನು ಹಾಡಿದರು. ಆಯುಶತುಲ್ ಮಿಸ್ರಿಯಾ ಕೆ.ಎಂ ಸ್ವಾಗತಿಸಿ ಆಯಿಶಾ ಇಖ್ರಾ ಧನ್ಯವಾದ ಸಮರ್ಪಿಸಿದರು.