×
Ad

ಭಾಷೆಗಳ ಹೆಸರಿನಲ್ಲಿ ಶತ್ರುತ್ವ ಬೇಡ: ಕಂದಾಯ ಸಚಿವ ಇ. ಚಂದ್ರಶೇಖರನ್

Update: 2017-02-09 17:34 IST

ಕಾಸರಗೋಡು, ಫೆ.9: ಕಲ್ಮಶ ಇಲ್ಲದ ಹೊಸ ಸಮಾಜವನ್ನು ಬೆಳೆಸಲು ಸಾಂಸ್ಕೃತಿಕ ಒಕ್ಕೂಟಗಳಿಗೆ ಸಾಧ್ಯವಾಗಬೇಕು. ಭಾಷೆಗಳ ಹೆಸರಿನಲ್ಲಿ ಶತ್ರುತ್ವ ಬೆಳೆಸುವುದು, ಅದರ ಹೆಸರಿನಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವುದು ಕುಠಿಲ ತಂತ್ರಗಳ ಭಾಗವಾಗಿದೆ. ಭಾಷೆಗಳೆಲ್ಲ ಸಹೋದರರು ಎಂದು ಕಂದಾಯ ಸಚಿವ ಇ. ಚಂದ್ರಶೇಖರನ್ ಹೇಳಿದರು.

ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಕೇರಳ ರಾಜ್ಯ ಗ್ರಂಥಾಲಯ ಸಮಿತಿಯ ಆಶ್ರಯದಲ್ಲಿ ಗುರುವಾರ  ನಡೆದ ದಕ್ಷಿಣ ಭಾರತ ಸಾಂಸ್ಕೃತಿಕೋತ್ಸವ ಜನಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾಷೆಗಳು ಹಾಗೂ ಪ್ರದೇಶಗಳ ಹೆಸರಿನಲ್ಲಿ ವಾದ-ವಿವಾದಗಳು ಬೇಡ. ಕಾಸರಗೋಡಿನ ಭಾಷಾ ವೈವಿಧ್ಯತೆ ಈ ಜಗತ್ತನ್ನು ಬೋಧಿಸುತ್ತಿದೆ. ನಾವು ಅನುಭವಿಸಿದ ಸಾಂಸ್ಕೃತಿಕ ಸಂಪನ್ನತೆ ಸಮಾಜದಲ್ಲಿ ಸದಾ ಕಾಲ ಉಳಿಸುವಂತೆ ಮುನ್ನುಡಿ ಬರೆಯಲು ಸಾಧ್ಯವಾಗಬೇಕು. ಓದುವಿಕೆ, ಬರವಣಿಗೆ, ಪುಸ್ತಕಗಳು, ಗ್ರಂಥಾಲಯಗಳು ಕೇರಳ ಸಾಂಸ್ಕೃತಿಕ ಮಹಾತ್ಮೆಯ ಮುನ್ನುಡಿಯಾಗಿವೆ ಎಂದು ಸಚಿವರು ಹೇಳಿದರು.

ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಎಂ. ಮುಕುಂದನ್, ಅಗ್ರಹಾರ ಕೃಷ್ಣಮೂರ್ತಿ, ಕೆ. ಶಿವ ರೆಡ್ಡಿ, ಡಾ. ಎಂ. ರಾಮಸ್ವಾಮಿ, ಡಾ. ಮೀನಾಕ್ಷಿ, ಟಿ. ಡಿ. ರಾಮಕೃಷ್ಣನ್, ಡಾ. ಕೆ. ವಿ. ಕುಞಿಕೃಷ್ಣನ್ ಮೊದಲಾದವರು ಮುಖ್ಯ ಅತಿಥಿಗಳಾಗಿ  ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಾನಪದ ಕ್ಷೇತ್ರ ಪ್ರಶಸ್ತಿ ವಿಜೇತ ಪ್ರೊ. ಎಮ. ಎ. ರಹ್ಮಾನ್ ಅವರನ್ನು ಎಂ. ಮುಕುಂದನ್ ಸನ್ಮಾನಿಸಿದರು. ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ. ಸಿ. ಬಶೀರ್, ಕಾಸರಗೋಡು ನಗರಸಭಾಧ್ಯಕ್ಷೆ ಫಾತಿಮಾ ಇಬ್ರಾಹಿಂ, ಮಾಜಿ ಶಾಸಕ ಸಿ. ಎಚ್. ಕುಞಂಬು, ಕೆ. ಪಿ. ಸತೀಶ್ಚಂದ್ರನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಕೀಂ ಕುನ್ನಿಲ್ ಉಪಸ್ಥಿತರಿದ್ದರು.

ರಾಜ್ಯ ಗ್ರಂಥಾಲಯ ಸಮಿತಿಯ ಕಾರ್ಯದರ್ಶಿ ನ್ಯಾಯವಾದಿ ಪಿ. ಅಪ್ಪುಕುಟ್ಟನ್ ಸ್ವಾಗತಿಸಿದರು. ಜಿಲ್ಲಾ ಗ್ರಂಥಾಲಯ ಸಮಿತಿಯ ಪಿ. ವಿ. ಕೆ. ಪನಯಾಲ್ ವಂದಿಸಿದರು.ಕವಿಗೋಷ್ಠಿಯನ್ನು ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪ್ರಭಾವರ್ಮ ಉದ್ಘಾಟಿಸಿದರು. ಈ ವೇಳೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪ್ರಭಾವರ್ಮ ಅವರನ್ನು ಸನ್ಮಾನಿಸಲಾಯಿತು.

ಸಂಗೀತ ನಾಟಕ ಅಕಾಡೆಮಿ ಕಾರ್ಯದರ್ಶಿ ಎನ್. ರಾಧಾಕೃಷ್ಣನ್ ನಾಯರ್, ಚವರ ಕೆ. ಎಸ್. ಪಿಳ್ಳೆ, ರಾಧಾಕೃಷ್ಣನ್ ಪೆರುಂಬಳ ಮಾತನಾಡಿದರು.

ತಮಿಳಿನ ಕನಲ್ ಮೈಂದನ್, ತೆಲುಗಿನ ಕೆ. ಶಿವರೆಡ್ಡಿ, ಮಲಯಾಳದ ಪಿ. ರಾಮನ್, ಕನ್ನಡದ ಮೋಹನ ಕುಂಟಾರು, ತುಳುವಿನ ಡಾ. ಮೀನಾಕ್ಷಿ ಬ್ಯಾರಿ ಭಾಷೆಯ ಮುಹಮ್ಮದ್ ಬಾಡೂರು, ಕೊಂಕಣಿಯ ಎಡ್ವಾರ್ಡ್ ಲೋಬೋ ತೊಕ್ಕೋಟು, ಮಲಯಾಳದ ದಿವಾಕರ ವಿಷ್ಣುಮಂಗಲ, ಸಿ. ಎಂ. ವಿನಯಚಂದ್ರನ್ ಕವನ ವಾಚಿಸಿದರು. ವಿಚಾರಸಂಕಿರಣವನ್ನು ಸಾರಾ ಜೋಸೆಫ್ ಉದ್ಘಾಟಿಸಿದರು. ಕೆಇಎನ್ ಕುಞಹ್ಮದ್ ವಿಷಯ ಮಂಡಿಸಿದರು. ಇ. ಪಿ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು.

ಎನ್. ಎಸ್. ವಿನೋದ್, ಕೆ. ಇ. ಎನ್. ಕುಞಹ್ಮದ್, ಅಗ್ರಹಾರ ಕೃಷ್ಣಮೂರ್ತಿ, ಟಿ. ಡಿ. ರಾಮಕೃಷ್ಣನ್, ಡಾ. ಎಂ. ರಾಮಸ್ವಾಮಿ, ಕೆ. ಶಿವರೆಡ್ಡಿ, ಡಾ. ಸಿ. ಬಾಲನ್, ನಾರಾಯಣನ್ ಪೆರಿಯ, ಕೆ. ವಿ. ಸುಕುಮಾರನ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವೆಳ್ಳೂರು ಸೆಂಟ್ರಲ್ ಆರ್ಟ್ಸ್‌ನವರಿಂದ ಮಲಯಾಳ ನಾಟಕ ಇಸ್ತಿರಿ ಪ್ರದರ್ಶನಗೊಂಡಿತು.

ಸಾಂಸ್ಕೃತಿಕೋತ್ಸವಕ್ಕೆ ಕಲೆಯೇರಿಸಿದ ಕಲಾವೈವಿಧ್ಯ: 

ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಕಲಾವೈವಿಧ್ಯಗಳೊಂದಿಗೆ ದಕ್ಷಿಣಭಾರತ ಸಂಸ್ಕೃತಿಕೋತ್ಸವ ಜನಸಂಸ್ಕೃತಿ ಕಾರ್ಯಕ್ರಮಕ್ಕೆ ಗುರುವಾರದಂದು ಚಾಲನೆಯಾಗಿದ್ದು, ಫೆ. 11ರ ವರೆಗೆ ವಿವಿಧ ಕಲಾರೂಪಗಳ ಪ್ರದರ್ಶನ ನಡೆಯಲಿದೆ.

ಗುರುವಾರದಂದು ಕೇರಳ ಕಲಾಮಂಡಲದ 13 ವಿದ್ಯಾರ್ಥಿಗಳು ವಿವಿಧ ನೃತ್ಯರೂಪಗಳನ್ನು ಪ್ರಸ್ತುತಪಡಿಸಿದರು. ಗಣಪತಿ ವಂದನೆ ಸಂಗೀತ ನೃತ್ಯರೂಪಕದೊಂದಿಗೆ ಸಾಂಸ್ಕೃತಿಕೋತ್ಸವಕ್ಕೆ ಚಾಲನೆಯಾಯಿತು. ಕೂಚ್ಚುಪ್ಪುಡಿ, ಮೋಹಿನಿಯಾಟ, ಅಷ್ಟಲಕ್ಷ್ಮಿ, ಕೂಚುಪ್ಪುಡಿ ತರಂಗ, ಭರತನಾಟ್ಯ, ಸಮನ್ವಯ ನೃತ್ಯ ಮೊದಲಾಗಿ ಒಂದೂವರೆ ಗಂಟೆಗಳ ಕಾಲ ಸಭಾಂಗನದಲ್ಲಿ ಕಲಾಸ್ವಾದನೆಯನ್ನು ಪಸರಿಸಿತು.

ಕಲಾಮಂಡಲದ ವಿದ್ಯಾರ್ಥಿಗಳಾದ ಅಕ್ಷಯ, ಅಖಲ, ಅಂಜಲಿ, ಅನುಪಮ, ಆಶಿಖ, ಧನೀಶ, ಧನಘ, ಶ್ರೀಲಕ್ಷ್ಮೀ, ಧನುಶ್ರೀ, ಕೃಷ್ಣಸುರೇಸ್, ಪೂಜ, ಪಂಚಮಿ, ಅನಾಮಿಕ ನೃತ್ಯ ಪ್ರದರ್ಶಿಸಿದರು. ಅಧ್ಯಾಪಿಕೆ ಅಂಜಲಿ ಬಾಲನ್ ಅವರ ನೇತೃತ್ವದಲ್ಲಿ ನೃತ್ಯ ಪ್ರದರ್ಶನ ನಡೆಯಿತು. ರಾತ್ರಿ ಕಣ್ಣೂರು ವೆಳ್ಳೂರು ಸೆಂಟ್ರಲ್ ಆರ್ಟ್ಸ್ ಅವರಿಂದ ಇಸ್ತಿರಿ ಮಲಯಾಳ ನಾಟಕ ಪ್ರದರ್ಶನಗೊಂಡಿತು.

ಕಲಾಪ್ರೇಮಿಗಳನ್ನು ಆಕರ್ಷಿಸಿ ಪ್ರವೇಶದ್ವಾರ: 

ದಕ್ಷಿಣ ಭಾರತ ಸಾಂಸ್ಕೃತಿಕೋತ್ಸವ ಜನಸಂಸ್ಕೃತಿ ಕಾರ್ಯಕ್ರಮದ ಪ್ರವೇಶದ್ವಾರ ಕಲಾಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಒಣಗಿದ ಮಡಲು, ಹಸಿ ಮಡಲು, ಮಡಲಿನ ಗರಿಗಳು, ಗೆರಟೆಗಳು ಮೊದಲಾದವುಗಳಿಂದ ತಯಾರಿಸಿದ ಕಲಾಕೃತಿಗಳು ಕಲಾಪ್ರೇಮಿಗಳನ್ನು ಸ್ವಾಗತಿಸುತ್ತಿವೆ. ಸೀಯಾಳದ ಸಿಪ್ಪೆಗೆ ವಿವಿಧ ಬಣ್ಣಗಳನ್ನು ನೀಡಿ ತಯಾರಿಸಿದ ಕಲಾಕೃತಿಗಳು ಸಾಂಸ್ಕೃತಿಕೋತ್ಸವದ ಅಂದ ಹೆಚ್ಚಿಸುತ್ತಿವೆ. ಟೌನ್‌ಹಾಲ್‌ನಲ್ಲಿ ಈ ಪ್ರವೇಶದ್ವಾರವನ್ನು ನಿರ್ಮಿಸಲಾಗಿದೆ.

ಪಿಲಿಕ್ಕೋಡ್ ಏಚ್ಚಿಕೊವ್ವಲ್ ನಿವಾಸಿ ಸುಧಾಕರನ್ ಕರಿಙನಾಯ್ ಅವರ ಕೈಚಳಕದಲ್ಲಿ ಮೂಡಿಬಂದ ಕಲೆಗಳು ಸಾಂಸ್ಕೃತಿಕೋತ್ಸವ ಸಭಾಂಗಣದಲ್ಲಿ ಜೀವತುಂಬಿವೆ. ಕೇರಳದ ಪ್ರಧಾನ ಕೃಷಿಯಾದ ತೆಂಗಿನ ವಿವಿಧ ಉತ್ಪನ್ನಗಳಿಂದ ಈ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ದಕ್ಷಿಣ ಕೇರಳದ ಕಲಾರೂಪವಾದ ತೈಯ್ಯಂ, ಚೆಂಡೆಮೇಳವನ್ನು ಹೋಲುವ ಶಿಲ್ಪಗಳನ್ನು ರಚಿಸಲಾಗಿದೆ. 

ಮುರಿದ ಒಣ ಮಡಲುಗಳನ್ನು ಉಪ್ಪು ಹಾಗೂ ವಿನಾಗಿರಿ ಬೆರೆಸಿದ ನೀರಿನಲ್ಲಿ ಮುಳುಗಿಸಿಟ್ಟ ಬಳಿಕ ಅದಕ್ಕೆ ವಿವಿಧ ರೂಪ ನೀಡಲಾಗುತ್ತದೆ. ಅಗತ್ಯವಿದ್ದರೆ ಪೈಂಟ್ ಬಳಿದು ಇಲ್ಲವೇ ವಾರ್ಣೀಶ್ ಬಳಿದು ಶಿಲ್ಪಗಳ ನಿರ್ಮಾಣವನ್ನು ಪೂರ್ತಿಗೊಳಿಸುತ್ತಾರೆ. ಎರಡು ದಿನಗಳಲ್ಲಿ ಪ್ರವೇಶ ದ್ವಾರದ ಅಲಂಕಾರ ಪೂರ್ತಿಗೊಳಿಸಿರುವುದಾಗಿ ಸುಧಾಕರನ್ ಹೇಳಿದ್ದಾರೆ.

ಸುಧಾಕರನ್ ಅವರ ಕೈಚಳಕದಲ್ಲಿ ರೂಪುಗೊಳ್ಳುವ ಗೆರಟೆಗಳಿಂದ ನಿರ್ಮಿಸಿದ ಶಿಲ್ಪಗಳು ಇಂದು ಶೋಕೆಸ್‌ಗಳಲ್ಲಿ, ಸ್ವಾಗತ ಕೊಠಡಿಗಳಲ್ಲಿ ಸ್ಥಾನ ಪಡೆಯುತ್ತಿವೆ. ಕೈದೀಪ, ಕಪ್, ಸೋಸರ್, ಹೂವುಗಳು, ವಾಝ್, ಗ್ಲೋಬ್, ಮೀನು, ಮೊಸಳೆ, ಆಮೆ, ಪಕ್ಷಿ ಮೊದಲಾದ ಕಲಾಕೃತಿ ಸುಧಾಕರನ್ ತಯಾರಿಸಿದ್ದಾರೆ. ಕಾಸರಗೊಡಿನಲ್ಲಿ ನಡೆದ ಮಲಬಾರ್ ಮಹೋತ್ಸವ, ಕುಮಾರಕಂ ಅಖಿಲಭಾರತ ವಸ್ತುಪ್ರದರ್ಶನ, ಪಿಲಿಕ್ಕೋಡ್ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆದ ಫಾಂ ಶೋ ಮೊದಲಾದ ಹಲವಾರು ಪ್ರದರ್ಶನಗಳಲ್ಲಿ ಸುಧಾಕರನ್ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ಮುಂದಿನ ವಾರ ಎಲ್‌ಬಿಎಸ್ ಇಂಜಿನಿಯರಿಂಗ್ ಕಾಲೆಜಿನ ಯೂನಿಯನ್ ಕಲೋತ್ಸವದಲ್ಲಿ ಪ್ರವೇಶದ್ವಾರ ಅಲಂಕರಿಸಲು ಸುಧಾಕರನ್ ಸಿದ್ಧತೆ ನಡೆಸುತ್ತಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಮದಿಗೆ ವಾಸವಿರುವ ಸುಧಾಕರನ್ ಕುಟುಂಬಕ್ಕೆ ಗೆರಟೆಯಲ್ಲಿ ನಿರ್ಮಿಸುವ ಕಲಾಕೃತಿಗಳು ಇಂದು ಜೀವನಮಾರ್ಗವಾಗಿವೆ. 

ಇಂದಿನ ಕಾರ್ಯಕ್ರಮ: 

ಫೆ. 10ರಂದು ಅಪರಾಹ್ನ 3.30ಕ್ಕೆ ಸೋಲೋ ಡ್ರಾಮ, ಸಂಜೆ 5 ಗಂಟೆಗೆ ಬೀದಿ ನಾಟಕಗಳು ನಡೆಯಲಿವೆ. ಕಾಸರಗೋಡು ಕರುವಕ್ಕೋಡ್ ಜ್ವಾಲೆಯ ಅಂಜ್ವಲೊಟ್ಟಕ್ಕಾರನ್ ಎಂಬ ನಾಟಕ ಹಾಗೂ ಶೆರೀಫ್ ಪಾಂಗೋಡ್ ಅವರ ನಿರ್ದೇಶನದ ಒನ್ನಾಂ ಪಾಠ ನಾಟಕ ಪ್ರದಶ್ನಗೊಳ್ಳಲಿದೆ. ರಾತ್ರಿ 7 ಗಂಟೆಗೆ ಕೇರಳ ಜಾನಪದ ಅಕಾಡೆಮಿಯ ಜಾನಪದ ಕಥೆಗಳನ್ನು ಪ್ರಸ್ತುತಪಡಿಸಲಾಗುವುದು. 11ರಮದು ಅಪರಾಹ್ನ 2 ಗಮಟೆಗೆ ಉಸ್ತಾದ್ ಹಸನ್ ಭಾ ಅವರಿಂದ ಶೆಹನಾಯ್ ವಾದನ, ಸಂಜೆ 6 ಗಂಟೆಗೆ ಬೆನಗ ಬೆಂಗಳೂರು ಅವರಿಂದ ಗೋಕುಲ ನಿರ್ಗಮನ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News