‘ಉರ್ದು’ ಭಾಷೆಗೆ ಬಜೆಟ್‌ನಲ್ಲಿ ವಿಶೇಷ ಸ್ಥಾನ: ನಸೀರ್ ಅಹ್ಮದ್

Update: 2017-02-09 15:02 GMT

ಬೆಂಗಳೂರು, ಫೆ. 9: ಉರ್ದು ಭಾಷೆಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ರಾಜ್ಯದ ಬಜೆಟ್‌ನಲ್ಲಿ ವಿಶೇಷ ಸ್ಥಾನ ಕಲ್ಪಿಸಲಾಗುವುದೆಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಗುರುವಾರ ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಕರ್ನಾಟಕ ಉರ್ದು ಅಕಾಡೆಮಿ, ಐಎಂಎ ಹಾಗೂ ಯೌಮೇ ಉರ್ದು ಸಮಿತಿ ಏರ್ಪಡಿಸಿದ್ದ, ‘ಉರ್ದು ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

  ಉರ್ದು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬೆಂಗಳೂರು ವ್ಯಾಪ್ತಿಯಲ್ಲಿ ನೂತನ ‘ಉರ್ದು ಸಭಾಂಗಣ’ ನಿರ್ಮಾಣ ಮಾಡಲಾಗುವುದು ಎಂದ ಅವರು, ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ ಶಿಕ್ಷಣದಿಂದಲೇ ಉರ್ದು ಕಲಿಸಲು ಚರ್ಚಿಸಲಾಗಿದೆ. ಜೊತೆಗೆ 1ನೆ ತರಗತಿಯಿಂದ ಉರ್ದು ಶಾಲಾ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಗುಣಮಟ್ಟ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ ಎಂದು ನಸೀರ್ ಅಹ್ಮದ್ ತಿಳಿಸಿದರು.

ನಗರಾಭಿವೃದ್ಧಿ ಹಾಗೂ ಹಜ್ ಖಾತೆ ಸಚಿವ ಆರ್.ರೋಶನ್‌ಬೇಗ್ ಮಾತನಾಡಿ, ಪುರಾತನ ಭಾಷೆಗಳಲ್ಲಿ ಉರ್ದು ಒಂದಾಗಿದ್ದು, ಇಂತಹ ಭಾಷೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪೋಷಕರು ತಮ್ಮ ಮಕ್ಕಳಿಗೆ ಮನೆಯಿಂದಲೇ ಉರ್ದು ಶಿಕ್ಷಣ ನೀಡಲು ಮುಂದಾಗಬೇಕೆಂದು ಕರೆ ನೀಡಿದರು.

ಭಾರತ ಬಿಟ್ಟು ಹೊರದೇಶಗಳಲ್ಲೂ ಉರ್ದು ಭಾಷೆಗೆ ಅಧಿಕೃತ ಸ್ಥಾನ ನೀಡಲಾಗಿದೆ ಎಂದ ಅವರು, ಉರ್ದು ಸಾಹಿತ್ಯ ಮತ್ತು ಭಾಷೆ ಅತ್ಯಂತ ಶ್ರೀಮಂತವಾಗಿದೆ. ಈ ಭಾಷೆಯಲ್ಲೂ ವಿಶ್ವದರ್ಜೆಯ ಸಾಧನೆ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಅಲ್ಲದೆ, ಉರ್ದು ಅಕಾಡೆಮಿ ಮತ್ತು ಸರಕಾರ, ಉರ್ದು ಸಂಬಂಧ ವಿವಿಧ ಕಾರ್ಯಾಗಾರ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ರೋಶನ್ ಬೇಗ್ ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಅಝೀಜುಲ್ಲಾ ಬೇಗ್, ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷೆ ಬಲ್ಕೀಸ್ ಬಾನು, ಐಎಂಎ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್, ಯೌಮೇ ಉರ್ದು ಕಮಿಟಿ ಮುಖ್ಯಸ್ಥೆ ಡಾ.ಶಾಹಿಸ್ತಾ ಯೂಸುಫ್ ಸೇರಿ ಪ್ರಮುಖರು ಹಾಜರಿದ್ದರು. ಇದೇ ವೇಳೆ ಉರ್ದು ಸಾಹಿತ್ಯದಲ್ಲಿ ಸಾಧನೆ ಮಾಡಿದ ಪ್ರಮುಖರಿಗೆ ಗೌರವಿಸಲಾಯಿತು.

3 ಗಂಟೆ ನಿಂತ ಶಾಲಾ ಮಕ್ಕಳು

ಉರ್ದು ದಿನಾಚರಣೆ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಬೆಳಗ್ಗೆ 10:30ಕ್ಕೆ ಹಾಜರಾಗಲಿದ್ದಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದ ಮುಂಭಾಗ 50ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪುಷ್ಪಗುಚ್ಚ, ಶಾಲಾ ಬ್ಯಾಂಡ್ ಹಿಡಿದು ನಿಂತಿದ್ದರು. ಆದರೆ, ಸಚಿವರು ಮಧ್ಯಾಹ್ನ 1 ಗಂಟೆಗೆ ಬಂದರು. ಅದುವರೆಗೂ ಮಕ್ಕಳು ಅಲ್ಲಿಯೇ ನಿಂತಿದ್ದು, ಎರಡು ವಿದ್ಯಾರ್ಥಿಗಳಿಗೆ ಜ್ವರವಿದ್ದರೂ, ಶಿಕ್ಷಕರ ಆದೇಶದಂತೆ ಅವರು ಹಾಗೇ ನಿಂತಿದ್ದ ದೃಶ್ಯ ಕಂಡು ಬಂದು.

ಭಾಷಣ ಮೊಟಕುಗೊಳಿಸಿದ ಸಚಿವರು

ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಉರ್ದು ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಆರ್.ರೋಶನ್ ಬೇಗ್ ಭಾಷಣ ಮಾಡುವಾಗ ಶಾಲಾ ಮಕ್ಕಳ ಗಲಾಟೆ ಹೆಚ್ಚಾಗಿದ್ದ ಕಾರಣ, ಅರ್ಧಕ್ಕೇ ಭಾಷಣವನ್ನು ಕೈಬಿಟ್ಟರು.

500ಕ್ಕೂ ಹೆಚ್ಚು ಕುರ್ಚಿಗಳಿದ್ದ ಸಭಾಂಗಣವು ಮಕ್ಕಳಿಂದ ತುಂಬಿತ್ತು. ಆದರೆ, ಶಾಲಾ ಮಕ್ಕಳು ಇವರು ಸಚಿವರು, ಮಾತನಾಡುವಾಗ ಸುಮ್ಮನಿರಬೇಕೆಂದು ಮರೆತು, ಆಟ-ಓಡಾಟದಲ್ಲಿಯೇ ನಿರತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News