ಬಿಜೆಪಿ ಜನರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದೆ: ಯು.ಟಿ.ಖಾದರ್ ಆರೋಪ
ಉಳ್ಳಾಲ,ಫೆ.10: ಬಿಜೆಪಿ ರಾಷ್ಟ್ರೀಯ ಪಕ್ಷವಾದರೂ ಉಳ್ಳಾಲ ನಗರಸಭೆಯ ವಾರ್ಡ್ವೊಂದಕ್ಕೆ ತಮ್ಮ ಪಕ್ಷದಿಂದ ಯೋಗ್ಯ ಅಭ್ಯರ್ಥಿ ಸಿಗದೆ ಪಕ್ಕದ ವಾರ್ಡ್ನಿಂದ ಅಭ್ಯರ್ಥಿ ತಂದು ನಿಲ್ಲಿಸಲಾಗಿದೆ. ತಮ್ಮ ವಾರ್ಡ್ನಲ್ಲಿ ಸೂಕ್ತ ಅಭ್ಯರ್ಥಿ ಮಾಡಲು ಯೋಗ್ಯತೆ ಇಲ್ಲದವರು , ನಾಟಕವನ್ನು ಮಾಡುತ್ತಾ ಇದೀಗ ಚುನಾವಣೆ ಸಮಯದಲ್ಲಿ ಜನರಲ್ಲಿ ಗೊಂದಲದ ವಾತಾವರಣ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಆರೋಪಿಸಿದರು.
ತೊಕ್ಕೊಟ್ಟುವಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ಸಿನ ಇಬ್ಬರು ಅಭ್ಯರ್ಥಿಗಳು ಅನರ್ಹಗೊಂಡರೂ ಜನಸಾಮಾನ್ಯರ ತೊಂದರೆಗಳಿಗೆ ಸ್ಪಂಧಿಸುತ್ತಾ ಈಗಲೂ ವಿವಿಧ ಇಲಾಖೆಗಳಿಂದ ಸಿಗಬೇಕಾದ ಸವಲತ್ತುಗಳನ್ನು ಒದಗಿಸುತ್ತಲೇ ಬಂದಿದ್ದಾರೆ. ಅದೇ ಬಿಜೆಪಿಯ ಅಭ್ಯರ್ಥಿಗಳಿಗೆ ಅವರ ವಾರ್ಡು ಯಾವುದು ಅನ್ನುವುದೇ ಸರಿಯಾಗಿ ಗೊತ್ತಿಲ್ಲ. ಇನ್ನು ಜನರ ಸಮಸ್ಯೆಗೆ ಸ್ಪಂಧಿಸುವುದು ಹೇಗೆ ಎಂದರು.
ಉಳ್ಳಾಲ ನಗರಸಭೆಯ ಎರಡು ವಾರ್ಡುಗಳ ಚುನಾವಣೆಯಲ್ಲಿ ಪ್ರತಿಪಕ್ಷದ ಅಭ್ಯರ್ಥಿಗಳು ಸೋಲುವುದು ಖಚಿತವಾಗಿದೆ. ಇದರಿಂದ ಬೆದರಿ ಮತದಾರರ ಪಟ್ಟಿಯನ್ನು ಅಳಿಸಿರುವ ನಾಟಕವನ್ನು ಮಾಡುತ್ತಿದ್ದಾರೆ. ಉಳ್ಳಾಲ ನಗರಸಭೆಯ ಎರಡು ವಾರ್ಡುಗಳ ಹೆಸರನ್ನು ಅಳಿಸಲಾಗಿದ್ದರೆ ಚುನಾವಣಾ ಅಧಿಕಾರಿ ಅಥವಾ ಜಿಲ್ಲಾಧಿಕಾರಿಗಳಿಗೆ ದೂರು ಕೊಡಬೇಕು. ಅದನ್ನು ಹೊರತುಪಡಿಸಿ ಜನರನ್ನು ಗೊಂದಲದಲ್ಲಿ ಸಿಲುಕಿಸುವುದು ಸರಿಯಲ್ಲ. ರಾಷ್ಟ್ರೀಯ ಪಕ್ಷವಾಗಿದ್ದರೂ ವಾರ್ಡಿನಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲ. ಬೇರೆ ವಾರ್ಡಿನ ಸದಸ್ಯನನ್ನು ವಾರ್ಡ್ ಸಂಖ್ಯೆ 26ರಲ್ಲಿ ನಿಲ್ಲಿಸಲಾಗಿದೆ. ಅವರಲ್ಲಿಯೇ ಗೆಲ್ಲುವ ಧೈರ್ಯವಿಲ್ಲದಿರುವಾಗ ಮತದಾರರನ್ನು ಪಟ್ಟಿಯಿಂದ ಅಳಿಸುವ ಪ್ರಮೇಯ ಯಾಕೆ ಬರಬೇಕು ಎಂದು ಪ್ರಶ್ನಿಸಿದ ಅವರು ಅಳಿಸಲಾದ ಪಟ್ಟಿಯಲ್ಲಿ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ಸಿನ ಮತದಾರರು ಇದ್ದಾರೆ ಎಂದು ಹೇಳಿದರು.
ಟೋಲ್ ಸಂಗ್ರಹದ ವಿರುದ್ದದ ಹೋರಾಟಕ್ಕೆ ಸಂಪೂರ್ಣ ಬೆಂಬಲ
ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯನ್ನು ಪೂರ್ಣಗೊಳಿಸದೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ನವಯುಗ ಕಂಪೆನಿಯ ವಿರುದ್ಧ ನಡೆಯುವ ಹೋರಾಟಗಳಿಗೆ ಸರ್ವ ರೀತಿಯ ಬೆಂಬಲವಿದೆ. ನವಯುಗ ಕಂಪೆನಿಗೆ ಕೇಂದ್ರ ಸರಕಾರ ನೀಡಿರುವ ಅನುಮತಿ ಪತ್ರವನ್ನು ರದ್ದುಗೊಳಿಸಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ರಾಜ್ಯ ಲೋಕೋಪಯೋಗಿ ಸಚಿವರಿಗೆ ಪತ್ರ ಬರೆಯಲಾಗಿದೆ. ಜಿಲ್ಲೆಯ ಸಂಸದರು ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಕೇಂದ್ರದ ಸಚಿವರಿಗೆ ಪತ್ರ ಬರೆಯಬೇಕಿದೆ ಎಂದ ಅವರು ಪ್ರತಿಯೊಂದಕ್ಕೂ ಡಿಜಿಟಲ್ ಮಾತನಾಡುವ ಕೇಂದ್ರದ ಮಂತ್ರಿಗಳು ಹೆದ್ದಾರಿ ಕಾಮಗಾರಿಯ ಕುರಿತು ಗೂಗಲ್ನಲ್ಲಿ ಹುಡುಕಿ ಮಾಹಿತಿ ಪಡೆದು ಬಳಿಕ ಅನುಮತಿಪತ್ರ ನೀಡಬಹುದಿತ್ತು ಎಂದು ಲೇವಡಿಯಾಡಿದ ಸಚಿವ ಖಾದರ್ ಟೋಲ್ ಪ್ಲಾಝಾದಲ್ಲಿ ಬೆಳಗ್ಗಿನ ಅವಧಿಯಲ್ಲಿ ಮಹಿಳೆಯರೇ ಕೌಂಟರಿನಲ್ಲಿ ಕುಳಿತು ಸುಂಕ ಪಡೆಯಬೇಕು. ಈ ಕುರಿತು ನೀತಿ ಜಾರಿಗೆ ಬರುವಂತೆ ಸರಕಾರದ ಗಮನ ಸೆಳೆದಿದ್ದೇನೆ. ರಾತ್ರಿ ಸುಂಕ ವಸೂಲಿ ನಡೆಸುವ ಪುರುಷರು ಕ್ರಿಮಿನಲ್ ಹಿನ್ನೆಲೆಯವರಾಗಿರಬಾರದು ಅನ್ನುವ ಕಾನೂನು ಹೊರಡಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ರೆಹ್ಮಾನ್ ಕೋಡಿಜಾಲ್, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಉಳ್ಳಾಲ ನಗರಸಭೆ ಅಧ್ಯಕ್ಷ ಕುಂಞಿಮೋನು, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಯೂತ್ ಕಾಂಗ್ರೆಸ್ ಅಧ್ಯಕ್ಷ ನಝರ್, ನಗರಸಭೆ ಸದಸ್ಯರಾದ ಇಸ್ಮಾಯೀಲ್, ಮುಸ್ತಾಫ, ಮುಖಂಡರುಗಳಾದ ರಫೀಕ್ ಅಂಬ್ಲಮೊಗರು, ಮೂಡ ಸಲಹ ಸಮಿತಿ ಸದಸ್ಯ ಮುರಳಿ, ರಿಚಾಡ್ರ್ , ಫೈರೋರ್, ಮೊದಲಾದವರು ಇದ್ದರು.
ಬರಪೀಡಿತ ತಾಲೂಕುಗಳಾಗಿ ಮಂಗಳೂರು ಬಂಟ್ವಾಳ ಘೋಷಣೆ
ಮಂಗಳೂರು ಮತ್ತು ಬಂಟ್ವಾಳ ತಾಲೂಕು ಬರಪೀಡಿತ ಪ್ರದೇಶ ಎಂದು ಇತಿಹಾಸದಲ್ಲಿ ಪ್ರಥಮವಾಗಿ ಘೋಷಿಸಲಾಗಿದೆ. ಇದರಿಂದ ಕುಡಿಯುವ ನೀರಿನ ಯೋಜನೆಗೆ ಹೆಚ್ಚುವರಿ ಅನುದಾನ, ಕೆರೆಸಂಜೀವಿನಿ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ಅನುದಾನ, ಎನ್ ಆರ್ ಇಜಿಎ ನಲ್ಲಿ 100 ದಿನಗಳ ಕೆಲಸವನ್ನು 150 ದಿನಗಳ ಕೆಲಸಕ್ಕೆ ವಿಸ್ತರಣೆ, ಗೋಶಾಲೆಗಳ ತೆರವು, ಗೋವು ಸಾಕಾಣಿಕೆಗೆ ಮೇವು ಯೋಜನೆಗಳು ಎರಡು ತಾಲೂಕುಗಳಿಗೆ ಬಿಡುಗಡೆಯಾಗಲಿದೆ. ಇದರ ಸದುಪಯೋಗವನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳು, ಜಿಲ್ಲಾ ಪಂಚಾಯಿತಿ ಸದಸ್ಯರುಗಳು ಪಡೆದುಕೊಂಡು ಅವರವರ ಗ್ರಾಮಕ್ಕೆ ಒದಗಿಸುವಂತೆ ಶ್ರಮವಹಿಸಬೇಕಿದೆ ಎಂದರು.